Bhopal: ಇಂದೋರ್ನಲ್ಲಿ ನಡೆದ ಬಳೆ ಮಾರಾಟಗಾರರ ಮೇಲಿನ ಹಲ್ಲೆಯ ಘಟನೆಯ ನಂತರ ಈ ವಿಚಾರವನ್ನು ಬೇರೆಯದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿದ ಹಾಗೂ ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗೆ ಕಾರಣನಾಗಿದ್ದ ವ್ಯಕ್ತಿಯನ್ನು ಬಂದಿಸಲಾಗಿದ್ದು, ಈ ಬಂಧಿತ ವ್ಯಕ್ತಿಯು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನುವ "ಸಾಕ್ಷ್ಯಾಧಾರ" ಪತ್ತೆಯಾಗಿದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಸೋಮವಾರ ಮಧ್ಯಪ್ರದೇಶ ಸರ್ಕಾರವು ಈ ಬಗ್ಗೆ ಮಾಹಿತಿ ನೀಡಿದೆ.
ಅಲ್ತಾಮಾಶ್ ಖಾನ್ (Altamash Khan) ಎಂದು ಗುರುತಿಸಲಾಗಿರುವ ಬಂಧಿತ ವ್ಯಕ್ತಿಯು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದ್-ಉಲ್-ಮುಸ್ಲಿಮೀನ್ (AIMIM) ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದಕ ಸಂದೇಶಗಳನ್ನು ಹರಡಿದ ಮತ್ತು ಇಂದೋರ್ ನಗರದಲ್ಲಿ ಗಲಭೆಯನ್ನು ಪ್ರಚೋದಿಸಲು ಸಂಚು ರೂಪಿಸಿದ ಆರೋಪದ ಮೇಲೆ ಅಲ್ತಮಾಶ್ ಖಾನ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಕ್ಷ್ಯದ ಪ್ರಕಾರ (during the investigation), ಬಂಧಿತ ವ್ಯಕ್ತಿಗಳಲ್ಲಿ ಒಬ್ಬರಾದ ಅಲ್ತಮಾಶ್ ಖಾನ್, ಬಳೆ ಮಾರಾಟಗಾರ ಘಟನೆಯ ನಂತರ (ಇಂದೋರ್ನಲ್ಲಿ) ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು, ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು . ಖಾನ್ ಅವರಿಂದ ಆಕ್ಷೇಪಾರ್ಹ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ, ವೀಡಿಯೊಗಳು ಮತ್ತು ಆಡಿಯೋಗಳನ್ನು ಒಳಗೊಂಡಂತೆ ಇತರೇ ಸಾಕ್ಷ್ಯಗಳು ದೊರಕಿವೆ, ಅದನ್ನು ಕ್ರಮೇಣ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಖಾನ್ ಅವರು ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದ್-ಉಲ್-ಮುಸ್ಲಿಮೀನ್ (AIMIM) ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಶಾಂತಿ ಕದಡಲು ಖಾನ್ ಜೊತೆ ಸಿಕ್ಕಿರುವ ಆಕ್ಷೇಪಾರ್ಹ ವಸ್ತುಗಳು ಸಾಕಷ್ಟಿವೆ. ಬಂಧಿತರಾದ ಈ ನಾಲ್ಕು ಜನರ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಬಂಧಿತ ಆರೋಪಿಗಳನ್ನು ಅಲ್ತಮಾಶ್ ಖಾನ್, ಮೊಹಮ್ಮದ್ ಇಮ್ರಾನ್ ಅನ್ಸಾರಿ, ಜಾವೇದ್ ಖಾನ್ ಮತ್ತು ಸೈಯದ್ ಇರ್ಫಾನ್ ಅಲಿ ಎಂದು ಗುರುತಿಸಲಾಗಿದ್ದು, ಎಲ್ಲರೂ 20 ಮತ್ತು 30 ವರ್ಷ ವಯಸ್ಸಿನವರಾಗಿದ್ದು, ಇಸ್ಲಾಂ ಉಗ್ರ ಸಿದ್ಧಾಂತದಿಂದ ಪ್ರೇರಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಇಂದೋರ್ ನಗರದಲ್ಲಿ ಇತ್ತೀಚಿನ ಕೆಲವು ಘಟನೆಗಳ ಬಗ್ಗೆ ಜನರಲ್ಲಿ ಅಸಮಾಧಾನದ ಭಾವನೆಯನ್ನು ಸೃಷ್ಟಿಸುವ ಮೂಲಕ ವಿವಿಧ ಸ್ಥಳಗಳಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚು ರೂಪಿಸಿದ್ದರು. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈಷಮ್ಯ ಬೀರುವ ಸಂದೇಶಗಳನ್ನು ಹರಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ವಿರುದ್ಧ ಸೆಕ್ಷನ್ 153-A (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳೆ ಮಾರಾಟಗಾರ ತಸ್ಲೀಮ್ ಅಲಿ, ಆಗಸ್ಟ್ 22 ರಂದು ಇಂದೋರ್ನ ಗೋವಿಂದ್ ನಗರದಲ್ಲಿ ಮಹಿಳೆಯರಿಗೆ ಬಳೆಗಳನ್ನು ಮಾರಾಟ ಮಾಡುವಾಗ 'ನಕಲಿ' ಹೆಸರನ್ನು ಬಳಸಿದ್ದಕ್ಕಾಗಿ ಥಳಿಸಲಾಯಿತು. ಹಲ್ಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಕೈಗೆ ಬಳೆ ಹಾಕುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ ಮತ್ತು ನಕಲಿ ಹೆಸರನ್ನು ಬಳಸಿದ ಆರೋಪದ ಮೇಲೆ ಆಲಿಯನ್ನೂ ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ