ಉತ್ತರಪ್ರದೇಶ: ಪ್ರೀತಿ (Love) ಕುರುಡು, ಪ್ರೀತಿ ಹುಟ್ಟಲು ವಯಸ್ಸು, ಜಾತಿ, ಧರ್ಮದ ಅಗತ್ಯವಿಲ್ಲ ಎಂಬ ಮಾತಿದೆ. ಉತ್ತರ ಪ್ರದೇಶದ (Uttar Pradesh) ಗೋರಖ್ಪುರದಲ್ಲಿ (Gorakhpur) ನಡೆದ ಘಟನೆ ಅದಕ್ಕೆ ಸಾಕ್ಷಿಯಾಗಿದೆ. 10 ಮಕ್ಕಳ ತಾಯಿಯಾಗಿರುವ (Mother) ಮಹಿಳೆಯೊಬ್ಬರು ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದು, ಊರಿನವರೆಲ್ಲಾ ಸೇರಿ ಆ ಇಬ್ಬರಿಗೂ ಮದುವೆ ಮಾಡಿಸಿರುವ ಅಚ್ಚರಿಯ ಘಟನೆ ನಡೆದಿದೆ. ವಾಸ್ತವವಾಗಿ, ಮಹಿಳೆಯ ಪತಿ ಐದಾರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಅಚ್ಚರಿ ಎಂದರೆ ಮಹಿಳೆಗೆ ಮೊದಲ ಪತಿಯಿಂದ 10 ಮಕ್ಕಳಿದ್ದಾರೆ. ಆದರೆ ಪತಿ ಮೃತಪಟ್ಟ ಬಳಿಕ ಮಹಿಳೆ ತನ್ನ ಪ್ರಿಯಕರನೊಂದಿಗೆ ಗ್ರಾಮವನ್ನು ತೊರೆದು ಓಡಿ ಹೋಗಿದ್ದಾಳೆ. ಇಬ್ಬರ ನಡುವೆ ಬಹಳ ದಿನಗಳಿಂದ ಸಂಬಂಧ ನಡೆಯುತ್ತಿತ್ತು ಎನ್ನಲಾಗಿದ್ದು, ಕಳೆದ ಒಂದು ವರ್ಷದಿಂದ ಇಬ್ಬರೂ ಮನೆ ಬಿಟ್ಟು ನಾಪತ್ತೆಯಾಗಿದ್ದರು. ಕೊನೆಗೆ ಊರಿಗೆ ಬಂದಾಗ ಇಬ್ಬರಿಗೂ ಮದುವೆ ಮಾಡಿಸಲಾಗಿದೆ.
ಈ ಪ್ರಕರಣವು ಬಾದಲ್ಗಂಜ್ ಜಿಲ್ಲೆಯ ಚಿಲ್ಲುಪಾರ್ ಪ್ರದೇಶದಲ್ಲಿ ನಡೆದಿದೆ. ಸೋನಿ ದೇವಿ ಎಂಬುವವರ ಪತಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸೋನಿದೇವಿ 10 ಮಕ್ಕಳ ತಾಯಿಯಾಗಿದ್ದರೂ, ಪತಿಯ ಮರಣದ ನಂತರ, ಪಕ್ಕದ ಕಿಲ್ ಗ್ರಾಮದ ನಿವಾಸಿ ಬಾಲೇಂದ್ರ ಅಲಿಯಾಸ್ ಬಲಾಯಿ ಯಾದವ್ ಎಂಬಾತನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಬಾಲೇಂದ್ರ ಇನ್ನೂ ಮದುವೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Child Marriage: ಅಪ್ರಾಪ್ತ ಹುಡುಗಿಯ ಮದುವೆ ಮಾಡಿಸಿದ್ದಕ್ಕೆ ಅಮ್ಮನ ಮೇಲೆ ಕೇಸ್, ವರನಿಗೂ ಜೈಲೂಟ!
ಇವರಿಬ್ಬರ ಸಂಬಂಧದ ವಿಷಯ ಸೋನಿಯ ಮಕ್ಕಳು ಮತ್ತು ಗ್ರಾಮಸ್ಥರಿಗೆ ತಿಳಿದಾಗ, ಒಂದು ವರ್ಷದ ಹಿಂದೆ ಇಬ್ಬರೂ ಮನೆಯಿಂದ ಓಡಿಹೋಗಿದ್ದಾರೆ. ಆದರೆ ಮಕ್ಕಳ ಮೇಲಿನ ಪ್ರೇಮ ಅವಳನ್ನು ಮತ್ತೆ ಊರಿಗೆ ಬರುವಂತೆ ಮಾಡಿದೆ. ಮಹಿಳೆಯು ಒಂದು ವರ್ಷದ ನಂತರ ತನ್ನ ಮಕ್ಕಳನ್ನು ಭೇಟಿಯಾಗಲು ಗ್ರಾಮಕ್ಕೆ ಆಗಮಿಸಿದ್ದಾಳೆ.
ಮದುವೆ ಮಾಡಿಸಿದ ಗ್ರಾಮಸ್ಥರು
ಈ ವಿಷಯ ಗ್ರಾಮದವರಿಗೆ ಗೊತ್ತಾದಾಗ ಪಂಚಾಯತಿ ನಡೆಸಲಾಗಿದೆ. ನಂತರ ಮಕ್ಕಳ ಒಪ್ಪಿಗೆ ಪಡೆದು ಮಹಿಳೆ ಮತ್ತು ಆಕೆಯ ಪ್ರೇಮಿ ಇಬ್ಬರೂ ಒಟ್ಟಿಗೆ ವಾಸಿಸುವ ಬಗ್ಗೆ ಮಾತನಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಇಬ್ಬರಿಗೂ ಮದುವೆ ಮಾಡಿಸಲಾಗಿದೆ.
5 ವರ್ಷಗಳ ಪ್ರೀತಿಗೆ ಕಂಕಣಭಾಗ್ಯ
ಬಾಳೇಂದ್ರ ಅಲಿಯಾಸ್ ಬಲಾಯಿ ದೇವರ ಸಾಕ್ಷಿಯಾಗಿ ಶಿವಾಲಯದಲ್ಲಿ 5 ವರ್ಷಗಳಿಂದ ಪ್ರೀತಿಸುತ್ತಿದ್ದ ಸೋನಿಗೆ ತಾಳಿ ಕಟ್ಟಿದ್ದಾನೆ. ಮದುವೆಯಾದ ನಂತರ ವಧು ಸೋನಿಯನ್ನು ಗ್ರಾಮಸ್ಥರು ಬಾಲೇಂದ್ರ ಅಲಿಯಾಸ್ ಬಾಳೈ ಎಂಬಾತನೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಗ್ರಾಮದ ಗುರುಕುಲ ಪಿ.ಜಿ.ಕಾಲೇಜಿನ ವ್ಯವಸ್ಥಾಪಕ ಜಯಪ್ರಕಾಶ್ ಶಾಹಿ ಹಾಗೂ ಮುಖ್ಯ ಪ್ರತಿನಿಧಿ ಸತೀಶ್ ಶಾಹಿ ಎಂಬುವವರು ಈ ಬಗ್ಗೆ ಮಾತನಾಡಿ, ಇಬ್ಬರ ನಡುವೆ 5 ವರ್ಷಗಳಿಂದ ಪ್ರೇಮ ಪ್ರಕರಣ ನಡೆಯುತ್ತಿತ್ತು. ಇಬ್ಬರೂ ಊರು ಬಿಟ್ಟು ಒಂದು ವರ್ಷವಾಗಿತ್ತು. ಇಬ್ಬರೂ ಹಿಂದಿರುಗಿದ ಮೇಲೆ ಪಂಚಾಯತಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ. ಈ ಸಂಬಂಧದಿಂದ ಇಬ್ಬರೂ ಸಂತೋಷವಾಗಿದ್ದಾರೆ. ಅದೇ ಸಮಯದಲ್ಲಿ, ಮಹಿಳೆಯ ಮಕ್ಕಳಿಗೂ ಈ ಸಂಬಂಧದಿಂದ ಯಾವುದೇ ತೊಂದರೆ ಇಲ್ಲ. ಅವರಿಗೆ ಈ ಬಗ್ಗೆ ಮೊದಲೇ ತಿಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Special Marriage Act: ಅಂತರ್ಜಾತಿ ವಿವಾಹ ಆಗುವವರಿಗೆ ಸಂಕಷ್ಟ ತಂದೊಡ್ಡಿದೆ ಈ ಹೊಸ ನಿಯಮ
ಜಯಪ್ರಕಾಶ ಶಾಹಿ ಅವರು ವಿವಾಹಿತ ದಂಪತಿಗೆ ಕಾಲೇಜಿನಲ್ಲಿ ಉದ್ಯೋಗಕ್ಕಾಗಿ ನೇಮಕಾತಿ ಪತ್ರವನ್ನು ಸ್ಥಳದಲ್ಲೇ ನೀಡಿದರು. ಜೊತೆಗೆ ಗುರುಕುಲ ಸಂಸ್ಥಾನ ಸಮೂಹದ ವಸತಿ ಸಮುಚ್ಚಯದಲ್ಲಿ ಇಬ್ಬರಿಗೂ ವಸತಿ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಮಹಿಳೆ ಗಂಡನನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆ ಸಂದರ್ಭದಲ್ಲಿ ಬಾಲೇಂದ್ರ ಆಕೆಯನ್ನು ವಿವಾಹವಾಗಿ ಹೊಸ ಜೀವನ ನೀಡಿದ್ದಾನೆ. ಜೊತೆಗೆ 10 ಅನಾಥ ಮಕ್ಕಳಿಗೆ ತಂದೆಯ ನೆರಳು ಸಿಕ್ಕಿದೆ. ಈಗ ಮಹಿಳೆಯರಿಗೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ