ಕಳೆದ ವರ್ಷದಂತೆಯೇ ಈ ವರ್ಷವೂ ಸಹ ಕೋವಿಡ್ (Covid case) ಪ್ರಕರಣಗಳ ಜೊತೆಗೆ ಹೊಸ ವರ್ಷ ಆರಂಭವಾಗಿದ್ದು ಹಲವರಿಗೆ ಮತ್ತೆ ನಿರಾಸೆ ಮೂಡುವಂತೆ ಮಾಡಿದ್ದರೆ, ತಜ್ಞರ ( Experts) ಪ್ರಕಾರ ಈ ವರ್ಷದಲ್ಲೇ ಕೊರೋನಾ ಬಹುತೇಕ ಇಳಿಮುಖವಾಗಲಿದೆ ಎಂಬ ವಾದದಿಂದ ಸಾಕಷ್ಟು ಜನರು ನಿಟ್ಟುಸಿರನ್ನೂ ಸಹ ಬಿಟ್ಟಿದ್ದಾರೆ.ಅಲ್ಲದೆ ಉತ್ತರಾಖಂಡ, ಉತ್ತರ ಪ್ರದೇಶ ಸೇರಿದಂತೆ ಈ ವರ್ಷ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಕಾವು ಇದೀಗ ದೇಶದಲ್ಲೆಲ್ಲ ನಿಧಾನವಾಗಿ ಆವರಿಸತೊಡಗಿದೆ. ಹಾಗೆ ನೋಡಿದರೆ ಕಳೆದ ಒಂದು ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ( Uttar Pradesh) ಹಲವಾರು ರಾಜಕೀಯ (Political Activities) ಚಟುವಟಿಕೆಗಳು ಗರಿಗೆದರಿವೆ. ಉತ್ತರಾಖಂಡದಲ್ಲೂ (Uttarakhand) ಸಹ ಪರಿಸ್ಥಿತಿ ಭಿನ್ನವಾಗಿಲ್ಲ. ದಿನಕ್ಕೊಂದು ಸಭೆ ಸಮಾರಂಭಗಳು ನಡೆಯುತ್ತಲೇ ಇದ್ದವು.
ವರ್ಚುಯಲ್ ರ್ಯಾಲಿ ಪರಿಶೀಲಿಸಿ
ಆದರೆ ಇದೀಗ, ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದ್ದು ಸಾಕಷ್ಟು ರಾಜಕೀಯ ನಾಯಕರಿಗೆ ಒಂದು ರೀತಿಯಲ್ಲಿ ತಲೆ ನೋವಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸೋಂಕು ನಿಯಂತ್ರಿಸಲು ದೇಶದೆಲ್ಲೆಡೆ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧವಾಗಿ ಈಗ ಉತ್ತರಾಖಂಡದ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ವರ್ಚುಯಲ್ ರ್ಯಾಲಿಗಳನ್ನು ಪರಿಗಣಿಸುವುದನ್ನು ಪರಿಶೀಲಿಸಲು ಕರೆ ನೀಡಿದೆ.
ಸದ್ಯ ಮುಂದಿನ ತಿಂಗಳು ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈಗಾಗಲೇ ಕೋವಿಡ್ ಪ್ರಕರಣಗಳು ಸಹ ಏರುತ್ತಿವೆ. ಈ ಕುರಿತು ಹೇಳಿಕೆ ನೀಡಿರುವ ಉತ್ತರಾಖಂಡ ಹೈಕೋರ್ಟ್ ಚುನಾವಣಾ ಆಯೋಗ ಕುರಿತು ನ್ಯಾಯಾಲಯಗಳು ಹಾಗೂ ಇತರೆ ಕಚೇರಿಗಳು ಆನ್ಲೈನ್ನಲ್ಲಿ ಕೆಲಸ ನಿರ್ವಹಿಸುವಾಗ ಯಾಕೆ ಚುನಾವಣಾ ರ್ಯಾಲಿಗಳನ್ನು ಆನ್ಲೈನ್ನಲ್ಲಿ ಆಯೋಜಿಸಬಾರದು ಎಂಬ ಪ್ರಶ್ನೆ ಕೇಳಿರುವುದಾಗಿ ವರದಿಯಾಗಿದೆ.
ಚುನಾವಣೆ ಮುಂದೂಡುವ ಅರ್ಜಿ ವಿಚಾರಣೆ
ಉತ್ತರಾಖಂಡದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ವಿವಿಧ ಪಕ್ಷಗಳು ಚುನಾವಣೆ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಎತ್ತಿಕೊಂಡಿದ್ದ ಹೈಕೋರ್ಟ್ ಈ ಮೇಲಿನ ಸಲಹೆ ನೀಡಿರುವುದಾಗಿ ತಿಳಿದುಬಂದಿದೆ. ವಿಭಾಗೀಯ ಪೀಠದ ಆ್ಯಕ್ಟಿಂಗ್ ಚೀಫ್ ಜಸ್ಟಿಸ್ ಆಗಿರುವ ಸಂಜಯ್ ಕುಮಾರ್ ಮಿಶ್ರಾ ಹಾಗೂ ಅಲೋಕ್ ವರ್ಮಾ ಅರ್ಜಿ ವಿಚಾರಣೆ ನಡೆಸಿ ಈ ರೀತಿ ಹೇಳಿರುವುದಾಗಿ ವರದಿಯಾಗಿದೆ.
ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ವಿಚಾರಗಳನ್ನು ಹೊರಹಾಕಿದೆ ಹಾಗೂ ಅವುಗಳೆಂದರೆ, "ಮೊದಲನೆಯದಾಗಿ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ಸಂಬಂಧಿ ರ್ಯಾಲಿಗಳನ್ನು ವರ್ಚುಯಲ್ ಆಗಿ ನಡೆಸಲು ಅವಕಾಶವಿದೆಯೇ ಎಂದೊಮ್ಮೆ ಪರಿಶೀಲಿಸಿ ಹಾಗೂ ಎರಡನೆಯದಾಗಿ ಭವಿಷ್ಯದಲ್ಲಿ ಚುನಾವಣೆಗಳನ್ನು ಆನ್ಲೈನ್ ಮೂಲಕವೇ ನಡೆಸಲು ಸಾಧ್ಯವಾಗಬಹುದರ ಬಗ್ಗೆ ವಿಚಾರಿಸಿ" ಎಂಬ ಸಲಹೆಗಳನ್ನು ನೀಡಿರುವುದಾಗಿ ಉತ್ತರಾಖಂಡದ ಮುಖ್ಯ ಸ್ಟ್ಯಾಂಡಿಂಗ್ ಕೌನ್ಸೆಲ್ ಆಗಿರುವ ಸಿ.ಎಸ್. ರಾವತ್ ಹೇಳಿದ್ದಾರೆ.
ಮುಂದಿನ ವಿಚಾರಣೆ ಜನವರಿ 12ಕ್ಕೆ
ಈ ಸಲಹೆಗಳನ್ನು ಹೊರತುಪಡಿಸಿ ನ್ಯಾಯಪೀಠವು ಉತ್ತರಾಖಂಡದಲ್ಲಿ ಜಿಲ್ಲಾಡಳಿತ ರಚಿಸಿರುವ ಸಮಿತಿಗಳಿಂದ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಅದು ಉಲ್ಬಣಗೊಳ್ಳದಂತೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ವಿವರಣೆ ಕೇಳಿದೆ. ಈ ಕುರಿತು ಮತ್ತೆ ಮುಂದಿನ ವಿಚಾರಣೆ ಜನವರಿ 12ರಂದು ನಡೆಯಲಿರುವುದಾಗಿ ಕೋರ್ಟ್ ಹೇಳಿದೆ.
ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಚಾರಕ್ಕಾಗಿ ಭರ್ಜರಿ ರ್ಯಾಲಿ ಹಾಗೂ ಸಭೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭಾನುವಾರದಂದು ಪ್ರಿಯಾಂಕಾ ಗಾಂಧಿ ವಾದ್ರಾ ಅಲ್ಮೋರಾ ಹಾಗೂ ಶ್ರೀನಗರ ಗಡ್ವಾಲ್ ಪ್ರದೇಶಗಳ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದರೆ, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಗುರುವಾರದಂದು ಉತ್ತರಕಾಶಿಯಲ್ಲಿ ನಡೆಯಲಿರುವ ಬಿಜೆಪಿ ಪರ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮಧ್ಯೆ ಉತ್ತರಾಖಂಡದಲ್ಲಿ 505 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ರಾಜ್ಯದ ಪಾಸಿಟಿವಿಟಿ ದರ ಶೇ. 2.74ಕ್ಕೆ ಏರಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ