ಮುಂಬೈ (ಅಕ್ಟೋಬರ್ 31); ಬಾಲಿವುಡ್ ನಟಿ ಊರ್ಮಿಲಾ ಮಾತೋಂಡ್ಕರ್ ಅವರನ್ನು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯ ವಿಧಾನ ಪರಿಷತ್ತಿಗೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಶುಕ್ರವಾರ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯ ವಿಧಾನಸಭೆಯ ಮೇಲ್ಮನೆಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಿದ 12 ಅಭ್ಯರ್ಥಿಗಳ ಪೈಕಿ ಊರ್ಮಿಳಾ ಮಾತೋಂಡ್ಕರ್ ಅವರ ಹೆಸರು ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಮಹಾರಾಷ್ಟ್ರ ರಾಜಕೀಯ ವಲಯದಿಂದ ಬಲವಾಗಿ ಕೇಳಿಬರುತ್ತಿದೆ.
ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವ ಕುರಿತು ಸ್ಪಷ್ಟೀಕರಣ ನೀಡಿರುವ ಶಿವಸೇನೆ ವಕ್ತಾರರೂ ಆದ ಸಂಜಯ್ ರೌತ್, “ನಟಿ ಊರ್ಮಿಳಾ ಅವರನ್ನು ಪರಿಷತ್ಗೆ ನಾಮ ನಿದೇರ್ಶನ ಮಾಡುವ ಊಹಾಪೋಹಗಳು ಕೇಳಿ ಬರುತ್ತಿವೆ. ಆದರೆ, ಯಾರನ್ನೂ ಮೇಲ್ಮನೆಗೆ ಆಯ್ಕೆ ಮಾಡಬೇಕು? ಯಾರಿಗೆ ಅವಕಾಶ ನೀಡಬೇಕು? ಎಂಬುದು ಮುಖ್ಯಮಂತ್ರಿಗಳ ವಿವೇಚನಾ ಶಕ್ತಿಗೆ ಬಿಟ್ಟ ವಿಚಾರ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಇಡೀ ಪಕ್ಷ ಬೆಂಬಲ ನೀಡಲಿದೆ” ಎಂದಿದ್ದಾರೆ.
46 ವರ್ಷದ ಉರ್ಮಿಲಾ ಮಾತೋಂಡ್ಕರ್ ಅವರು ಕಳೆದ ವರ್ಷ ಮುಂಬೈ ಉತ್ತರ ಕ್ಷೇತ್ರದದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಸೋಲಿನಿಂದ ನಿರಾಶೆಗೆ ಒಳಗಾದ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಅಧಿಕವಾಗಿದೆ, ಪಕ್ಷದ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡುತ್ತಾರೆ ಎಂದು ಆರೋಪಿಸಿ ಪಕ್ಷ ತೊರೆದಿದ್ದರು. ಅಲ್ಲದೆ, ಶಿವಸೇನೆಗೆ ಸೇರ್ಪಡೆಯಾಗಿದ್ದರು.
ಸಾಹಿತ್ಯ, ಕಲೆ, ವಿಜ್ಞಾನ, ಸಹಕಾರಿ ಆಂದೋಲನ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಿಂದ 12 ಸದಸ್ಯರನ್ನು ಶಾಸಕಾಂಗ ಮಂಡಳಿಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರು ಸಂವಿಧಾನದಿಂದ ಆದೇಶಿಸಿದ್ದಾರೆ.
ಹೀಗಾಗಿ ಈ ಸ್ಥಾನಗಳಿಗೆ ಯಾರನ್ನು ನಾಮ ನಿರ್ದೇಶನ ಮಾಡಬೇಕು? ಎಂದು ಚರ್ಚಿಸಲು ಮಹಾರಾಷ್ಟ್ರ ಸಚಿವ ಸಂಪುಟ ಗುರುವಾರ ಸಭೆ ಸೇರಿತ್ತು. ಈ ಸಭೆಯಲ್ಲಿ ಆಡಳಿತರೂಢ ಸರ್ಕಾರದ ಮೂರೂ ಪಕ್ಷಗಳಾದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ತಲಾ ನಾಲ್ಕು ಸದಸ್ಯರನ್ನು ಕಣಕ್ಕಿಳಿಸುವ ಕುರಿತು ನಿರ್ಧಾರ ತೆಗೆದುಕೊಂಡಿವೆ.
ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಅವರು ಈ ಕುರಿತು ಮಾತನಾಡಿದ್ದು, “ನಾಮ ನಿರ್ದೇಶನಗೊಳ್ಳುವವರ ಹೆಸರುಗಳನ್ನು ಮಿತ್ರ ಪಕ್ಷದ ಎಲ್ಲಾ ನಾಯಕರು ಒಟ್ಟಾಗ ಅಂತಿಮಗೊಳಿಸುತ್ತಾರೆ. ಮುಖ್ಯಮಂತ್ರಿಗಳು ಅದನ್ನು ರಾಜ್ಯಪಾಲರಿಗೆ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Yash: ಯಥರ್ವ್ ಮೊದಲನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಶೇಷ ಪೋಸ್ಟ್ ಹಾಕಿದ ಯಶ್ - ರಾಧಿಕಾ ಪಂಡಿತ್
ಪಿಟಿಐ ಪ್ರಕಾರ, ಮರಾಠಿ ನಟ ಮತ್ತು ಶಿವಸೇನಾ ನಾಯಕ ಆದೇಶ್ ಬಂಡೇಕರ್, ಗಾಯಕ ಆನಂದ್ ಶಿಂಧೆ, ಎನ್ಸಿಪಿ ನಾಯಕ ಏಕನಾಥ್ ಖಡ್ಸೆ (ಅವರು ಇತ್ತೀಚೆಗೆ ಬಿಜೆಪಿಯನ್ನು ತೊರೆದು ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ) ಅವರ ಹೆಸರನ್ನು ಸಹ ಆಯ್ಕೆಗೆ ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ಇದೆ.
ಊರ್ಮಿಳಾ ಮಾತೋಂಡ್ಕರ್ ಮತ್ತು ಮತ್ತೋರ್ವ ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ಟ್ವೀಟ್ ವಾರ್ ಇತ್ತೀಚೆಗೆ ಇಡೀ ದೇಶದ ಗಮನ ಸೆಳೆದಿತ್ತು. ಊರ್ಮಿಳಾ ಅವರನ್ನು ಅವಾಚ್ಯ ಪದಗಳಿಂದ ನಿಂಧಿಸಿದ್ದ ಕಂಗನಾ ಆಕೆಯನ್ನು "ಸೆಮಿ ಪಾರ್ನ್ ನಟಿ" ಎಂದು ದೂಷಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ