ಉತ್ತರಪ್ರದೇಶ (ಸೆಪ್ಟೆಂಬರ್ 14); ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯಂತೆಯೇ ಅಧಿಕಾರ ಹೊಂದಿರುವ ವಿಶೇಷ ಪಡೆಯನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಈ ಪಡೆ ವಾರಂಟ್ ಇಲ್ಲದೆಯೂ ಯಾವುದೇ ಸ್ಥಳವನ್ನು ಶೋಧಿಸುವ ಮತ್ತು ಯಾವುದೇ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ಹೊಂದಲಿದೆ. ಈ ವಿಶೇಷ ಪಡೆಗಳನ್ನು ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಸರ್ಕಾರಿ ಆಡಳಿತ ಕಟ್ಟಡಗಳು, ಬ್ಯಾಂಕುಗಳು ಮತ್ತು ಇತರ ಸರ್ಕಾರಿ ಕಚೇರಿಗಳನ್ನು ರಕ್ಷಿಸಲು ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆ ಅಥವಾ ಯುಪಿಎಸ್ಎಸ್ಎಫ್ ಪಡೆ ಎಂಬ ಹೆಸರಿನಲ್ಲಿ ನಿಯೋಜಿಸಲಾಗುವುದು. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆ ಎಂದು ಉತ್ತರಪ್ರದೇಶ ಸರ್ಕಾರ ಭಾನುವಾರ ತಿಳಿಸಿದೆ.
ಉತ್ತರಪ್ರದೇಶ ಸರ್ಕಾರದ ಟ್ವಿಟರ್ ಖಾತೆಯನ್ನು ನಿಭಾಯಿಸುವ ಹೆಚ್ಚುವರಿ ಮುಖ್ಯ ಗೃಹ ಕಾರ್ಯದರ್ಶಿ ಅವನೀಶ್ ಅವಸ್ಥಿ ಈ ಸಂಬಂಧ ಭಾನುವಾರ ತಡರಾತ್ರಿ ಸರಣಿ ಟ್ವೀಟ್ ಮಾಡಿದ್ದು ಈ ಟ್ವೀಟ್ನಲ್ಲಿ, "ಆರಂಭಿಕ ಹಂತದಲ್ಲಿ ಯುಪಿಎಸ್ಎಸ್ಎಫ್ನ ಎಂಟು ಬೆಟಾಲಿಯನ್ಗಳನ್ನು ₹ 1,747.06 ಕೋಟಿ ವೆಚ್ಚದಲ್ಲಿ ರಚಿಸಲಾಗುವುದು. ಈ ಪಡೆಗೆ ಆರಂಭಿಕ ಮೂಲಸೌಕರ್ಯಗಳು ಯುಪಿ ಪೊಲೀಸರ ವಿಶೇಷ ಘಟಕವಾದ ಪಿಎಸಿ (ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿ) ಯಿಂದ ಬರುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಯುಪಿಎಸ್ಎಸ್ಎಫ್ ಕನಸಿನ ಯೋಜನೆಯಾಗಿದೆ" ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "ಈ ಪಡೆ ಯಾವುದೇ ಮ್ಯಾಜಿಸ್ಟ್ರೇಟ್ನ ಪೂರ್ವಾನುಮತಿ ಇಲ್ಲದೆ ಮತ್ತು ಯಾವುದೇ ವಾರಂಟ್ ಇಲ್ಲದೆಯೂ ಸಂಶಯಾಸ್ಪದ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು. ಯಾವುದೇ ಜಾಗವನ್ನು ಶೋಧಿಸುವ ಅಧಿಕಾರವನ್ನು ಹೊಂದಲಿದೆ. ಹೀಗಾಗಿ ಈ ವಿಭಾಗಕ್ಕೆ ಪ್ರತ್ಯೇಕ ನಿಯಮಗಳನ್ನೂ ಸಹ ರೂಪಿಸಲಾಗುವುದು" ಎಂದು ಮಾಹಿತಿ ನೀಡಲಾಗಿದೆ.
ಆದರೆ, “ಉತ್ತರಪ್ರದೇಶ ಸರ್ಕಾರದ ಈ ಕನಸಿನ ಪಡೆ ಶೋಧ ಮತ್ತು ಬಂಧನದ ಹೆಸರಿನಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಅನೇಕರು ಸರ್ಕಾರದ ಎದುರು ತಮ್ಮ ವಿಮರ್ಶೆಗಳನ್ನು ಮುಂದಿಟ್ಟಿದ್ದಾರೆ. ಅಲ್ಲದೆ, ಅನೇಕರು ಸರ್ಕಾರದ ನಡೆಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರ ಈ ಯಾವ ವಿಮರ್ಶೆ ಹಾಗೂ ಟೀಕೆಗೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ