ನವದೆಹಲಿ (ಜ.21): ಉನ್ನತ ಸರ್ಕಾರಿ ಅಧಿಕಾರಿಯಾಗಬೇಕೆಂಬ ಆಸೆಪಟ್ಟಿದ್ದ ದೆಹಲಿಯ ಸಾಫ್ಟ್ವೇರ್ ಇಂಜಿನಿಯರ್ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಲಿಲ್ಲ. ಇದರಿಂದ ಬೇಸತ್ತಿದ್ದ ಯುವಕ ಮೆಟ್ರೋ ಹಳಿಗಳ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.
ಯುಪಿಎಸ್ಸಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದ ಟೆಕ್ಕಿ ಪ್ರವೇಶ ಪರೀಕ್ಷೆಯಲ್ಲೇ ಫೇಲ್ ಆಗಿದ್ದ. ಸರ್ಕಾರದ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಆತನಿಗೆ ಭಾರೀ ನಿರಾಸೆಯಾಗಿತ್ತು. ಹೀಗಾಗಿ, ಅದೇ ಬೇಸರದಲ್ಲಿ ಮೆಟ್ರೋ ರೈಲು ಬರುತ್ತಿದ್ದಾಗ ಹಳಿಗಳ ಮೇಲೆ ಹಾರಿದ್ದ. ಆದರೆ, ತಕ್ಷಣ ಮೆಟ್ರೋ ಚಾಲಕ ಬ್ರೇಕ್ ಹಾಕಿದ್ದರಿಂದ ಆ ಯುವಕನ ಪ್ರಾಣ ಉಳಿದುಕೊಂಡಿದೆ.
ದೆಹಲಿಯ ಕರೋಲ್ ಮೆಟ್ರೋ ಸ್ಟೇಷನ್ನಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಯುವಕ ಹಳಿಗಳ ಮೇಲೆ ಹಾರುತ್ತಿದ್ದಂತೆ ಮೆಟ್ರೋ ಆಪರೇಟರ್ ಬ್ರೇಕ್ ಹಾಕಿ ಆತನನ್ನು ರಕ್ಷಿಸಿದ್ದಾರೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಇಂಡಿಯಾ ಟುಡೇಗೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಭಾರೀ ಹಿಮಪಾತ: ತನ್ನದೇ ಮದುವೆಗೆ ಗೈರಾದ ಯೋಧ; ಮುಂದೇನಾಯ್ತು ಗೊತ್ತಾ?
ಕೋಚಿಂಗ್ ಸೆಂಟರ್ಗೆ ಹೋಗಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ 23 ವರ್ಷದ ಟೆಕ್ಕಿ ಈ ಬಾರಿಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಲಿಲ್ಲ. ಆತನ ತಂದೆ ತೆಲಂಗಾಣದಲ್ಲಿ ಶಿಕ್ಷಕರಾಗಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ನೊಂದುಕೊಂಡು ಯುವಕ ಸೋಮವಾರ ಬೆಳಗ್ಗೆ ಮೆಟ್ರೋ ಹಳಿಗಳ ಮೇಲೆ ಜಿಗಿದಿದ್ದಾನೆ. ಈ ವೇಳೆ ತುರ್ತು ಬ್ರೇಕ್ ಹಾಕಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಆತನ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ ಎಂದು ಡಿಸಿಪಿ ವಿಕ್ರಂ ಪರವಾಲ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ