ಶಾಂಘೈ(ಆ. 30): ಕಾಶ್ಮೀರದಲ್ಲಿ ವಿಭಜಕ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುವ ಚೀನಾ ದೇಶ ತನ್ನ ದೇಶದೊಳಗಿನ ವಿಭಜಕ ಶಕ್ತಿ ನಿಗ್ರಹಿಸಲು ಸಕಲ ತಂತ್ರ-ಶಕ್ತಿ ಪ್ರಯೋಗಿಸುವುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು ಹಾಗೂ ಸರ್ಕಾರ ನಿಯಂತ್ರಿತ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಟಿಬೆಟ್ನಲ್ಲಿ ವಿಭಜಕ ಶಕ್ತಿಯ ವಿರುದ್ಧ ಹೋರಾಡಲು ಅಭೇದ್ಯ ಕೋಟೆ ನಿರ್ಮಿಸುವ ಬಗ್ಗೆ ಹಾಗೂ ಧಾರ್ಮಿಕತೆ ಸುಧಾರಣೆ ಆಗುವ ಬಗ್ಗೆ ಮಾಡಿದ್ದಾರೆ.
ಟಿಬೆಟ್ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು, ರಾಷ್ಟ್ರೀಯ ಏಕತೆ ರಕ್ಷಿಸಲು ಹಾಗೂ ವಿಭಜಕ ಶಕ್ತಿಯ ವಿರುದ್ಧದ ಹೋರಾಟದಲ್ಲಿ ಜನರಿಗೆ ಅರಿವು ಮೂಡಿಸಲು ಚೀನಾ ಅಭೇದ್ಯ ಕೋಟೆ ನಿರ್ಮಿಸಬೇಕು ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ.
ಟಿಬೆಟ್ನ ಬೌದ್ಧ ತತ್ವವು ಚೀನಾದ ಪರಿಸ್ಥಿತಿಗೆ ಮತ್ತು ಸಮಾಜವಾದಕ್ಕೆ ತೆರೆದುಕೊಳ್ಳುವ ಅಗತ್ಯತೆ ಇದೆ. ಟಿಬೆಟ್ನ ಶಾಲೆಗಳಲ್ಲಿ ರಾಜಕೀಯ ಮತ್ತು ತಾತ್ವಿಕ ಶಿಕ್ಷಣವನ್ನು ಬಲಗೊಳಿಸಬೇಕು. ಚೀನಾವನ್ನು ಆಳವಾಗಿ ಪ್ರೀತಿಸುವ ಭಾವನೆಯನ್ನು ಪ್ರತಿಯೊಬ್ಬ ಯುವಜನರಲ್ಲೂ ಬಿತ್ತಬೇಕು. ಒಗ್ಗಟ್ಟಾಗಿರುವ, ಸಮೃದ್ಧವಾಗಿರುವ, ನಾಗರಿಕವಾಗಿರುವ, ಸೌಹಾರ್ದಯುತವಾಗಿರುವ ಹಾಗೂ ಸುಂದರ ಆಧುನಿಕ ಟಿಬೆಟ್ ತಯಾರಾಗಬೇಕು ಎಂದು ಈ ವೇಳೆ ಚೀನಾ ಅಧ್ಯಕ್ಷರು ಕರೆ ನೀಡಿದ್ದಾರೆ.
ಇದನ್ನೂ ಓದಿ: Mann Ki Baat - ಭಾರತೀಯ ಬೊಂಬೆ ಮತ್ತು ಕಂಪ್ಯೂಟರ್ ಗೇಮ್ಗಳ ಉದ್ಯಮ ಬೆಳೆಸಿ: ಮನ್ ಕೀ ಬಾತ್ನಲ್ಲಿ ಪ್ರಧಾನಿ ಕರೆ
ಚೀನಾ ದೇಶ 1950ರಲ್ಲಿ ಟಿಬೆಟ್ ಅನ್ನು ಆಕ್ರಮಿಸಿಕೊಂಡಿತು. ಅಲ್ಲಿ ಪ್ರತಿರೋಧ ತೋರಿದವರನ್ನು ಹತ್ತಿಕ್ಕಲಾಯಿತು. ದಲೈ ಲಾಮ ತಪ್ಪಿಸಿಕೊಂಡು ಭಾರತದ ಆಶ್ರಯ ಪಡೆದರು. ಚೀನಾದ ಬೇರೆ ಭಾಗದ ಜನರನ್ನು ಟಿಬೆಟ್ಗೆ ಕಳುಹಿಸಿ ಆ ಪ್ರದೇಶವನ್ನು ತನ್ನ ನಿಯಂತ್ರಣದಲ್ಲಿರಿಸಿದೆ. ಈಗ ಭಾರತದ ಅರುಣಾಚಲಪ್ರದೇಶ, ಲಡಾಖ್, ಸಿಕ್ಕಿಂ ಮೊದಲಾದ ಕೆಲ ಪ್ರದೇಶಗಳು ಟಿಬೆಟ್ನ ಭಾಗವೆಂದೇ ಚೀನಾ ಪರಿಗಣಿಸಿದೆ. ಅದಕ್ಕಾಗೇ ಭಾರತದ ಮೇಲೆ ಪದೇಪದೇ ಕಿತಾಪತಿ ನಡೆಸುತ್ತದೆ ಎಂಬುದು ಕೆಲ ಚೀನಾ ವ್ಯವಹಾರಗಳ ತಜ್ಞರ ಅನಿಸಿಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ