ನವದೆಹಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಇಂಡಿಗೋ (IndiGo) ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲು ತೆಗೆದಿದ್ದರು ಎಂಬ ವಿಚಾರ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಜ್ಯಸಭೆಯಲ್ಲಿ (Rajya Sabha) ಉತ್ತರಿಸಿರುವ ಕೇಂದ್ರ ವಿಮಾನಯಾನ ಸಚಿವಾಲಯ (Ministry of State for Civil Aviation) ಬೆಂಗಳೂರು ದಕ್ಷಿಣ ಸಂಸದರು ಆಕಸ್ಮಿಕವಾಗಿ ಇಂಡಿಗೋ ವಿಮಾನದ ಬಾಗಿಲನ್ನು ತೆರೆದಿದ್ದಾರೆ ಎಂದು ಸಂಸತ್ನಲ್ಲಿ ಹೇಳಿದೆ. ಅಲ್ಲದೆ ಈ ಅವಘಡದಲ್ಲಿ ತೇಜ್ವಸ್ವಿ ಸೂರ್ಯ ಉದ್ದೇಶಪೂರ್ವಕವಾಗಿ ತೆರೆದಿಲ್ಲ, ಅದೊಂದು ಆಕಸ್ಮಿಕ ಘಟನೆ, ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಖಚಿತಪಡಿಸಿದೆ ಎಂದು ಸಂಸತ್ನಲ್ಲಿ ಸಚಿವಾಲಯ ತಿಳಿಸಿದೆ.
ಟಿಎಂಸಿ ನಾಯಕ ಪ್ರಶ್ನೆ
ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಡಿಸೆಂಬರ್ 10ರಲ್ಲಿ ಚೆನ್ನೈನಿಂದ ತಿರುಚನಾಪಳ್ಳಿಗೆ ತೆರಳುತ್ತಿದ್ದ 6E-7339 ಸಂಖ್ಯೆಯ ಇಂಡಿಗೋ ವಿಮಾನದಲ್ಲಿ ತುರ್ತು ಬಾಗಿಲನ್ನು ತೆಗೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಅಕ್ರಮವಾಗಿ ತೆರೆದ ಪ್ರಯಾಣಿಕರನ್ನು ಸರ್ಕಾರ ಗುರುತಿಸಿದೆಯೇ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಲಾಲಾ ರಾಯ್ ಪ್ರಶ್ನಿಸಿದ್ದರು. ಅದಕ್ಕೆ ಸಂಸತ್ನಲ್ಲಿ ಉತ್ತರಿಸಿದ ಸಚಿವರು, ತೇಜಸ್ವಿ ಸೂರ್ಯ ಅವರು ಆಕಸ್ಮಿಕವಾಗಿ ವಿಮಾನದ ಬಾಗಿಲನ್ನು ತೆರೆದಿದ್ದಾರೆ. ಆದರೆ, ಈ ವೇಳೆ ಯಾವುದೇ ನಿಯಮ ಉಲ್ಲಂಘನೆಯಾಗಿರುವುದು ವಿಮಾನಯಾನ ಸಂಸ್ಥೆಯ ಗಮನಕ್ಕೆ ಬಂದಿಲ್ಲ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ ಸ್ಪಷ್ಟಪಡಿಸಿರುವಂತೆ ಇಂಡಿಗೋ ವಿಮಾನದ ತುರ್ತು ಬಾಗಿಲು ತೇಜಸ್ವಿಯವರ ಕೈ ತಗುಲಿ ಆಕಸ್ಮಿಕವಾಗಿ ತೆರೆದುಕೊಂಡಿದೆ. ಇದು ಉದ್ದೇಶಪೂರ್ವಕ ಕ್ರಮವಲ್ಲ. ಪ್ರಯಾಣಿಕರಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಇಂಟರ್ ಗ್ಲೋಬ್ ಏವಿಯೇಷನ್ ಸಂಸ್ಥೆ ತಿಳಿಸಿದೆ ಎಂದು ವಿಕೆ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಸ್ಥೆ ತೇಜಸ್ವಿ ಸೂರ್ಯ ಮೇಲೆ ಯಾವುದಾದರೂ ಕ್ರಮ ಕೈಗೊಂಡಿದೆಯೇ ಎಂದು ಕೂಡ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ವಿಕೆ ಸಿಂಗ್, ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ಪ್ರಕಾರ ಈ ಘಟನೆಯು ವರದಿ ಮಾಡಬಹುದಾದ ಘಟನೆ ವರ್ಗಕ್ಕೆ ಬರುವುದಿಲ್ಲ. ಅಲ್ಲದೆ ವಿಮಾನ ಟೆಕ್ ಆಫ್ ಆಗುವ ಮೊದಲೇ ಈ ಘಟನೆ ಸಂಭವಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಎಲ್ಲರನ್ನು ಕೆಳಗಿಳಿಸಿ ತಪಾಸಣೆಗಳನ್ನು ನಡೆಸಿದ ಮೇಲೆಯೇ ವಿಮಾನ ಟೇಕ್ ಆಫ್ ಆಗಿದೆ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಪರ ಅಣ್ಣಾಮಲೈ ಬ್ಯಾಟಿಂಗ್
ಘಟನೆ ನಡೆದ ದಿನ ತೇಜಸ್ವಿ ಸೂರ್ಯ ಜೊತೆಗೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ವಿಮಾನದಲ್ಲಿದ್ದರು. ತೇಜಸ್ವಿ ಸೂರ್ಯ ಅವರು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆಗೆದಿರಲಿಲ್ಲ ಎಂದು ಅಣ್ಣಾಮಲೈ ಹೇಳಿದ್ದರು. ಸಂಸದರು ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಅವರು ಬಾಗಿಲನ್ನು ತೆರೆದಿಲ್ಲ, ಅದೊಂದು ಆಕಸ್ಮಿಕ ಘಟನೆ ಎಂದು ಅಣ್ಣಾಮಲೈ ತೇಜಸ್ವಿ ಸೂರ್ಯ ಪರ ಮಾತನಾಡಿದ್ದರು.
ತೇಜಸ್ವಿ ಸೂರ್ಯ ಮತ್ತೊಂದು ವಿವಾದ
ವಿಮಾನದ ಬಾಗಿಲು ತೆರೆದ ಪ್ರಕರಣ ಮಾಸುವ ಮುನ್ನವೇ ಸಂಸದ ರೈತರ ಸಾಲ ಮನ್ನಾ ವಿಚಾರವಾಗಿಯೂ ವಿವಾದಕ್ಕೀಡಾಗಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದರು. ಇದನ್ನು ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಟೀಕಿಸಿದ್ದರು. ಕೆಲವು ಕಡೆ ಪ್ರತಿಭಟನೆ ನಡೆಸಲಾಗಿತ್ತು.
ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ , 2009ನೇ ಇಸವಿಯಲ್ಲಿ ಯುಪಿಎ ಸರ್ಕಾರ ಚುನಾವಣೆಗೆ ಹೋಗಬೇಕಿತ್ತು. 2008ರ ಫುಲ್ ಬಜೆಟ್ನಲ್ಲಿ ಅವರು ಮಾಡಿದ್ದು ಏನು ಎಂದರೆ, ಒಂದು ಲಕ್ಷ ಕೋಟಿ ರೂಪಾಯಿಯ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಎಲೆಕ್ಷನ್ ಗೆಲ್ಲಬೇಕು ಅನ್ನೋ ಉದ್ದೇಶದಿಂದ ಸಾಲ ಮನ್ನಾ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದು ಒಂದು ತಾತ್ಕಾಲಿಕ ಪರಿಹಾರ ಮಾತ್ರ. ಇದರಿಂದ ರೈತರಿಗೆ ಒಂದಿಷ್ಟ ಉಪಯೋಗ ಆಯ್ತು. ಆದರೆ ಇದರಿಂದ ದೇಶಕ್ಕೆ ಯಾವುದೇ ರೀತಿಯ ಆರ್ಥಿಕ ಉಪಯೋಗ ಆಗಿಲ್ಲ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ