news18-kannada Updated:January 20, 2021, 10:48 PM IST
ನರೇಂದ್ರ ಮೋದಿ.
ನವದೆಹಲಿ(ಜ. 20): ದೆಹಲಿ ಗಡಿಗಳಲ್ಲಿ ನಿರಂತರವಾಗಿ 56 ದಿನಗಳ ಪಟ್ಟು ಬಿಡದೆ ರೈತರು ನಡೆಸಿದ ಪ್ರತಿಭಟನೆಗೆ ಕಡೆಗೂ ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿಗೆ ಮಣಿದಿದ್ದು ತಾನು ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಒಂದೂವರೆ ವರ್ಷದ ಮಟ್ಟಿಗೆ ತಡೆಹಿಡಿಯಲು ಮತ್ತು ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು ಸಿದ್ದ ಹೇಳಿರುವುದಾಗಿ ತಿಳಿದುಬಂದಿದೆ. ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಬುಧವಾರ ದೆಹಲಿಯ ವಿಜ್ಞಾನ ಭವನದಲ್ಲಿ 10ನೇ ಸುತ್ತಿನ ಮಾತುಕತೆ ವೇಳೆ ಕೇಂದ್ರ ಸರ್ಕಾರವು ಈವರೆಗೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದ ತನ್ನ ನಿಲುವನ್ನು ಸಡಿಲಸಿ 'ಒಂದೂವರೆ ವರ್ಷದ ಮಟ್ಟಿಗೆ ತಡೆಹಿಡಿಯಲು ಮತ್ತು ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು' ಒಪ್ಪಿಕೊಂಡಿದೆ ಎನ್ನಲಾಗಿದೆ.
ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಸಭೆಯ ಬಳಿಕ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ, ಕೇಂದ್ರ ಸರ್ಕಾರವು ಒಂದೂವರೆ ವರ್ಷದ ಮಟ್ಟಿಗೆ ತಡೆಹಿಡಿಯಲು ಮತ್ತು ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು ಸಿದ್ದ ಎಂದು ಸಭೆಯಲ್ಲಿ ಹೇಳಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಹಿಂದಿನ ಸಭೆಗಳಲ್ಲಿ ಚರ್ಚೆಯಾಗಿದ್ದಂತೆ ಕನಿಷ್ಟ ಬೆಂಬಲ ಬೆಲೆ ಮತ್ತು ಕೃಷಿ ಕಾನೂನುಗಳ ಬಗ್ಗೆ ಸಮಿತಿಯನ್ನು ರಚಿಸುವುದಕ್ಕೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದಾಗಿ ಹನ್ನನ್ ಮೊಲ್ಲಾ ತಿಳಿಸಿದ್ದಾರೆ.
Toycathon 2021: ಟಾಯ್ ಹ್ಯಾಕಥಾನ್ನಲ್ಲಿ ಭಾಗವಹಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇಲ್ಲಿದೆ ಮಾಹಿತಿ..!
ಇದರಿಂದಾಗಿ ಈಗ 'ವಿವಾದದ ಚೆಂಡು' ರೈತರ ಅಂಗಳ ತಲುಪಿದಂತಾಗಿದೆ. ಈ ಬಗ್ಗೆ ಮಾತನಾಡಿದ ಹನ್ನನ್ ಮೊಲ್ಲಾ, ನಾಳೆ (ಜನವರಿ 21) ರೈತ ಸಂಘಟನೆಗಳು ಸಭೆ ನಡೆಸಿ, ಕೇಂದ್ರ ಸರ್ಕಾರ ತಿಳಿಸಿರುವ ಪ್ರಸ್ತಾಪದ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನವೆಂಬರ್ 26ರಿಂದ ನಿರಂತರವಾಗಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ 9 ಸುತ್ತು ಮಾತುಕತೆ ನಡೆಸಿತ್ತು. 9 ಸಭೆಗಳಲ್ಲೂ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಹಠಮಾರಿತನ ಪ್ರದರ್ಶಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ರೈತರು ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿಶ್ಚಯಿಸಿದ್ದರು. 'ಪ್ರತಿಷ್ಠಿತ ಗಣರಾಜ್ಯೋತ್ಸವದ ದಿನ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡುತ್ತಾರೆ' ಎಂಬ ಬೆದರಿಕೆಗೆ ಮಣಿದೆ ಈಗ ಕಾನೂನುಗಳನ್ನು ಒಂದೂವರೆ ವರ್ಷದವರೆಗೆ ತಡೆಹಿಡಿಯಲು ಮುಂದಾಗಿದೆ ಎಂದು ಕೂಡ ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿದರೆ ಜನವರಿ 26ರಂದು ಟ್ರ್ಯಾಕ್ಟರ್ ಮೆರವಣಿಗೆ ಮಾಡುವ ನಿರ್ಧಾರವನ್ನು ಕೈಬಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲೂ ನಾಳಿನ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಮುಂದಿಟ್ಟಿರುವ ಪ್ರಸ್ತಾಪವನ್ನು ಒಪ್ಪಿದರೂ ಬಹುತೇಕ ಟ್ರ್ಯಾಕ್ಟರ್ ಮೆರವಣಿಗೆಯಿಂದ ಹಿಂದೆ ಸರಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
Published by:
Latha CG
First published:
January 20, 2021, 10:48 PM IST