ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Bhrij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪವೊಡ್ಡಿ ದೆಹಲಿಯ ಜಂತರ್ಮಂತರ್ನಲ್ಲಿ (Jantar Mantar) ಕಳೆದ ಕೆಲ ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ಭಾರತದ ಕ್ರೀಡಾಪಟುಗಳ (Wrestler Protest) ಮೇಲೆ ಪೊಲೀಸರು ಏಕಾಏಕಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಎಂದಿನಂತೆ ನಿನ್ನೆ ಕೂಡ ಭಾರತದ ಕುಸ್ತಿಪಟುಗಳು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಿನ್ನೆ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದು ದೆಹಲಿ ಪೊಲೀಸರು ಎಂದು ಹೇಳಿಕೊಂಡು ಗುಂಪೊಂದು ನಮ್ಮ ಮೇಲೆ ದಾಳಿ ನಡೆಸಿದೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಅಲ್ಲದೇ, ಅವರೆಲ್ಲರೂ ಕುಡಿದ ನಶೆಯಲ್ಲಿದ್ದರು. ರಾತ್ರಿ ಮಲಗಲು ಹಾಸಿಗೆ ತರಲು ಮುಂದಾದಾಗ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಅವಾಚ್ಯವಾಗಿ ಬೈದು ನಿಂದಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Wrestler Protest: ರಾತ್ರಿ ಹುಡುಗಿಯರನ್ನು ಮನೆಗೆ ಕರೀತಾರೆ, ಮುಂದುವರೆದ ಕುಸ್ತಿ ಪಟುಗಳ ಪ್ರತಿಭಟನೆ!
ವಿಡಿಯೋದಲ್ಲಿ ಸೆರೆ
ಇನ್ನು ಪೊಲೀಸರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ಗ್ರಾಪ್ಲರ್ಗಳು ಬಿದ್ಡು ಪೆಟ್ಟಾಗಿದ್ದು, ಇದೇ ವೇಳೆ ಇಬ್ಬರಿಗೆ ಗಾಯಗಳಾಗಿವೆ. ಪರಿಣಾಮ ಪ್ರಜ್ಞೆ ತಪ್ಪಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡ ಕುಸ್ತಿಪಟುವನ್ನು ರಾಹುಲ್ ರಾವ್ ಎಂದು ಗುರುತಿಸಲಾಗಿದೆ. ರಾಷ್ಟ್ರ ರಾಜಧಾನಿಯ ನಿಯೋಜಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ನಲ್ಲಿ ಇಂತಹ ಹಿಂಸಾಚಾರ ನಡೆಯುತ್ತಿರೋದು ಇದೇ ಮೊದಲ ಬಾರಿಯಾಗಿದ್ದು, ವಿಡಿಯೋದಲ್ಲಿ ಸೆರೆ ಆಗಿರುವಂತೆ ದೆಹಲಿ ಪೊಲೀಸರ ಸಮವಸ್ತ್ರಧಾರಿಗಳು ಕುಸ್ತಿಪಟುಗಳೊಂದಿಗೆ ಜಗಳ ಮಾಡ್ತಿರೋದು ಸೆರೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸರು, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ದೆಹಲಿ ಶಾಸಕ ಸೋಮನಾಥ್ ಭಾರತಿ ಮಡಚುವ ಹಾಸಿಗೆ ಹಿಡಿದುಕೊಂಡು ಸ್ಥಳಕ್ಕೆ ಬಂದಾಗ ಪೊಲೀಸರು ಮಧ್ಯ ಪ್ರವೇಶಿಸಿದರು. ಆಗ ಪ್ರತಿಭಟನಾಕಾರರು ಟ್ರಕ್ನಿಂದ ಬೆಡ್ನ್ನು ತೆಗೆಯಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂಬಂಧ ಸೋಮನಾಥ್ ಭಾರತಿ ಮತ್ತು ಇನ್ನಿಬ್ಬರನ್ನು ಬಂಧನ ಮಾಡಲಾಗಿದೆ ಎಂದು ಹೇಳಿದ್ದಾರೆ.
'ತಲೆಗೆ ಕೋಲಿನಿಂದ ಹೊಡೆದರು'
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕುಸ್ತಿಪಟು ರಾಜ್ವೀರ್, ಕುಡಿದು ನಶೆಯಲ್ಲಿದ್ದ ಪೊಲೀಸ್ ಧರ್ಮೇಂದ್ರ, ವಿನೇಶ್ ಫೋಗಟ್ ಅವರನ್ನು ನಿಂದಿಸಿ ನಮ್ಮೊಂದಿಗೆ ಜಗಳವಾಡಿದರು. ಮಳೆಯಿಂದ ನೆಲ ಒದ್ದೆಯಾಗಿದ್ದರಿಂದ ನಾವು ಮರದ ಹಾಸಿಗೆಗಳನ್ನು ತರಲು ಪ್ರಯತ್ನಿಸಿದ್ದೇವೆ. ಅಷ್ಟರಲ್ಲಿ ಮಹಿಳಾ ಪೇದೆಗಳಿಗಾಗಿ ಕಾಯದೆ ಪುರುಷ ಪೊಲೀಸರು ನಮ್ಮನ್ನು ತಳ್ಳಲು ಶುರು ಮಾಡಿದರು. ನಮ್ಮಲ್ಲಿ ಕೆಲವರ ತಲೆಗೆ ಕೋಲಿನಿಂದ ಹೊಡೆದರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: PT Usha: ಜಂತರ್ ಮಂತರ್ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಕೊನೆಗೂ ಭೇಟಿಯಾದ ಪಿಟಿ ಉಷಾ
'ಇದಕ್ಕಾ ನಾವು ರಾಷ್ಟ್ರಕ್ಕೆ ಪದಕ ಗೆದ್ದು ಕೊಟ್ಟಿರೋದು?'
ಪೊಲೀಸರ ವರ್ತನೆಗೆ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಒಲಿಂಪಿಯನ್ ವಿನೇಶ್ ಫೋಗಟ್, ಇಂತಹ ದಿನಗಳನ್ನು ನೋಡಲು ನಾವು ರಾಷ್ಟ್ರಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ? ಕಾನ್ಸ್ಟೇಬಲ್ ನಮ್ಮನ್ನು ಹಿಡಿದು ತಳ್ಳುವಾಗ ಮಹಿಳಾ ಪೊಲೀಸರು ಎಲ್ಲಿದ್ದರು? ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ರಾಷ್ಟ್ರಕ್ಕಾಗಿ ಪದಕ ಗೆದ್ದಿರುವ ಕ್ರೀಡಾಪಟುಗಳ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ನಡೆಯನ್ನು ಖಂಡಿಸಿ ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಬಜರಂಗ್ ಪೂನಿಯಾ, ನಾನು ಗೆದ್ದಿರುವ ಎಲ್ಲಾ ಪದಕಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ವಿನಂತಿಸುತ್ತೇನೆ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಈ ಮಧ್ಯೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೋಮನಾಥ್ ಭಾರ್ತಿ ಅವರು, ‘ಮಳೆಯಿಂದಾಗಿ ಮಲಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಸಿಗೆ ಒದಗಿಸುವಂತೆ ಕುಸ್ತಿಪಟುಗಳು ಬೇಡಿಕೆ ಇಟ್ಟಿದ್ದರು. ಅದನ್ನು ಪೂರೈಸಿದ್ದಕ್ಕಾಗಿ ನನ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ