ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ (BJP) ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಮತ್ತು ಚುನಾಯಿತ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬುಧವಾರ ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ (Rising India Summit) ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಸ್ಟಾರ್ ಪ್ರಚಾರಕ ಆಗಿರುತ್ತಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ
ಬಿಜೆಪಿ ಖಂಡಿತವಾಗಿಯೂ ಅರ್ಧಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಸರ್ಕಾರವನ್ನು ರಚಿಸುತ್ತದೆ ಎಂದ ಅಮಿತ್ ಶಾ, ನಾವು ದಾಖಲೆಯ ಜನಾದೇಶವನ್ನು ಗೆಲ್ಲುತ್ತೇವೆ ಎಂದು ಹೇಳಿದರು. ಯಡಿಯೂರಪ್ಪನವರ ಹಿರಿತನವನ್ನು ಬಿಜೆಪಿ ಎಂದಿಗೂ ಪ್ರಶ್ನಿಸಿಲ್ಲ ಎಂದ ಅವರು, ಬಿಎಸ್ವೈ ಈ ಬಾರಿಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಲಿದ್ದಾರೆ. ಮುಖ್ಯಮಂತ್ರಿ ಆಯ್ಕೆಗೆ ಚುನಾಯಿತ ಶಾಸಕರು ತಮ್ಮ ನಾಯಕನನ್ನು ನಿರ್ಧರಿಸುತ್ತಾರೆ ಎಂದು ಹೇಳಿದರಲ್ಲದೇ, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಚುನಾವಣಾ ಮೈತ್ರಿ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: Amit Shah: ಬಿಎಸ್ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!
ಇನ್ನು ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಯಾವುದೇ ವಿವಾದವಿಲ್ಲ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.’ ನರೇಂದ್ರ ಮೋದಿ ಸರ್ಕಾರವು ಎಂದಿಗೂ ನ್ಯಾಯಾಂದ ಕೆಲಸ ಕಾರ್ಯಗಳ ಜೊತೆ ಹಸ್ತಕ್ಷೇಪ ಮಾಡಿಲ್ಲ. ಇದನ್ನು ಯಾವುದೇ ಸರ್ಕಾರ ಮಾಡಬಾರದು. ಪ್ರತಿಯೊಬ್ಬರೂ ಸಾಂವಿಧಾನಿಕವಾಗಿ ವ್ಯಾಖ್ಯಾನಿಸಿದ ಇತಿ ಮಿತಿಗಳನ್ನು ಹೊಂದಿದ್ದಾರೆ ಮತ್ತು ಅವರು ಅದರೊಳಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಎನ್ಜೆಎಸಿ ವಿಷಯದ ಕುರಿತು ಮಾತನಾಡಿದ ಅಮಿತ್ ಶಾ, ನ್ಯಾಯಾಧೀಶರ ನೇಮಕಾತಿಗೆ ಹೊಸ ಕಾರ್ಯವಿಧಾನವನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದೆ, ಅದನ್ನು ನ್ಯಾಯಾಲಯ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ SOP ಕಳುಹಿಸಿದೆ ಮತ್ತು ಕಿರಣ್ ರಿಜಿಜು ಇದನ್ನು ಪರಿಗಣನೆಗೆ ತ್ವರಿತವಾಗಿ ತೆಗೆದುಕೊಳ್ಳಬೇಕು ಎಂದು ಮಾತ್ರ ಉಲ್ಲೇಖಿಸಿದ್ದಾರೆ. ಇದು ವಿವಾದವಲ್ಲ. ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ ಸ್ಟಾಪ್-ಗ್ಯಾಪ್ ವ್ಯವಸ್ಥೆಯನ್ನು ಮಾತ್ರ ಸೃಷ್ಟಿಸಿದೆ ಎಂದು ಶಾ ಹೇಳಿದರು.
ವಿಪಕ್ಷಗಳ ಒಗ್ಗಟ್ಟಿಗೆ ಶಾ ವ್ಯಂಗ್ಯ
ಇನ್ನು 2024 ರ ಲೋಕಸಭೆ ಚುನಾವಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿರುವ ಬಗ್ಗೆ ಮಾತನಾಡಿದ ಅಮಿತ್ ಶಾ, ಈ ಎಲ್ಲಾ ಮಾತುಗಳು ಕೇವಲ TRP ಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಅಲ್ಲದೇ, ಚಂದ್ರಶೇಖರ ರಾವ್, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್- ಈ ನಾಲ್ವರು ಮೋದಿ ವರ್ಸಸ್ ರೆಸ್ಟ್ ಸೂತ್ರದ ಅಡಿಯಲ್ಲಿ ಒಟ್ಟಿಗೆ ಸೇರುತ್ತಾರೆ ಅಂದ್ಕೊಳ್ಳೋಣ. ಚಂದ್ರಶೇಖರ ರಾವ್ ಅವರು ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದರೆ - ಅದು ಏನು ವ್ಯತ್ಯಾಸವನ್ನು ಮಾಡುತ್ತದೆ? ತೆಲಂಗಾಣದಲ್ಲಿ ಮಮತಾ ಬ್ಯಾನರ್ಜಿ ರ್ಯಾಲಿ ನಡೆಸಿದರೆ, ಅದರಿಂದ ವ್ಯತ್ಯಾಸವಾಗುತ್ತದೆಯೇ? ಅಥವಾ (ಅಖಿಲೇಶ್) ಯಾದವ್ ಅವರು ಬಂಗಾಳದಲ್ಲಿ ಸಭೆ ನಡೆಸಿದರೆ, ಏನಾದರೂ ವ್ಯತ್ಯಾಸವನ್ನು ಉಂಟುಮಾಡುತ್ತದೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Election 2023: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ; ಫುಲ್ ಖುಷಿ ಆದ್ರಂತೆ ಚುನಾವಣಾ ಚಾಣಕ್ಯ
2024ರಲ್ಲಿಯೂ ನರೇಂದ್ರ ಮೋದಿಯೇ ಪ್ರಧಾನಿ
ಈ ಪಕ್ಷಗಳು ಮತ್ತು ನಾಯಕರು ಆಯಾ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ ಎಂದ ಅಮಿತ್ ಶಾ, ಈ ಏಕತೆಗೆ ಯಾವುದೇ ಅರ್ಥವಿಲ್ಲ. ಅವರು ಒಬ್ಬರಿಗೊಬ್ಬರು ನಾಯಕರನ್ನು ಪರಿಗಣಿಸುವುದಿಲ್ಲ ಮತ್ತು ಒಬ್ಬರಿಗೊಬ್ಬರು ಯಾವುದೇ ಸ್ಥಾನಗಳನ್ನು ಮೀಸಲಿಡಲು ಸಿದ್ಧರಿಲ್ಲ. 2024ರಲ್ಲಿ ನರೇಂದ್ರ ಮೋದಿ ಅವರು 2019ಕ್ಕಿಂತ ಹೆಚ್ಚಿನ ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಾರಿ ಪಶ್ಚಿಮ ಬಂಗಾಳದಲ್ಲಿ ನಮ್ಮ ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ನಾನು ಹೇಳಿದಾಗ ಯಾರೂ ಒಪ್ಪಲಿಲ್ಲ. ಆದರೆ ನಾವು ಅದನ್ನು ಮಾಡಿದೆವು. ಒಡಿಶಾ ಮತ್ತು ತೆಲಂಗಾಣದಲ್ಲೂ ನಾವು ನಮ್ಮ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ನಮ್ಮ ಪಕ್ಷ ನೆಲದ ಮೇಲೆ ಕೆಲಸ ಮಾಡುತ್ತದೆ. ಮತ್ತು ಪ್ರಧಾನಿ ಮೋದಿಯವರ ಪ್ರಸಿದ್ಧಿ ಭಾರತದ ಕೊನೆಯ ಹಳ್ಳಿಯಿಂದ ರಾಜಧಾನಿ ದೆಹಲಿಯವರೆಗೆ ಹರಡಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ