ಕೊರೋನಾ ಹೊಡೆತಕ್ಕೆ ಈಡೀ ದೇಶವೇ ತತ್ತರಿಸಿ ಹೊಗಿದೆ. ಒಂದೆಡೆ ಆಕ್ಸಿಜನ್ ಸಮಸ್ಯೆಯಾದರೆ ಇನ್ನೊಂದೆಡೆ ಪ್ಲಾಸ್ಮಾ ಕೊರತೆ. ಇಂತಹ ಸಂದರ್ಭದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಕೂಡ ಆಸರೆಯಾಗಬಲ್ಲುದು ಎನ್ನುವಂತೆ ಕೋವಿಡ್ 19 ರೋಗಿಗಳನ್ನು ಬದುಕಿಸಲು ಅವರ ಕುಟುಂಬದವರು, ಸ್ನೇಹಿತರು ಒಂದಿಲ್ಲೊಂದು ಮೂಲಗಳನ್ನು ಹುಡುಕುತ್ತಲೇ ಇದ್ದಾರೆ. ಇದೇ ರೀತಿಯಲ್ಲಿ ಕೋವಿಡ್ 19 ಪಾಸಿಟಿವ್ ಸ್ನೇಹಿತೆಗೋಸ್ಕರ ಟಿಂಡರ್ ಡೇಟಿಂಗ್ ಆ್ಯಪ್ನಲ್ಲಿ ಪ್ಲಾಸ್ಮಾ ದಾನಿಯನ್ನು ಹುಡುಕಿರುವ ಮಹಿಳೆಯೊಬ್ಬರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಹಿನಿ ಚಟ್ಟೋಪಾಧ್ಯಾಯ ಎನ್ನುವ ಮಹಿಳೆ ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, 'ನಾವು ನಮ್ಮ ಸ್ನೇಹಿತೆಗೆ ಟಿಂಡರ್ ಆ್ಯಪ್ ಮೂಲಕ ಪ್ಲಾಸ್ಮಾ ಮ್ಯಾಚ್ ಅನ್ನು ಕಂಡುಕೊಂಡೆವು. ಡೇಟಿಂಗ್ ಆ್ಯಪ್ 1, ಸರ್ಕಾರ 0' ಎಂದು ರೇಟಿಂಗ್ ಮಾಡುವ ಮೂಲಕ ಸರ್ಕಾರದ ವೈಫಲ್ಯವನ್ನು ಟ್ವೀಟ್ ಮೂಲಕ ವ್ಯಂಗ್ಯವಾಗಿ ಹೊರಹಾಕಿದ್ದಾರೆ.
ಚಟ್ಟೋಪಾಧ್ಯಾಯ ಅವರ 30 ವರ್ಷದ ಸ್ನೇಹಿತೆಗೆ ಕೋವಿಡ್ 19 ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮತ್ತು ಪೊಲೀಸ್ ಸಹಾಯವಾಣಿ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಪ್ಲಾಸ್ಮಾ ದಾನಿಗಳನ್ನು ಹುಡುಕುತ್ತಿದ್ದರು. ಆದರೆ ಈ ಯಾವುದೇ ಪ್ರಯತ್ನಗಳು ಫಲ ನೀಡಲಿಲ್ಲ. ಕಡೆಗೆ ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ದಾನಿ ಸಿಕ್ಕಿದ್ದಾರೆ. ಕೋವಿಡ್ ಪಾಸಿಟಿವ್ ಸ್ನೇಹಿತೆ ಟಿಂಡರ್ ಬಯೋದಲ್ಲಿ ತನ್ನ ಅಗತ್ಯತೆಗಳ ಬಗ್ಗೆ ಹಂಚಿಕೊಂಡಾಗ ಆಕೆಗೆ ಮತ್ತು ಚಟ್ಟೋಪಾಧ್ಯಾಯ ಅವರಿಗೆ ಕೋವಿಡ್ ಪಾಸಿಟಿವ್ ಆಗಿ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಅವರು ಕೂಡ ತಮ್ಮ ಬಯೋದಲ್ಲಿ ಅದನ್ನೇ ಬರೆದುಕೊಂಡಿದ್ದರು. ನಂತರ ಅವರ ಮೂಲಕ ಪ್ಲಾಸ್ಮಾವನ್ನು ಹೊಂದಿಸಲು ಸಾಧ್ಯವಾಯಿತು.
ಜೊತೆಗೆ ಟಿಂಡರ್ನಲ್ಲಿ ಕೆಲವು ಬಳಕೆದಾರರು ಪ್ಲಾಸ್ಮಾ ದಾನ ಮಾಡುವುದರ ಬಗ್ಗೆ ತಮ್ಮ ಬಯೋದಲ್ಲಿ ಬರೆದುಕೊಂಡಿದ್ದಾರೆ ಎಂದು ಟ್ವಿಟ್ಟರ್ ಬಳಕೆದಾರರು ತಿಳಿಸಿದ್ದಾರೆ.
ಟಿಂಡರ್ನಲ್ಲಿ ಪ್ಲಾಸ್ಮಾ ದಾನಿಗಳನ್ನು ಹುಡುಕುವಲ್ಲಿ ಚಟ್ಟೋಪಾಧ್ಯಾಯರು ಯಶಸ್ವಿಯಾಗಿದ್ದಾರೆ. ಆದರೆ ಎಲ್ಲರಿಗೂ ಅದೇ ಫಲಿತಾಂಶ ಬಂದಿಲ್ಲ. ದೆಹಲಿ, ಕರ್ನಾಟಕ, ಮಹಾರಾಷ್ಟ್ರದಂತಹ ಹಲವಾರು ಸ್ಥಳಗಳಲ್ಲಿ ರೋಗಿಗಳು ಪ್ಲಾಸ್ಮಾ ಕೊರತೆಯನ್ನು ಎದುರಿಸುತ್ತಿದ್ದಾರೆ. ಕಳೆದ ವಾರ ಪ್ಲಾಸ್ಮಾ ದಾನಿಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಸಂದೇಶಗಳು ಓಡಾಡುತ್ತಿವೆ. ಕಳೆದ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ಲಾಸ್ಮಾ ಕೊರತೆಯ ಸಮಸ್ಯೆ ನಿವಾರಣೆಯ ಬಗ್ಗೆ ಮಾತನಾಡುತ್ತಾ ಪ್ಲಾಸ್ಮಾದ ಪರಿಣಾಮಕಾರಿತ್ವವು ಅದರಲ್ಲಿರುವ ಪ್ರತಿಕಾಯಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು. ಬಹಳ ಹಿಂದೆಯೇ ಕೋವಿಡ್ 19 ನಿಂದ ಚೇತರಿಸಿಕೊಂಡ ವ್ಯಕ್ತಿಯಿಂದ ತೆಗೆದ ಪ್ಲಾಸ್ಮಾ ಪರಿಣಾಮಕಾರಿಯಾಗುವುದಿಲ್ಲ ಎಂದು ಕೇಜ್ರಿವಾಲ್ ಅವರು ಹೇಳಿದ್ದಾರೆ.
ಪ್ಲಾಸ್ಮಾ ಥೆರಪಿಯಲ್ಲಿ ಕೋವಿಡ್ 19 ನಿಂದ ಗುಣಮುಖರಾದ ವ್ಯಕ್ತಿಯಿಂದ ತೆಗೆದುಕೊಳ್ಳುವ ಪ್ಲಾಸ್ಮಾವು ಪ್ರಸ್ತುತ ಕೊವಿಡ್ 19 ಸೋಂಕಿತರಿಗೆ ಜೀವದಾನವನ್ನು ನೀಡುತ್ತದೆ. ಪ್ರತಿಕಾಯಗಳು ಅಧಿಕವಾಗಿರುವ ಪ್ಲಾಸ್ಮಾ ಕೋವಿಡ್ ಸೋಂಕಿತರನ್ನು ಗುಣಪಡಿಸಲು ನೆರವಾಗುತ್ತದೆ.
ಇದರ ನಡುವೆ ದೇಶದಲ್ಲಿ 2,95,041 ಹೊಸ ಪ್ರಕರಣಗಳೂ ದಾಖಲಾಗಿದೆ. ಸದ್ಯದ ಮಟ್ಟಿಗೆ ಕೋವಿಡ್ 19 ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದೇ ದಿನದಲ್ಲಿ 2023 ಸಾವಿನ ಪ್ರಮಾಣ ದಾಖಲಾಗಿದೆ. ಸಕ್ರಿಯ ಪ್ರಕರಣ 1.26 ಲಕ್ಷ ಏರಿಕೆಯಾಗಿದ್ದು, 1.67 ಲಕ್ಷ ಜನರು ಗುಣಮುಖರಾಗಿರುವ ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ