ನವದೆಹಲಿ (ಡಿ. 7): ಅತ್ಯಂತ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಗುರುವಾರ ಮಧ್ಯಾಹ್ನ ಬೆಂಕಿ ಹಚ್ಚಲಾಗಿತ್ತು. ಕೋರ್ಟ್ಗೆ ತೆರಳುತ್ತಿದ್ದ ಯುವತಿಯನ್ನು ಇದ್ದಕ್ಕಿದ್ದಂತೆ ಅಟ್ಟಿಸಿಕೊಂಡು ಬಂದ ಆಗಂತುಕರು ಆಕೆಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದರು. ಈ ಘಟನೆಯಿಂದ ಯುವತಿಯ ದೇಹದ ಬಹುಪಾಲು ಸುಟ್ಟುಹೋಗಿತ್ತು. 40 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾಳೆ.
ನಿರ್ಭಯಾ ಹತ್ಯೆ ಪ್ರಕರಣದ ನಂತರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮತ್ತೊಂದು ಅಮಾನವೀಯ ಘಟನೆ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಆರೋಪಿಗೂ ಶಿಕ್ಷೆಯಾಗಿರಲಿಲ್ಲ. 2017ರ ಮಾರ್ಚ್ನಲ್ಲಿ ನಡೆದ ಪ್ರಕರಣದಲ್ಲಿ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗಾರ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು.
ಅತ್ಯಾಚಾರಿಗಳನ್ನು ಹತ್ಯೆಗೈದ ಪೊಲೀಸರ ಮೇಲೆ ಹೂ ಎರಚಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ ತೆಲಂಗಾಣ ಜನ
ಅದಾದ ಕೆಲವೇ ತಿಂಗಳಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ, ಚಿಕ್ಕಮ್ಮ, ಹಾಗೂ ವಕೀಲನ ಜೊತೆ ಕಾರಿನಲ್ಲಿ ಚಲಿಸುತ್ತಿದ್ದಾಗ ಆ ಕಾರು ಆಪಘಾತಕ್ಕೆ ಈಡಾಗಿತ್ತು. ಪರಿಣಾಮ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಆಕೆಯ ಚಿಕ್ಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರ ಗಾಯಕ್ಕೆ ಒಳಗಾಗಿರುವ ಸಂತ್ರಸ್ತೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವಿನಿಂದ ಪಾರಾಗಿದ್ದಳು.
ಗುರುವಾರ ತಮ್ಮ ವಕೀಲರ ಜೊತೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ತೆರಳುತ್ತಿದ್ದಾಗ ಆಕೆ ಕಾರಿನಿಂದ ಇಳಿಯುತ್ತಿದ್ದಂತೆ ನಾಲ್ಕೈದು ಜನ ಬಂದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಹೊತ್ತಿ ಉರಿಯತೊಡಗಿದ್ದರಿಂದ ಸುಮಾರು ದೂರ ಸಹಾಯಕ್ಕಾಗಿ ಓಡಿದ ಯುವತಿಗೆ ಯಾರೂ ಸಹಾಯ ಮಾಡಿರಲಿಲ್ಲ. ಕೊನೆಗೆ ಯಾರದೋ ಮೊಬೈಲ್ ತೆಗೆದುಕೊಂಡು ತಾನೇ ಆಂಬುಲೆನ್ಸ್ಗೆ ಫೋನ್ ಮಾಡಿ ಆ ಯುವತಿ ಕುಸಿದುಬಿದ್ದಿದ್ದಳು. ಅಷ್ಟರಲ್ಲಾಗಲೇ ಬೆಂಕಿಯಿಂದ ಆಕೆಯ ದೇಹದ ಬಹುಭಾಗ ಸುಟ್ಟುಹೋಗಿತ್ತು.
Big Breaking: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸರು
ಆಂಬುಲೆನ್ಸ್ನಲ್ಲಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಶುಕ್ರವಾರ ಮಧ್ಯಾಹ್ನದಿಂದ ಸಂತ್ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ನಿನ್ನೆ ರಾತ್ರಿ 11.10ರ ವೇಳೆಗೆ ಯುವತಿಗೆ ಹೃದಯಾಘಾತವಾಗಿತ್ತು. ವೈದ್ಯರು ಆಕೆಯನ್ನು ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ 11.40ರ ವೇಳೆಗೆ ಯುವತಿ ಸಾವನ್ನಪ್ಪಿದ್ದಾಳೆ.
ಏನಿದು ಪ್ರಕರಣ?:
ಮಾರ್ಚ್ನಲ್ಲಿ ಗ್ರಾಮದ ಇಬ್ಬರು ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಘಟನೆಯನ್ನು ದೃಶ್ಯೀಕರಣ ಮಾಡಿಕೊಂಡಿದ್ದರು. ಈ ಕುರಿತು ಯುವತಿ ರಾಯ್ಬರೇಲಿ ಜಿಲ್ಲೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಇಲ್ಲಿನ ಸ್ಥಳೀಯ ನ್ಯಾಯಾಲಯ ಕೂಡ ವಿಚಾರಣೆ ನಡೆಸಿತ್ತು. ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಯುವತಿಯಿದ್ದ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದಷ್ಟು ಬೇಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಿ, ಆರೋಪಿಗಳನ್ನು ಬಂಧಿಸಿ ಎಂದು ಸಿಬಿಐಗೆ ತಾಕೀತು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ