ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಬಿಜೆಪಿಯ ಹೀನಾಯ ಸೋಲು ನೋಡಿ ಶಾಕ್ ಆದ ಅನೇಕ ನಾಯಕರು ಅಂದರೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಅನೇಕ ನಾಯಕರುಗಳು ಮತ್ತೆ ತವರು ಪಕ್ಷಕ್ಕೆ ಮರಳಿ ಹೋಗುತ್ತಿರುವ ಹೈಡ್ರಾಮ ಇನ್ನೂ ನಿಂತಿಲ್ಲ.
ಟಿಎಂಸಿಯಲ್ಲಿದ್ದ ಬಿಗ್-ವಿಕೆಟ್ ಮುಕುಲ್ ರಾಯ್ ಬಿಜೆಪಿ ಸೇರಿದ್ದರು ಆದರೆ ಅವರು ಮತ್ತೆ ತೃಣಮೂಲ ಕಾಂಗ್ರೆಸ್ಗೆ ಹಾರಿದರು, ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಕ್ಷವು ಭರ್ಜರಿ ಗೆಲುವು ದಾಖಲಿಸಿದ ನಂತರ ಈ ಬೆಳವಣಿಗೆಗಳು ನಡೆಯುತ್ತಲೇ ಇವೆ.
ಈಗ, ಬಿಷ್ಣುಪುರದ ಇನ್ನೊಬ್ಬ BJP MLA ತನ್ಮಯ್ ಘೋಷ್ ಕೂಡ ಸೋಮವಾರ ಟಿಎಂಸಿಗೆ ಸೇರಿದ್ದಾರೆ. ಇದರೊಂದಿಗೆ, ವಿಧಾನಸಭೆಯಲ್ಲಿ ಒಟ್ಟು ಬಿಜೆಪಿ ಶಾಸಕರ ಸಂಖ್ಯೆ 77 ರಿಂದ 73 ಕ್ಕೆ ಇಳಿದಿದೆ.
ಬಿಜೆಪಿ ಶಾಸಕರಾದ ನಿಶಿತ್ ಪ್ರಮಾಣಿಕ್ ಮತ್ತು ಜಗನ್ನಾಥ್ ಸರ್ಕಾರ್ ಕೂಡ ತಮ್ಮ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಆದರೆ ಮುಕುಲ್ ರಾಯ್ ಅಧಿಕೃತವಾಗಿ ಬಿಜೆಪಿ ಶಾಸಕರಾಗಿ ಉಳಿದಿದ್ದಾರೆ. ಇವರನ್ನು ಬಿಜೆಪಿ ತನ್ನ ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ ಆದರೆ, ಬಿಜೆಪಿ ಉಚ್ಚಾಟನೆ ಮಾಡದೆ ಬೇರೆಯದೆ ಆಟ ಆಡುತ್ತಿದೆ. ಬಿಜೆಪಿ ಶಾಸಕರಾಗಿದ್ದುಕೊಂಡೂ ಕೂಡ ರಾಯ್ ಈಗಲೂ ಟಿಎಂಸಿಯ ಕಾರ್ಯಕ್ರಮಗಳಲ್ಲಿ ಬಿಜೆಪಿ ವಿರುದ್ದವೇ ಮಾತನಾಡುತ್ತಿದ್ದಾರೆ.
ಈಗ ಘೋಷ್ ಕೂಡ ಪಕ್ಷ ಬದಲಿಸಿದ್ದು, “ಬಿಜೆಪಿ ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡುತ್ತಿದೆ. ಬಿಜೆಪಿಯು ಕೇಂದ್ರ ಏಜೆನ್ಸಿಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಸಾರ್ವಜನಿಕ ಹಿತಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವಂತೆ ನಾನು ಎಲ್ಲ ರಾಜಕಾರಣಿಗಳನ್ನು ಕೋರುತ್ತೇನೆ, ಎಂದು ಅವರು ಹೇಳಿದರು.
ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಯನ್ನು ಕಂಗೆಡಿಸಿದ್ದು, ಈ ಎಲ್ಲಾ ರೀತಿಯ ಅಭಿವೃದ್ದಿಗಳ ಬಗ್ಗೆ ಕೇಂದ್ರ ಹೈಕಮಾಂಡ್ ಸಾಕಷ್ಟು ಗರಂ ಆಗಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಕುರಿತು ನಿಖರ ಕಾರಣ ಹಾಗೂ ವರದಿ ನೀಡುವಂತೆ ಪಶ್ಚಿವ ಬಂಗಾಳ ಬಿಜೆಪಿಗೆ ಹೈಕಮಾಂಡ್ ಹೇಳಿದೆ ಎಂದು ವರದಿಯಾಗಿದೆ.
ಘೋಷ್ ವಿಧಾನಸಭೆಯ ಚುನಾವಣೆಗೆ ಕೆಲವು ದಿನಗಳು ಇದೆ ಎನ್ನುವ ಹೊತ್ತಿನಲ್ಲೆ ಮಾರ್ಚ್ನಲ್ಲಿ ಟಿಎಂಸಿಯಿಂದ ಬಿಜೆಪಿಗೆ ಹಾರಿದ್ದರು. ಈ ಹಿಂದೆ, ಅವರು ಬಂಕುರಾ ಜಿಲ್ಲೆಯ ಬಿಷ್ಣುಪುರ ಪಟ್ಟಣದ ಟಿಎಂಸಿ ಯುವ ಅಧ್ಯಕ್ಷರಾಗಿದ್ದರು ಮತ್ತು ಸ್ಥಳೀಯ ನಾಗರಿಕ ಸಂಸ್ಥೆಯ ಕೌನ್ಸಿಲರ್ ಆಗಿದ್ದರು.
ಘೋಷ್ ಅವರು ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರ ಕ್ಷೇತ್ರದಲ್ಲಿರುವ ಬಿಷ್ಣುಪುರ ವಿಧಾನಸಭಾ ಕ್ಷೇತ್ರದವರು.
"ನಿಮ್ಮ ಆಸ್ತಿಯನ್ನು ಉಳಿಸಲು ನೀವು ಮತ್ತೆ ಟಿಎಂಸಿ ಸೇರಿದ್ದೀರಿ, ಆದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಪಕ್ಷಕ್ಕೆ ಸೇರಬೇಕಿತ್ತು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ