ನವ ದೆಹಲಿ (ಅಕ್ಟೋಬರ್ 15); ಭಾರತೀಯ ಸಮಾಜವನ್ನು ವಿಭಜಿಸುವ ಕೆಲಸದಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು(ಆರ್ಎಸ್ಎಸ್) ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಅತ್ಯುನ್ನತ ಸಿಖ್ ಸಂಸ್ಥಾನದ ಪ್ರಧಾನ ಅರ್ಚಕ ಅಕಲ್ ತಖ್ತ್ ಗಿಯಾನಿ ಹರ್ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಎಸ್ಎಸ್ ನಾಯಕರು ಬೆಂಬಲ ಸೂಚಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದ ಅವರು, “ಆರ್ಎಸ್ಎಸ್ ಅನ್ನು ನಿಷೇಧಿಸಬೇಕು. ರಾಷ್ಟ್ರೀಯ ಐಕ್ಯತೆಯಲ್ಲಿ ಆರ್ಎಸ್ಎಸ್ ನಾಯಕರಿಗೆ ಒಮ್ಮತ ಇದ್ದಂತೆ ಕಾಣುತ್ತಿಲ್ಲ. ಇವರ ಹೇಳಿಕೆಗಳೂ ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ದೇಶದಲ್ಲಿ ವಿಭಜಿಸುವ ಮತ್ತು ಐಕ್ಯತೆಯನ್ನು ನಾಶಪಡಿಸುವ ಹೊಸ ನೀತಿಯಂತೆ ಭಾಸವಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಹಿಂದೆ ತಮ್ಮ ಭಾಷಣದಲ್ಲಿ “ಭಾರತ ಹಿಂದೂ ರಾಷ್ಟ್ರ” ಎಂದು ಉಲ್ಲೇಖಿಸಿದ್ದರು. ಈ ಹೇಳಿಕೆ ರಾಷ್ಟ್ರದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ತಮ್ಮ ಭಾಷದಲ್ಲಿ ಮೋಹನ್ ಭಾಗವತ್, ”ರಾಷ್ಟ್ರದ ಗುರುತು ಹಾಗೂ ನಮ್ಮೆಲ್ಲರ ಸಾಮಾಜಿಕ ಗುರುತಿನ ಬಗ್ಗೆ ದೇಶದ ಸ್ವಭಾವದ ಬಗ್ಗೆ ಆರ್ಎಸ್ಎಸ್ ಸಂಘಟನೆಗೆ ಸ್ಪಷ್ಟ ದೃಷ್ಟಿಕೋನ ಇದೆ. ಈ ದೇಶ ಹಿಂದೂ ರಾಷ್ಟ್ರ, ಹಿಂದೂಸ್ತಾನ ಎಂಬ ಕುರಿತು ಹೆಮ್ಮೆ ಇದೆ ” ಎಂದು ತಿಳಿಸಿದ್ದರು.
ಮೋಹನ್ ಭಾಗವತ್ ಅವರ ಈ ಹೇಳಿಕೆಯನ್ನು ಗಿಯಾನಿ ಹರ್ಪ್ರೀತ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ನಾಯಕರು ವಿರೋಧಿಸಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್ಜಿಪಿಸಿ) ಅಧ್ಯಕ್ಷ ಗೋಬಿಂದ್ ಸಿಂಗ್ ಲಾಂಗೋವಾಲ್.
ಮೋಹನ್ ಭಾಗವತ್ ಹೇಳಿಕೆಯನ್ನು ಟೀಕಿಸಿರುವ ಗೋಬಿಂದ್ ಸಿಂಗ್ ಲಾಂಗೋವಾಲ್, “ಸಂವಿಧಾನವು ದೇಶದ ಎಲ್ಲಾ ನಾಗರೀಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆಗಾದ್ಯೂ ಮೋಹನ್ ಭಾಗವತ್ ಉದ್ದೇಶಪೂರ್ವಕವಾಗಿ ”ಹಿಂದೂ ರಾಷ್ಟ್ರ” ಎಂದು ಉಲ್ಲೇಖಿಸಿರುವುದು ಆಕ್ಷೇಪಾರ್ಹ” ಎಂದು ಕಿಡಿಕಾರಿದ್ದರು.
ಇದನ್ನೂ ಓದಿ : ಜೆಎನ್ಯು-ಪ್ರೆಸಿಡೆನ್ಸಿಗಳಲ್ಲಿ ಕನ್ಹಯ್ಯ ಕುಮಾರ್ ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದ ಅಭಿಜಿತ್ ಸಾಧನೆಯ ಹಾದಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ