ಚೆನ್ನೈ (ಜೂನ್ 24); ಆರಂಭದಿಂದಲೂ ಬಿಜೆಪಿ ಪಕ್ಷವನ್ನೂ ಬಿಜೆಪಿ ನೇತೃತ್ವದ ಕೇಂದ್ರವನ್ನು, ರಾಜ್ಯಗಳ ಕುರಿತ ಅವರ ಮಲತಾಯಿ ಧೋರಣೆ ವಿರೋಧಿಸುತ್ತಲೇ ರಾಜಕಾರಣ ಮಾಡಿದ ಪಕ್ಷ ಡಿಎಂಕೆ. ಕಳೆದ 7 ವರ್ಷಗಳಲ್ಲಿ ಈ ವಿರೋಧ ಮತ್ತಷ್ಟು ಹೆಚ್ಚಾಗಿತ್ತು. ಪರಣಾಮ ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿ ಗಾಧಿಗೆ ಏರುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ದದ ತಮ್ಮ ಸಮರವನ್ನು ಮುಂದುವರೆಸಿದ್ದರು. ಅಲ್ಲದೆ, "ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಂಬ ಪದವೇ ಇಲ್ಲ. ಸಂವಿಧಾನದಲ್ಲಿ ಉಲ್ಲೇಖವಾಗಿರು ವಂತೆ ನಾವು ಒಕ್ಕೂಟ ಸರ್ಕಾರ ಎಂದೇ ಕರೆಯುತ್ತೇವೆ" ಎಂದು ಸ್ಟಾಲಿನ್ ಸ್ಪಷ್ಟಪಡಿಸಿ ದ್ದರು. ಅದರಂತೆ ನಿನ್ನೆ ತಮಿಳುನಾಡು ವಿಧಾನಮಂಡಲ ದಲ್ಲಿ "ಒಕ್ಕೂಟ ಸರ್ಕಾರ" ಎಂದು ಕರೆಯುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆದಿತ್ತು. ಈ ವಿಚಾರದ ವಿರುದ್ಧ ಅನೇಕರು ಕಿಡಿಕಾರಿದ್ದರು. ಈ ಎಲ್ಲಾ ಪ್ರಶ್ನೆಗಳೀಗೆ ವಿಧಾನ ಮಂಡಲ ಅಧಿವೇಶನದಲ್ಲಿ ಉತ್ತರ ನೀಡಿರುವ ಎಂಕೆ ಸ್ಟಾಲಿನ್, "ಮೋದಿ ಸರ್ಕಾರವನ್ನು 'ಕೇಂದ್ರ ಸರ್ಕಾರ' ಎಂದು ಉಲ್ಲೇಖಿಸುವುದರ ಬದಲು 'ಒಕ್ಕೂಟ ಸರ್ಕಾರ' ಎಂದೇ ನಾವು ಬಳಸುತ್ತೇವೆ.
ಏಕೆಂದರೆ 1957 ರಲ್ಲಿ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 'ಇಂಡಿಯನ್ ಯೂನಿಯನ್' ಎಂಬ ಪದವನ್ನು ಬಳಸಿತ್ತು. ಈ ನಿಲುವಿಗೆ ನಾವು ಈಗಲೂ ಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದೇ ಕರೆಯಲಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನ ಕೂಡಾ ಭಾರತವನ್ನು 'ರಾಜ್ಯಗಳ ಒಕ್ಕೂಟ' ಎಂದು ಬಣ್ಣಿಸಿದೆ. ನಾವು ‘‘ಒಕ್ಕೂಟ’’ ಎಂದು ಬಳಸಿದ್ದೇವೆ ಮತ್ತು ಹಾಗೆ ಬಳಸುವುದನ್ನು ಮುಂದುವರಿಸುತ್ತೇವೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ವಿಧಾನಸಭೆಯಲ್ಲಿನ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು "ಒಕ್ಕೂಟ" ಎಂಬ ಪದವನ್ನು ಬಳಸುವುದರ ಹಿಂದೆ ಏನಾದರೂ ಉದ್ದೇಶವಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಮುಖ್ಯಮಂತ್ರಿಯಿಂದ ಪ್ರತಿಕ್ರಿಯೆ ಬಯಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, "ಈ ಪದ ಬಳಕೆಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಏಕೆಂದರೆ ರಾಜಾಜಿ(ಸಿ. ರಾಜಗೋಪಾಲಾಚಾರಿ) ಅವರೆ ಅಧಿಕಾರದ ಕೇಂದ್ರೀಕರಣದ ವಿರುದ್ಧ ಮತ್ತು ನಿಜವಾದ ಫೆಡರಲಿಸಂ ಪರವಾಗಿ ಮಾತನಾಡಿದ್ದರು. ದಿವಂಗತ ಮಾ.ಪೋ.ಸಿ.(ಶಿವಜ್ಞನಂ) ಸಮಷ್ಠಿ ಎಂಬ ಪದವನ್ನು ಬಳಸಿದ್ದಾರೆ" ಎಂದು ಅವರು ಹೇಳಿದ್ದಾರೆ.
"ಒಕ್ಕೂಟ" ಎಂಬ ಪದದ ಬಳಕೆಯನ್ನು "ಸಾಮಾಜಿಕ ಅಪರಾಧ" ಎಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. "ನಾವು ಸಂವಿಧಾನದಲ್ಲಿರುವುದನ್ನು ಮಾತ್ರ ಬಳಸುತ್ತಿದ್ದೇವೆ. ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ" ಎಂದು ಅವರು ತಿಳಿಸಿದ್ದಾರೆ.
ಭಾರತವನ್ನು ಅದರ ರಾಜ್ಯಗಳು ರಚಿಸಿವೆ ಎಂದು ಅವರು ಹೇಳಿದ್ದಾರೆ. "ನಮ್ಮ ನಾಯಕರಾದ ಅಣ್ಣಾ (ಸಿ.ಎನ್. ಅನ್ನದುರೈ) ಮತ್ತು ಕಲೈನಾರ್ (ಎಂ. ಕರುಣಾನಿಧಿ) ಅವರು ಬಳಸದ ಪದವನ್ನು ಕೆಲವರು ಬಳಸುತ್ತಿದ್ದಾರೆಂದು ಕೆಲವರು ಆರೋಪಿಸುತ್ತಾರೆ. ಆದರೆ ಡಿಎಂಕೆ 1957 ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂಡಿಯನ್ ಯೂನಿಯನ್ ಎಂಬ ಪದವನ್ನು ಬಳಸಿದೆ" ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ