ಬರೇಲಿ (ಉತ್ತರ ಪ್ರದೇಶ): ದೇಶದಲ್ಲಿ ವರದಕ್ಷಿಣೆ (Dowry) ಎಂಬ ಪಿಡುಗು ಇನ್ನೂ ನಿಲ್ಲುತ್ತಿಲ್ಲ. ದೇಶದಲ್ಲಿ ಹಲವು ಯುವಕರು ವಧು ಸಿಗದೆ ಪರಿತಪಿಸುತ್ತಿದ್ದಾರೆ. ಅಂತಹದರಲ್ಲೂ ವರದಕ್ಷಿಣೆಗಾಗಿ ಪೀಡಿಸುವ ಜನರು ಇನ್ನೂ ನಮ್ಮ ಮಧ್ಯೆ ಇದ್ದಾರೆ. ದೇಶದಲ್ಲಿ ವರದಕ್ಷಿಣೆ ಎಂಬುದು ಆಳವಾಗಿ ಬೇರೂರಿದೆ ಎಂಬುದಕ್ಕೆ ಉತ್ತರ ಪ್ರದೇಶದ (Uttar Pradesh) ರಾಯ್ಬರೇಲಿಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ವರದಕ್ಷಿಣೆಯಾಗಿ, 2.5 ಲಕ್ಷ ಹಣ, ಒಂದು ಕಾರು (Car) ತರಲಿಲ್ಲ ಎಂಬ ಕಾರಣಕ್ಕೆ ಸೊಸೆಗೆ ಅತ್ತೆ-ಗಂಡ ಸೇರಿ ಆ್ಯಸಿಡ್ (Acid) ಕುಡಿಸಿ ಸಾವಿಗೆ ಕಾರಣವಾದ ದಾರುಣ ಘಟನೆ ನಡೆದಿದೆ.
ಮೃತಳನ್ನು ಉತ್ತರ ಪ್ರದೇಶದ ಉಡಾಲ ಜಾಗೀರ್ ಗ್ರಾಮದ ನಿವಾಸಿ ಅಂಜುಮ್ (25) ಎಂದು ಗುರುತಿಸಲಾಗಿದೆ. ವರದಕ್ಷಿಣೆ ತರದ ಕಾರಣ ಆಕೆಯ ಅತ್ತೆ ಬಲವಂತದಿಂದ ಆ್ಯಸಿಡ್ ಕುಡಿಸಿದ್ದು, ಸಂತ್ರಸ್ತೆ ಮೂರು ದಿನ ನರಳಾಡಿದ ಸಾವನ್ನಪ್ಪಿದ್ದಾರೆ. 25 ವರ್ಷದ ಅಂಜುಮ್ 6 ವರ್ಷಗಳ ಹಿಂದೆ ಇಲಿಯಾಸ್ ಎಂಬಾತನನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ದಿನದಿಂದ ಗಂಡ ಹಾಗೂ ಆತ್ತೆ ವರದಕ್ಷಿಣೆ ರೂಪದಲ್ಲಿ ಏನೂ ತಂದಿಲ್ಲ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ
ಸಾಯುವ ಕೆಲವೇ ಗಂಟೆಗಳ ಹಿಂದೆ ಸಂತ್ರಸ್ತೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ಆಕೆಯ ಪೋಷಕರು ವರದಕ್ಷಿಣೆಯಾಗಿ 2.50 ಲಕ್ಷ ನಗದು ಮತ್ತು ಕಾರನ್ನು ನೀಡಲು ಸಾಧ್ಯವಾಗದ ಕಾರಣ ತನ್ನ ಅತ್ತೆ ಹಾಗೂ ಗಂಡ ಒತ್ತಾಯದಿಂದ ಆ್ಯಸಿಡ್ ಕುಡಿಸಿದರು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Crime News: ಸಾಫ್ಟ್ವೇರ್ ಗಂಡನ ಬಳಿ ಹೋಗಲಿಲ್ಲ ಅಂತ ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!
ವರದಕ್ಷಿಣೆ ನೀಡುವ ಸ್ಥಿತಿಯಲ್ಲಿ ಕುಟುಂಬಸ್ತರಿರಲಿಲ್ಲ
ಅಂಜುಮ್ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿ ಕೆಲವು ದಿನಗಳ ನಂತರ ವಾಪಸ್ ಬಂದಿದ್ದರು. ಫೆಬ್ರವರಿ 20 ರಂದು ಅಂಜುಮ್ ಗಂಡನ ಮನೆಯವರು ಮತ್ತೆ ವರದಕ್ಷಿಣೆ ತರುವಂತೆ ಒತ್ತಾಯ ನೀಡಲು ಶುರು ಮಾಡಿದ್ದಾರೆ. ಇಂದೇ ಹೋಗಿ ತರಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಅಂಜುಮ್, ತಮ್ಮ ಪೋಷಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಲ್ಲಿ ಹಣವೂ ಇಲ್ಲ, ಕಾರು ಕೊಡಿಸುವ ಶಕ್ತಿ ಇಲ್ಲ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಅತ್ತೆ ಹಾಗೂ ಗಂಡ ಆಕೆಗೆ ಆ್ಯಸಿಡ್ ಕುಡಿಸಿ ಸಾಯಿಸಿದ್ದಾರೆ.
ಪೋಷಕರಿಂದ ದೂರು ದಾಖಲು
ಅಂಜುಮ್ ಪೋಷಕರು ನೀಡಿದ ದೂರಿನ ಮೇಲೆ ಅಂಜುಮ್ ಪತಿ ಇಲಿಯಾಸ್ ಹಾಗೂ ಆತನ ತಾಯಿಯ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬರೇಲಿ (ಗ್ರಾಮೀಣ) ಪೊಲೀಸ್ ಅಧೀಕ್ಷಕ ರಾಜ್ಕುಮಾರ್ ಅಗರ್ವಾಲ್ ಮಾತನಾಡಿ, ಇದೊಂದು ಗಂಭೀರ ವಿಷಯವಾಗಿದೆ ಮತ್ತು ನವಾಬ್ಗಂಜ್ ಮತ್ತು ಬಿತ್ರಿ ಚೈನ್ಪುರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.
ಆ್ಯಸಿಡ್ ಕುಡಿಸುವ ಮುನ್ನ ಹಲ್ಲೆ
ವರದಕ್ಷಿಣೆ ವಿಚಾರವಾಗಿ ಅಂಜುಮ್ ಮೇಲೆ ಗಂಡ ಮತ್ತು ಅತ್ತೆ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಆ ನಂತರ ಅವಳಿಗೆ ಆ್ಯಸಿಡ್ ಕುಡಿಸಿ ಆಕೆಯನ್ನು ಅಲ್ಲೆ ಬಿಟ್ಟು ಅತ್ತೆ ಹೋಗಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 25ರಂದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಂಶುಪಾಲೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹಳೆ ವಿದ್ಯಾರ್ಥಿ
ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿಯೊಬ್ಬ ಕಾಲೇಜು ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಪ್ರಾಂಶುಪಾಲೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.
ಅಂಕಪಟ್ಟಿ ನೀಡಲು ತಡ ಮಾಡಿದ ಕಾರಣ ಆರೋಪಿ ಯುವಕ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅದೇ ದಿನ ಆರೋಪಿ ಅಶುತೋಷ್ ಶ್ರೀವಾತ್ಸವನನ್ನು ಬಂಧಿಸಲಾಗಿತ್ತು. ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ವಿದ್ಯಾರ್ಥಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಿದ್ಯಾರ್ಥಿ ಮತ್ತು ಶಿಕ್ಷಕ ಸಂಘಗಳು ಒತ್ತಾಯಿಸುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ