ನವ ದೆಹಲಿ: ಅಂತರರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಆಗಮಿಸಿದಾಗ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿದರೆ ಅಂತಹ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ಹೊರಡಿಸಿರುವ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪ್ರಯಾಣ ಕೈಗೊಳ್ಳುವ 96 ಗಂಟೆಗಳ ಒಳಗೆ ಈ ಪರೀಕ್ಷೆಯನ್ನು ನಡೆಸಬೇಕಾಗಿದ್ದು, ಪರೀಕ್ಷಾ ವರದಿ ಪರಿಗಣನೆಗೆ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. ಅಲ್ಲದೆ, ಪರೀಕ್ಷಾ ವರದಿಯ ಸತ್ಯಾಸತ್ಯತೆಗಾಗಿ ಸ್ವಯಂ ಘೋಷಣೆಯನ್ನು ಒದಗಿಸಬೇಕಾಗುತ್ತದೆ. ಈ ಪರೀಕ್ಷೆಗಳನ್ನು ಮಾಡದವರು 14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ ಎಂದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈವರೆಗಿನ ಮಾರ್ಗಸೂಚಿಯ ಪ್ರಕಾರ ಅಂತಾರಾಷ್ಟ್ರೀಯ ಪ್ರಯಾಣಿಕರು 14 ದಿನ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಲೇಬೇಕು ಎಂದು ಸೂಚಿಸಲಾಗಿದೆ. ಆದರೆ, ಹೊಸ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಪ್ರಯಾಣಿಕರು ನಿಗದಿತ ಪ್ರಯಾಣಕ್ಕೆ ಕನಿಷ್ಠ 72 ಗಂಟೆಗಳ ಮೊದಲು ಆನ್ಲೈನ್ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.
ಭಾರತಕ್ಕೆ ವಿಮಾನ ಹತ್ತುವ ಮೊದಲು, ತಮ್ಮ ಮೊಬೈಲ್ ಸಾಧನಗಳಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡುವುದು ಕಡ್ಡಾಯವಲ್ಲ. ಆದರೆ ಬೋರ್ಡಿಂಗ್ ಸಮಯದಲ್ಲಿ, ಥರ್ಮಲ್ ಸ್ಕ್ರೀನಿಂಗ್ ನಂತರ ರೋಗಲಕ್ಷಣ ರಹಿತ ಪ್ರಯಾಣಿಕರಿಗೆ ಮಾತ್ರ ಹತ್ತಲು ಅವಕಾಶವಿರುತ್ತದೆ.
ಪ್ರಯಾಣದ ಸಮಯದಲ್ಲಿ, ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ರೂಪದಲ್ಲಿ ಭರ್ತಿ ಮಾಡದವರು, ವಿಮಾನ ಅಥವಾ ಹಡಗಿನಲ್ಲಿ ನೀಡುವ ಪ್ರತಿಯಲ್ಲಿ ಭರ್ತಿ ಮಾಡಬೇಕಾಗುತ್ತದೆ. ಅದರ ಪ್ರತಿಯನ್ನು ವಿಮಾನ ನಿಲ್ದಾಣ, ಬಂದರು ಅಥವಾ ಲ್ಯಾಂಡ್ಪೋರ್ಟ್ನಲ್ಲಿರುವ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.
“ಪರ್ಯಾಯವಾಗಿ, ಅಂತಹ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳ ನಿರ್ದೇಶನದಂತೆ ವಿಮಾನ ನಿಲ್ದಾಣ / ಬಂದರು / ಭೂಗಡಿಗಳಲ್ಲಿ ಆನ್ಲೈನ್ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬಹುದು” ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ದೇಶಕ್ಕೆ ಆಗಮಿಸಿದ ನಂತರ ಆರೋಗ್ಯ ಅಧಿಕಾರಿಗಳಿಂದ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಆ ನಂತರ ಆನ್ಲೈನ್ನಲ್ಲಿ ಭರ್ತಿ ಮಾಡಿದ ಸ್ವಯಂ ಘೋಷಣೆ ಫಾರ್ಮ್ ಅನ್ನು ವಿಮಾನ ನಿಲ್ದಾಣದ ಆರೋಗ್ಯ ಸಿಬ್ಬಂದಿಗೆ ತೋರಿಸಬೇಕಾಗುತ್ತದೆ. ಆದಾಗ್ಯೂ ಸ್ಕ್ರೀನಿಂಗ್ ಸಮಯದಲ್ಲಿ ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಿ ಆರೋಗ್ಯ ನಿಯಮಾವಳಿಗಳ ಪ್ರಕಾರ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗುತ್ತದೆ.
ಈ ಪ್ರಯಾಣಿಕರ ಗುಂಪನ್ನು ಕನಿಷ್ಠ 7 ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ ಮತ್ತು ಅವರನ್ನು ಐಸಿಎಂಆರ್ ಪ್ರೋಟೋಕಾಲ್ ಪ್ರಕಾರ ಪರೀಕ್ಷಿಸಲಾಗುತ್ತದೆ. “ಲಕ್ಷಣರಹಿತ, ಪೂರ್ವ-ರೋಗಲಕ್ಷಣದ, ಅತ್ಯಂತ ಸೌಮ್ಯ ಪ್ರಕರಣಗಳೆಂದು ನಿರ್ಣಯಿಸಿದರೆ ಅವರನ್ನು ಮನೆಯಲ್ಲೇ ಪ್ರತ್ಯೇಕತೆಗೆ ಅನುಮತಿಸಲಾಗುತ್ತದೆ ಅಥವಾ ಕೋವಿಡ್ ಕೇರ್ ಸೆಂಟರ್ನಲ್ಲಿ (ಸಾರ್ವಜನಿಕ ಮತ್ತು ಖಾಸಗಿ ಸೌಲಭ್ಯಗಳು) ಪ್ರತ್ಯೇಕಿಸಲಾಗುತ್ತದೆ” ಎಂದು ಮಾರ್ಗಸೂಚಿ ಹೇಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ