ಸಾಕುಪ್ರಾಣಿಗಳಲ್ಲಿ ಶ್ವಾನವು ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ. ಒಂದು ಹೊತ್ತು ಊಟ ಹಾಕಿದರೆ ಸಾಕು ಆ ಅನ್ನದ ಋಣಕ್ಕಾಗಿ ಕೃತಜ್ಞತೆಯಿಂದ ಮನೆಯನ್ನು ಹಾಗೂ ಮನೆಯವರನ್ನು ಜೋಪಾನ ಮಾಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಶ್ವಾನವು ಮನೆಯವರ ಪ್ರಾಣ ಕಾಪಾಡಿದಂತಹ ಎಷ್ಟೋ ಘಟನೆಗಳನ್ನು ನೀವು ಓದಿರುತ್ತೀರಿ ಕೇಳಿರುತ್ತೀರಿ. ಹಾಗಾಗಿ ಶ್ವಾನ ಧೈರ್ಯಕ್ಕೂ, ಪರೋಪಕಾರಕ್ಕೂ ಹೆಸರುವಾಸಿಯಾಗಿವೆ. ತನ್ನ ಪ್ರಾಣ ಲೆಕ್ಕಿಸದೆ ಪ್ರೀತಿ ಪಾತ್ರರ ಪ್ರಾಣ ಕಾಪಾಡುತ್ತದೆ. ಈಗೀಗ ಹೆಚ್ಚಿನ ಶ್ವಾನಗಳನ್ನು ಆರಕ್ಷಕ, ಮಿಲಿಟರಿ ಪಡೆಗಳಲ್ಲಿ ತರಬೇತಿ ನೀಡಿ ಸಾಕಲಾಗುತ್ತಿದೆ. ಬಾಂಬ್ ನಿಗ್ರಹ ದಳದಲ್ಲೂ ಶ್ವಾನಗಳು ಅಪಾರ ಬುದ್ಧಿಮತ್ತೆ ಪ್ರದರ್ಶಿಸಿವೆ. ಹೀಗೆ ಶಕ್ತಿ ಇರುವ ವರೆಗೂ ದೇಶಕ್ಕೆ ಹಾಗೂ ಜನರ ರಕ್ಷಣೆಗಾಗಿ ದುಡಿಯುವ ನಾಯಿಗಳಿಗೆ ಈಗ ಆಶ್ರಯ ತಾಣವೊಂದನ್ನು ನಿರ್ಮಿಸಲಾಗಿದೆ.
ಅಹಮದಾಬಾದ್ - ಆನಂದ್ - ವಡೋದರಾದಲ್ಲಿ ವಯಸ್ಸಾದ ಪೊಲೀಸ್ ನಾಯಿಗಳಿಗಾಗಿ ಆಶ್ರಯ ತಾಣ ಕಲ್ಪಿಸಲಾಗಿದೆ. ಇದು ಪೊಲೀಸ್ ನಾಯಿಗಳಿಗಾಗಿ ನಿರ್ಮಿಸಿರುವ ಗುಜರಾತ್ನ ಮೊದಲ ಆಶ್ರಯ ತಾಣವಾಗಿದೆ. ದೇಶದಲ್ಲಿಯೇ ಇದು ಎರಡನೆಯ ಆಶ್ರಯ ತಾಣವಾಗಿದ್ದು ನಿವೃತ್ತ ಪೊಲೀಸ್ ನಾಯಿಗಳಿಗಾಗಿಯೇ ಈ ತಾಣ ನಿರ್ಮಿಸಲಾಗಿದೆ.
ಉತ್ತರ ಪ್ರದೇಶದ ಮೀರತ್ನ ನಂತರದ ಸ್ಥಾನ ಈ ತಾಣಕ್ಕಿದ್ದು ಇಲ್ಲಿ ಕೆ-9 ಯುನಿಟ್ನ ವೃದ್ಧ ನಾಯಿಗಳಿವೆ. 11 ಜರ್ಮನ್ ಶೆಪರ್ಡ್ ಹಾಗೂ ಲ್ಯಾಬ್ರಡಾರ್ ತಳಿಗಳು ಇಲ್ಲಿದ್ದು ನಿವೃತ್ತ ಜೀವನ ಕಳೆಯುತ್ತಿವೆ. ಇವುಗಳಿಗೆ ವಯಸ್ಸಾಗಿದ್ದರೂ ಇಂದಿಗೂ ಬುದ್ಧಿಮತ್ತೆ ಚುರುಕಾಗಿಯೇ ಇದೆ. ತರಬೇತಿ ಪಡೆದ ನಾಯಿಗಳು ಇವುಗಳಾದ್ದರಿಂದ ಆಕ್ರಮಣಶೀಲ ಕೌಶಲ್ಯ ಹಾಗೂ ಚುರುಕುತನ ಈ ಶ್ವಾನಗಳಲ್ಲಿ ಇನ್ನೂ ಜೀವಂತವಾಗಿದೆ.
ಇದನ್ನೂ ಓದಿ: Kareena Kapoor-Jehangir Khan: ಎರಡನೇ ಮಗನಿಗೆ ಜಹಾಂಗೀರ್ ಖಾನ್ ಎಂದು ಹೆಸರಿಟ್ಟ ಕರೀನಾ ಕಪೂರ್-ಸೈಫ್ ಸಲಿ ಖಾನ್
ನಾಯಿಗಳ ಆರೈಕೆಯನ್ನು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ನಿರ್ಮಲ್ ಜಾಲಾ ಮಾಡುತ್ತಿದ್ದು ಪ್ರತಿಯೊಂದು ಶ್ವಾನವೂ ತನ್ನ ವಿಶೇಷತೆಗಳಿಂದ ಪ್ರಖ್ಯಾತಿ ಪಡೆದಿದ್ದು ಸೇವೆ ನೀಡಿವೆ ಎಂದು ಕೊಂಡಾಡುತ್ತಾರೆ. ಇಲ್ಲಿನ ಗೋಡೆಯಲ್ಲಿ ನಾಯಿಗಳ ವ್ಯಕ್ತಿ ಚಿತ್ರಣವನ್ನು ಲಗತ್ತಿಸಲಾಗಿದ್ದು ಯಾವ ನಾಯಿ ಯಾವ ವಿಶೇಷತೆಗೆ ಹೆಸರುವಾಸಿಯಾಗಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.
ಸುಶಿ, ಥಂಡರ್, ಸೋಫಿ, ಟ್ಯಾಗ್, ವೀನಸ್, ಮೀಶಾ, ನಿಕಿತಾ, ಕ್ರಿಸ್ಪಿ, ಬುಲೆಟ್, ಪಪಿರ್, ಸ್ನೂಪಿ - ಈ ಶ್ವಾನಗಳು ಗುಜರಾತ್ ಪೊಲೀಸ್ ಪಡೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಸ್ನಿಫರ್ ಶ್ವಾನ ಯುನಿಟ್ಗಳ ಭಾಗವಾಗಿವೆ. ಸಮಾಜಕ್ಕೆ ಈ ಶ್ವಾನಗಳು ಸಲ್ಲಿಸಿರುವ ಸೇವೆಗೆ ಈ ಆಶ್ರಯ ತಾಣವೇ ಕೊಡುಗೆಯಾಗಿವೆ ಎಂಬುದು ಜಾಲಾ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Bigg Boss OTT-Shamita Shetty: ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಯೊಬ್ಬರ ಜತೆ ಜಗಳವಾಡಿದ ಶಮಿತಾ ಶೆಟ್ಟಿ..!
ಆರಂಭದಲ್ಲಿ ಈ ನಾಯಿಗಳನ್ನು ಹರಾಜಿಗೆ ಹಾಕಿ ಶ್ವಾನ ಪ್ರಿಯರಿಗೆ ನೀಡುವ ಯೋಚನೆ ಮಾಡಿದ್ದೆವು. ಆದರೆ ತರಬೇತಿ ಹೊಂದಿದ ನಾಯಿಗಳು ಒಮ್ಮೊಮ್ಮೆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಸಾಕುವವರು ಕೊಂಚ ಹೆದರುತ್ತಾರೆ. ನಂತರ ನಾಯಿಗಳಿಗಾಗಿ ಆಶ್ರಯ ತಾಣವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದೆವು ಎಂಬುದು ಜಾಲಾ ಅನಿಸಿಕೆಯಾಗಿದೆ.
ಈ ನಾಯಿಗಳಿಗೆ ಊಟ, ಆರೋಗ್ಯ ಸೌಲಭ್ಯಗಳು ಹಾಗೂ ನಿಯಮಿತ ವ್ಯಾಯಾಮ ಮಾಡಿಸಲಾಗುತ್ತಿದೆ. ಈ ಶ್ವಾನಗಳು ತಮ್ಮ ಕರ್ತವ್ಯ ನಿಷ್ಠತೆಗಾಗಿ ಪದಕಗಳನ್ನು ಪುರಸ್ಕಾರಗಳನ್ನು ಪಡೆದುಕೊಂಡಿರುವುದು ಶ್ಲಾಘನೀಯ ಅಂಶವಾಗಿದೆ. ಇನ್ನಷ್ಟು ನಿವೃತ್ತ ನಾಯಿಗಳನ್ನು ಈ ಆಶ್ರಯ ತಾಣಕ್ಕೆ ಸೇರಿಸಲಾಗುವುದು ಎಂದು ನಿರ್ಮಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ