ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣದ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ 'ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವಿಮಾನ ನಿಲ್ದಾಣ' ಎಂಬುದಾಗಿ ಹೆಸರಿಡಲಾಗುತ್ತಿದೆ. ಜೊತೆಗೆ ಈ ವಿಮಾನ ನಿಲ್ದಾಣಕ್ಕಾಗಿ ಬಜೆಟ್ನಲ್ಲಿ 101 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹಣಕಾಸು ಸಚಿವ ಸುರೇಶ್ ಖನ್ನಾ ಸೋಮವಾರ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಈ ವಿಮಾನ ನಿಲ್ದಾಣವನ್ನು ಮುಂದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡುವ ಗುರಿಯನ್ನೂ ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಹೀಗೆ ಶ್ರೀರಾಮನ ಹೆಸರನ್ನು ಹೈಜಾಕ್ ಮಾಡೋಕೆ ಉತ್ತರ ಪ್ರದೇಶ ಸರ್ಕಾರ ಸರ್ಕಸ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನು, ನೋಯ್ಡಾದಲ್ಲಿರುವ ಜೆವರ್ ವಿಮಾನ ನಿಲ್ದಾಣದ ವಾಯುನೆಲೆಗಳನ್ನೂ ಹೆಚ್ಚಿಸಲು ಉದ್ದೇಶಿಲಾಗಿದೆ. ಹೀಗಾಗಿ ಈ ವಾಯುನೆಲೆಗಳ ಸಂಖ್ಯೆಯನ್ನು 2ರಿಂದ 6ಕ್ಕೆ ಹೆಚ್ಚಿಸಲು 2000 ಕೋಟಿಯನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ.
ಇದನ್ನೂ ಓದಿ: Petrol Price: 2 ದಿನಗಳ ಬಳಿಕ ಇಂದು ಮತ್ತೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ
2021-22ರ ಸಾಲಿನ ಈ ಬಜೆಟ್ ಅನ್ನು ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮಂಡಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಅಲಿಘಢ, ಮೊರಾದಾಬಾದ್, ಮೀರತ್ ನಗರಗಳಿಗೂ ಶೀಘ್ರದಲ್ಲೇ ವಿಮಾನ ಯಾನ ಸೇವೆಯನ್ನು ಕಲ್ಪಿಸಲಾಗುವುದು' ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ಏನೆಲ್ಲ ಇದೆ?:
ಈ ಬಜೆಟ್ನಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ವಿಶೇಷ ಪ್ರದೇಶ ಕಾರ್ಯಕ್ರಮದಡಿಯಲ್ಲಿ ಪೂರ್ವಾಂಚಲದ ವಿಶೇಷ ಯೋಜನೆಗಾಗಿ 300 ಕೋಟಿ ರೂ. ಹಾಗೂ ಬುಂದೇಲ್ಖಂಡದ ವಿಶೇಷ ಯೋಜನೆಗಾಗಿ 210 ಕೋಟಿಯನ್ನು ಮೀಸಲಿಡುವುದಾಗಿ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನು ಮೀರತ್ ಅನ್ನು ಅಲಹಾಬಾದ್ಗೆ ಸಂಪರ್ಕಿಸುವ ಗಂಗಾ ಎಕ್ಸ್ಪ್ರೆಸ್ ವೇ ಯೋಜನೆಯ ಭೂಸ್ವಾಧೀನಕ್ಕಾಗಿ 7,200 ಕೋಟಿ ರೂ. ಹಾಗೂ ನಿರ್ಮಾಣ ಕಾರ್ಯಗಳಿಗೆ 489 ಕೋಟಿ ರೂ. ಮೀಸಲಿಡಲಾಗಿದೆ.
ಲೋಕೋಪಯೋಗಿ ಇಲಾಖೆಯಡಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ 12,441 ಕೋಟಿ ರೂ. ಮತ್ತು ರಸ್ತೆ ಮತ್ತು ಸೇತುವೆಗಳ ನಿರ್ವಹಣೆಗಾಗಿ 4,135 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೆ, ರಾಜ್ಯದ ಗ್ರಾಮಗಳನ್ನು ಲಿಂಕ್ ರೋಡ್ಗೆ ಸಂಪರ್ಕಿಸಲು 695 ಕೋಟಿ ರೂ. ಮೀಸಲಿಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ