ಭೋಪಾಲ್: ಇನ್ನು ಮುಂದೆ ಹಿಂದೂ ಯುವತಿಯರು (Hindu Girls) ಹೊರಗಡೆ ಓಡಾಡುವಾಗ ತಮ್ಮ ಪರ್ಸ್ನಲ್ಲಿ ಲಿಪ್ಸ್ಟಿಕ್, (Lipstick) ಬಾಚಣಿಕೆಯ (Comb) ಬದಲು ಚಾಕುಗಳನ್ನು ಇರಿಸಿಕೊಳ್ಳಬೇಕು. ಈ ತರಹ ಚಾಕುಗಳನ್ನು ಸದಾಕಾಲ ಇಟ್ಟುಕೊಳ್ಳುವುದರಿಂದ ಯುವತಿಯರು ಜಿಹಾದಿಗಳನ್ನು (Jihad) ದೂರ ಇರಿಸಬಹುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ (Sadhvi Prachi) ಹೇಳಿದ್ದಾರೆ.
ಮಧ್ಯ ಪ್ರದೇಶದ ರಾಟ್ಲಮ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಯುವತಿಯರು ಓಡಾಡುವಾಗ ಪರ್ಸ್ನಲ್ಲಿ ಲಿಪ್ಸ್ಟಿಕ್, ಬಾಚಣಿಕೆಯ ಬದಲು ಚಾಕುಗಳನ್ನು ಇರಿಸಿಕೊಂಡರೆ ಜಿಹಾದಿಗಳನ್ನು ದೂರ ಇರಿಸಬಹುದು. ಮಾತ್ರವಲ್ಲದೇ, ಹಿಂದೂ ಹೆಣ್ಣು ಮಕ್ಕಳು ಮುಸ್ಲಿಂ ಹೆಣ್ಣು ಮಕ್ಕಳಂತೆ ಸಂಪ್ರದಾಯವನ್ನು ಬಿಡಬಾರದು. ಸಂಪ್ರದಾಯವನ್ನು ಪಾಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಉಲ್ಲೇಖ
ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಬರ್ಬರ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಸಾಧ್ವಿ ಪ್ರಾಚಿ, ಲವ್ ಜಿಹಾದಿಗಳು ನಿಮ್ಮ ಕುತ್ತಿಗೆ ಕತ್ತರಿಸಲು ಸಿದ್ಧರಿದ್ದರೆ, ನೀವು ಅದಕ್ಕೂ ಮೊದಲು ಅವರ ಕತ್ತು ಕತ್ತರಿಸಬೇಕು. ಪ್ರೀತಿಯ ನಾಟಕವಾಡಿ ಜಿಹಾದಿಗಳು ನಮ್ಮ ಹಿಂದೂ ಹೆಣ್ಣು ಮಕ್ಕಳ ಕುತ್ತಿಗೆ ಕಡಿಯುತ್ತಿದ್ದಾರೆ. ಹಾಗಾಗಿ ಅವರ ಕತ್ತು ಕೂಡ ಕತ್ತರಿಸಲು ಚಾಕುವನ್ನು ಯುವತಿಯರು ಇರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಮೌಲಾನಾ ಅರ್ಷದ್ ಮದನಿ ವಿರುದ್ಧ ಕಿಡಿ
ಓಂ ಮತ್ತು ಅಲ್ಲಾ ಎರಡೂ ಒಂದೇ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಜಮಿಯಾತ್ ಉಲೇಮಾ- ಇ- ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ವಿರುದ್ಧವೂ ಕಿಡಿಕಾರಿರುವ ಸಾದ್ವಿ ಪ್ರಾಚಿ, ಮದನಿಗೆ ಹಿಂದುತ್ವದ ಬಗ್ಗೆ ಎಬಿಸಿಡಿ ಗೊತ್ತಿಲ್ಲ. ಭಾರತವು ಒಂದು ಹಿಂದೂ ರಾಷ್ಟ್ರ. ಅದು ಭವಿಷ್ಯದಲ್ಲಿಯೂ ಹಾಗೆಯೇ ಇರಲಿದೆ. ಮದನಿ ಮಾದರಿಯ ಜನರಿಂದಾಗಿಯೇ 1947ರಲ್ಲಿ ಭಾರತವು ಧರ್ಮದ ಆಧಾರದ ಮೇಲೆ ಇಬ್ಭಾಗವಾಯಿತು. ಹಿಂದೂಗಳ ಜತೆಗೆ ಜೀವಿಸಲ್ಲ ಎಂದು ಈ ನೆಲವನ್ನು ತೊರೆದು ಹೋದವರು ಅನೇಕರಿದ್ದಾರೆ. ಹಲವು ಪ್ರಾಣತ್ಯಾಗದ ಬಳಿಕ ಹಿಂದೂಗಳಿಗೆ ಹಿಂದೂಸ್ಥಾನ ಸಿಕ್ಕಿದೆ ಎಂದು ಹೇಳಿದರು.
ಸಂತರು ಜಮಿಯಾತ್ ಬಹಿಷ್ಕಾರ ಮಾಡಿದ್ದು ಉತ್ತಮ ನಿರ್ಧಾರ
ಮದನಿಯ ಪೂರ್ವಜರು ಕೂಡ 100-150 ವರ್ಷಗಳ ಮುನ್ನ ಹಿಂದೂಗಳಾಗಿದ್ದರು. ಬಲವಂತವಾಗಿ ಅವರನ್ನು ಮತಾಂತರಿಸಲಾಗಿದೆ ಎಂದಿರುವ ಸಾಧ್ವಿ ಪ್ರಾಚಿ, ಮದನಿ ಘರ್ ವಾಪಸಿ ಮಾಡಲಿ. ಭಾರತ ಹಿಂದೂ ರಾಷ್ಟ್ರವಾದಾಗ ಮಾತ್ರವೇ ಲವ್ ಜಿಹಾದ್ ಪೂರ್ಣವಾಗಿ ನಿಲ್ಲಲಿದೆ. ಮದನಿಯ ಹೇಳಿಕೆಯನ್ನು ಖಂಡಿಸಿ ಜೈನ ಆಚಾರ್ಯ ಲೋಕೇಶ್ ಮುನಿ ಹಾಗೂ ಇತರೆ ಸಂತರು ಜಮಿಯಾತ್ ಅನ್ನು ಬಹಿಷ್ಕಾರ ಮಾಡಿದ್ದು ಖಂಡಿತವಾಗಿಯೂ ಸರಿಯಾದ ನಿರ್ಧಾರ. ದೇಶಕ್ಕೆ ಅಂತಹ ಸಂತರ ಅವಶ್ಯಕತೆ ಇದೆ ಎಂದು ಸಾಧ್ವಿ ಹೇಳಿದರು.
ಸದ್ಯ ಸಾದ್ವಿ ಪ್ರಾಚಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದ್ದು, ಒಂದಷ್ಟು ಜನ ವಿವಾದಾತ್ಮಕ ಹೇಳಿಕೆಯ ವಿರುದ್ಧ ಸಿಡಿದೆದ್ದರೆ, ಮತ್ತೊಂದಷ್ಟು ಜನರು ಸಾಧ್ವಿ ಅವರನ್ನು ಬೆಂಬಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ