2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಗುಜರಾತ್ನ ಸೂರತ್ ನ್ಯಾಯಾಲಯವು (Surat Court) ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಉಪನಾಮದ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ತಪ್ಪಿತಸ್ಥರೆಂದು ಘೋಷಿಸಿದ್ದು, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಘೋಷಣೆಯ ಜೊತೆಜೊತೆಯೇ ಜಾಮೀನು ನೀಡುವ ಸೂರತ್ ನ್ಯಾಯಾಲಯದ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲವಕಾಶ ನೀಡಿದೆ.
ಲೋಕಸಭೆಯ ಸದಸ್ಯತ್ವದಿಂದಲೂ ರಾಹುಲ್ ಗಾಂಧಿ ಅನರ್ಹ
ಸೂರತ್ ನ್ಯಾಯಾಲಯ ಈ ಒಂದು ತೀರ್ಪನ್ನು ಹೊರಹಾಕಿದ ಬೆನ್ನಲ್ಲೇ ಅತ್ತ ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ. ಹೀಗಾಗಿ ಮೇಲ್ಮನವಿ ಸಲ್ಲಿಸಿ ಅಲ್ಲಿ ಕಾನೂನು ಹೋರಾಟದಿಂದ ನಿರ್ದೋಷಿಯಾದರೆ ಚುನಾವಣೆ ಭವಿಷ್ಯ ಸೇಫ್ ಆಗುತ್ತದೆ. ಬದಲಿಗೆ ಸ್ವಲ್ಪ ಅತ್ತಿತ್ತವಾದರೂ ಸುಮಾರು ವರ್ಷಗಳ ಕಾಲ ರಾಹುಲ್ ಗಾಂಧಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವೇ ಕೈ ತಪ್ಪಿ ಹೋಗುವ ಸ್ಥಿತಿ ಉಂಟಾಗುತ್ತದೆ.
ʻಮೋದಿʼ ಎಂಬ ಉಪನಾಮದ ಬಗ್ಗೆ ನೀಡಿದ ಒಂದು ಹೇಳಿಕೆ ರಾಹುಲ್ ಗಾಂಧಿಯನ್ನು ಪೇಚಿಗೆ ಸಿಲುಕಿಸಿದೆ. 2019 ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಮೋದಿ ಸರ್ನೇಮ್ ಬಗ್ಗೆ ವ್ಯಂಗ್ಯವಾಡಿದ್ದರು. ಆ ಸಮಯದಲ್ಲಿ ದೇಶದಲ್ಲಿ ನೀರವ್ ಮೋದಿ ಮತ್ತು ಲಲಿತ್ ಮೋದಿ ಸೇರಿ ಹಲವರ ವಂಚನೆ ಪ್ರಕರಣಗಳು ಭಾರೀ ಚರ್ಚೆಯಲ್ಲಿದ್ದವು. ಇದನ್ನೇ ತಮ್ಮ ಭಾಷಣದಲ್ಲಿ ವ್ಯಂಗ್ಯವಾಗಿ ತೆಗೆದುಕೊಂಡ ರಾಹುಲ್ ಗಾಂಧಿ "ಎಲ್ಲಾ ಕಳ್ಳರು ಮೋದಿ ಉಪನಾಮವನ್ನು ಹೇಗೆ ಹೊಂದಿದ್ದಾರೆ" ಎಂದು ಹೇಳಿದ್ದರು.
ಪ್ರಕರಣದ ಬಗ್ಗೆ ಕೆಲ ಹೈಲೈಟ್ಸ್ ಹೀಗಿವೆ.
* ಕರ್ನಾಟಕದಲ್ಲಿ 2019 ರ ಲೋಕಸಭಾ ಚುನಾವಣೆಯ ಮುನ್ನಾ ಭಾಷಣದಲ್ಲಿ, ರಾಹುಲ್ ಗಾಂಧಿಯವರು "ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಹೇಗೆ ಸಾಮಾನ್ಯವಾಗಿದೆ?" ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಯು ಆಗ ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ಹಲವಾರು ಮಾನನಷ್ಟ ಮತ್ತು ಜಾತಿ ಪಕ್ಷಪಾತ ಎಂದು ದೂರಿದ್ದರು.
* ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ಆಗಿನ ಗುಜರಾತ್ ಸಚಿವ ಮತ್ತು ಸೂರತ್ ಪಶ್ಚಿಮ ಭಾರತೀಯ ಜನತಾ ಪಕ್ಷದ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
* ದೂರಿನನ್ವಯ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಐಪಿಸಿ ಸೆಕ್ಷನ್ 499 ಮತ್ತು 500 (ಮಾನನಷ್ಟ ವ್ಯವಹರಣೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಯಿತು.
ಇದನ್ನೂ ಓದಿ: Rahul Gandhi: ಹೋಗಿ BJP ಬ್ಯಾಡ್ಜ್ ಹಾಕ್ಕೋ! ಪತ್ರಕರ್ತನನ್ನು ಅವಮಾನಿಸಿದ ರಾಹುಲ್ ಗಾಂಧಿ
* ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು 2021 ರ ಅಕ್ಟೋಬರ್ನಲ್ಲಿ ಕೊನೆಯ ಬಾರಿಗೆ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದಕ್ಕೂ ಮೊದಲು, ರಾಹುಲ್ ಗಾಂಧಿ ತಮ್ಮ ವಿರುದ್ಧ ಹೊರಿಸಲಾದ ಆರೋಪಗಳಲ್ಲಿ ಸತ್ಯವಿಲ್ಲ, ನಾನು ನಿರ್ದೋಷಿ ಎಂದು ನ್ಯಾಯಾಲಯಕ್ಕೆ ತಿಳಿದಿದ್ದರು.
* ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ರಾಹುಲ್ ಗಾಂಧಿ ಅವರ ಹೇಳಿಕೆಗಳು ಕೇವಲ ಒಂದು ಉಪನಾಮವನ್ನಲ್ಲ ಇಡೀ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಿದರು.
* ಈ ಹೇಳಿಕೆ ವಿಚಾರವಾಗಿ ಕೆಲ ದಿನಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. ಪ್ರಸ್ತುತ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹೆಚ್.ಹೆಚ್ ವರ್ಮಾ ಅವರ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಗಾಂಧಿಯನ್ನು ಅಪರಾಧಿ ಎಂದು ತೀರ್ಪು ನೀಡಿದೆ.
* ಸೂರತ್ ನ್ಯಾಯಾಲಯದ ಆದೇಶದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರೆದಿದೆ. ಜಿಪಿಸಿಸಿ ಅಧ್ಯಕ್ಷ ಜಗದೀಶ್ ಠಾಕೂರ್, ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ, ಹಿರಿಯ ನಾಯಕ ಅರ್ಜುನ್ ಮೊದ್ವಾಡಿಯಾ, ಗುಜರಾತ್ನ ಎಐಸಿಸಿ ಉಸ್ತುವಾರಿ ರಘು ಶರ್ಮಾ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಅವರನ್ನು ಬರಮಾಡಿಕೊಳ್ಳಲು ಸೂರತ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
* ರಾಹುಲ್ ಗಾಂಧಿಯವರಿಗೆ ಶಕ್ತಿ ಮತ್ತು ಬೆಂಬಲದ ಪ್ರದರ್ಶನವಾಗಿ ದೇಶದಲ್ಲಿ ವಿವಿಧ ಸ್ಥಳಗಳಲ್ಲಿ ಬೃಹತ್ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಸೇರುತ್ತಿದ್ದಾರೆ. ರಾಹುಲ್ ಅವರನ್ನು ಹಿಂದೂಸ್ತಾನದ ಸಿಂಹ ಎಂದು ಹೊಗಳಿ ಅವರ ಪರ ಬೆಂಬಲ ಸೂಚಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ