MAshok KumarMAshok Kumar
|
news18-kannada Updated:September 11, 2020, 7:02 PM IST
ಕಂಗನಾ ರನೌತ್, ಸೋನಿಯಾ ಗಾಂಧಿ.
ಮುಂಬೈ (ಸೆಪ್ಟೆಂಬರ್ 11); ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ನಡುವಿನ ಭಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಒಂದೆಡೆ ನಟಿ ಕಂಗನಾ ಇಡೀ ಮುಂಬೈ ಮಹಾನಗರವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಪೇಚಿಗೆ ಸಿಲುಕಿದ್ದರೆ, ಮತ್ತೊಂದೆಡೆ ನಟಿಯ ವಿರುದ್ಧ ಕಾನೂನು ಸಮರ ಸಾರಿರುವ ಮುಂಬೈ ಮಹಾನಗರ ಪಾಲಿಕೆ, ಕಂಗನಾ ಅವರ ಕಚೇರಿಯನ್ನು ಕಾನೂನು ಬಾಹೀರವಾಗಿ ನಿರ್ಮಿಸಲಾಗಿದೆ ಎಂದು ಕಳೆದ ಬುಧವಾರ ಅದನ್ನು ನೆಲಸಮ ಮಾಡಿತ್ತು. ಮಹಾರಾಷ್ಟ್ರದಲ್ಲಿ ಇಷ್ಟೆಲ್ಲಾ ಆವಾಂತರ ನಡೆಯುತ್ತಿದ್ದರೂ ಸಹ ಶಿವಸೇನೆಯ ಮಿತ್ರಪಕ್ಷವಾದ ಕಾಂಗ್ರೆಸ್ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ತಟಸ್ಥ ನಿಲುವು ತಳೆದಿದ್ದಾರೆ. ಈ ಕುರಿತ ಮೌನಕ್ಕೆ ಶರಣಾಗಿದ್ದಾರೆ. ಆದರೆ, ನಟಿ ಕಂಗನಾ ಈ ಸಂಬಂಧ ಟ್ವೀಟ್ ಮಾಡುವ ಮೂಲಕ ಸೋನಿಯಾ ಗಾಂಧಿಯನ್ನು ಮತ್ತೊಮ್ಮೆ ಕೆಣಕಿದ್ದಾರೆ.
ಸೋನಿಯಾ ಗಾಂಧಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಕಂಗನಾ ರನೌತ್, "ಗೌರವಾನ್ವಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರೇ, ಒಬ್ಬ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಮಹಾರಾಷ್ಟ್ರ ಸರ್ಕಾರ ನನಗೆ ಕಿರುಕುಳ ನೀಡುತ್ತಿರುವುದು ನಿಮಗೆ ಸಂಕಟ ತರುತ್ತಿಲ್ಲವೇ? ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆ ಆ ನಿಮ್ಮ ಸರ್ಕಾರಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲವೇ?" ಎಂದು ಕಿಡಿಕಾರಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "ನೀವು ಪಾಶ್ಚಿಮಾತ್ಯ ದೇಶದಲ್ಲಿ ಬೆಳೆದವರು. ಈಗ ಭಾರತದಲ್ಲಿ ನೆಲೆಸಿದ್ದೀರಿ. ಮಹಿಳೆಯರ ಸಂಕಷ್ಟಗಳ ಬಗ್ಗೆ ನಿಮಗೆ ಅರಿವಿರಬಹುದು. ನಿಮ್ಮದೇ ಸರ್ಕಾರ ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿರುವಾಗ ನೀವು ಸಾಧಿಸುತ್ತಿರುವ ಮೌನ ಮತ್ತು ಉದಾಸೀನತೆಯನ್ನು ಇತಿಹಾಸವೇ ನಿರ್ಣಯಿಸುತ್ತದೆ" ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಶಿವಸೇನಾ ಮುಖಂಡನಿಗೆ ನಟಿ ಕಂಗನಾ ಅಭಿಮಾನಿಯಿಂದ ಬೆದರಿಕೆ ಕರೆ; ಆರೋಪಿಯನ್ನು ಬಂಧಿಸಿದ ಕೋಲ್ಕತ್ತಾ ಪೊಲೀಸರು
ನಟಿ ಕಂಗನಾ ಟ್ವೀಟ್ಗೆ ಈವರೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಟಿ ಕಂಗನಾ ಟ್ವೀಟ್ ಇದೀಗ ಸಾಮಾಜಿ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಲವರು ನಟಿಯ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಕಂಗನಾ ಸಮಸ್ಯೆಗೂ ಸೋನಿಯಾ ಗಾಂಧಿಗೂ ಇರುವ ನಂಟೇನು? ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಇಟಲಿ ಮಹಿಳೆ ಎಂದು ಸೋನಿಯಾ ಗಾಂಧಿಯನ್ನು ಹಲವರು ಕೀಳು ದರ್ಜೆಯ ಟೀಕೆಗಳನ್ನು ಮುಂದಿಡುತ್ತಿದ್ದಾಗ ಕಂಗನಾ ಎಲ್ಲಿದ್ದರು?
ಆಗ ಅವರಿಗೆ ಸೋನಿಯಾ ಸಹ ಓರ್ವ ಮಹಿಳೆ ಆಕೆಯ ಮೇಲೆ ಇಂತಹ ದಾಳಿ ಸಲ್ಲದು ಎಂದು ಧ್ವನಿ ಎತ್ತಲಿಲ್ಲವೇಕೆ? ಈಗ ತಮಗೊಂದು ಸಮಸ್ಯೆ ಎಂದ ತಕ್ಷಣ ಅದರಲ್ಲಿ ಸೋನಿಯಾ ಗಾಂಧಿಯನ್ನು ಎಳೆದು ತರುವುದು ಎಷ್ಟು ಸರಿ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವಾಗ್ವಾದ ನಡೆಸುತ್ತಿದ್ದಾರೆ.
Published by:
MAshok Kumar
First published:
September 11, 2020, 7:00 PM IST