ಕಣ್ಣೂರು: ಚಲಿಸುತ್ತಿದ್ದ ಕಾರಿನಲ್ಲಿ (Car) ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ಗರ್ಭಿಣಿ (pregnant woman) ಹಾಗೂ ಆಕೆಯ ಪತಿ ಇಬ್ಬರು ಸಜೀವ ಸಹನವಾಗಿರುವ (burnt alive) ದಾರುಣ ಘಟನೆ ಕೇರಳದ (Kerala) ಕಣ್ಣೂರಿನಲ್ಲಿ (Kannur)ಗುರುವಾರ ನಡೆದಿದೆ. ಇಲ್ಲಿನ ಜಿಲ್ಲಾಸ್ಪತ್ರೆ ಬಳಿ ದುರಂತ ಸಂಭವಿಸಿದೆ. ಕುಟ್ಟಿಯತ್ತೂರು ಕರಂಬುವಿನ ಪ್ರಜಿತ್(32) ಮತ್ತು ಅವರ ಪತ್ನಿ ರೀಶಾ (26) ಎಂಬುವವರು ಮೃತ ದುರ್ದೈವಿಗಳು. ದಂಪತಿ ಕಾರಿನಲ್ಲಿ ಕುಟ್ಟಿಯತ್ತೂರಿನಿಂದ ಜಿಲ್ಲಾ ಆಸ್ಪತ್ರೆಗೆ (District Hospital) ಪರೀಕ್ಷೆಗಾಗಿ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ 6 ಮಂದಿ ಪ್ರಯಾಣ
ಕಾರಿನಲ್ಲಿ ಮೃತ ಪ್ರಜಿತ್ ಹಾಗೂ ರೀಶಾ ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದರು. ಇವರಿಬ್ಬರು ಮುಂದಿನ ಸೀಟುಗಳಲ್ಲಿ ಕುಳಿತಿದ್ದರೆ, ಒಂದು ಮಗು ಸೇರಿಂದತೆ ಉಳಿದವರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಗು ಸೇರಿದಂತೆ ನಾಲ್ವರು ಕಾರಿನಿಂದ ಜಿಗಿದು ಪಾರಾಗಿದ್ದಾರೆ. ಆ ನಾಲ್ವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಹುಶಃ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬೇಕೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳುವಾಗ ದುರ್ಘಟನೆ
ಗರ್ಭಿಣಿ ಲೀಸಾ ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಕ್ಕೆ ಪ್ರಜಿತ್ ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎಂದು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಹಿಂಬದಿ ಕುಳಿತಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ, ಅವರು ಆಸ್ಪತ್ರೆಯಲ್ಲಿದ್ದಾರೆ ಮತ್ತು ಅವರನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಂಬದಿ ಕುಳಿತಿದ್ದವರನ್ನು ಪಾರು ಮಾಡಿದ ಪ್ರಜಿತ್
ಕಾರು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಪ್ರಜಿತ್ ಹಿಂಬದಿ ಇದ್ದವರು ಕಾರಿನಿಂದ ಕೆಳಗಿಳಿಯಲು ನೆರವಾಗಿದ್ದಾರೆ. ಆದರೆ ಕಾರಿನ ಮುಂಭಾಗದ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ದಂಪತಿ ಒಳಗೆ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ಕಾರಿನ ಮುಂಭಾಗದ ಬಾಗಿಲು ತೆರೆದು ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಬೆಂಕಿಯ ಕೆನ್ನಾಲಗೆಯಿಂದ ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ಬಾಗಿಲು ಹೊಡೆದು ಶವ ಹೊರ ತೆಗೆಯಲಾಗಿದೆ
ಕಾರಿನ ಮುಂಬಾಗಿಲು ಜಾಮ್ ಆಗಿದ್ದರಿಂದ ಒಳಗಿದ್ದ ಪ್ರಜಿತ್ ಹಾಗೂ ಹೊರಗಿದ್ದ ಜನರು ಪ್ರಯತ್ನ ಪಟ್ಟರೂ ಇಬ್ಬರಿಂದಲೂ ತೆಗೆಯಲು ಸಾಧ್ಯವಾಗಲಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಬೆಂಬಲದೊಂದಿಗೆ ಜಾಮ್ ಆಗಿದ್ದ ಮುಂದಿನ ಬಾಗಿಲನ್ನು ಒಡೆದಿದ್ದಾರೆ. ಆದರೆ, ಅಷ್ಟರಲ್ಲಿ ಪ್ರಜಿತ್ ಮತ್ತು ರೀಶಾ ಸಜೀವ ದಹನವಾಗಿದ್ದರು ಎಂದು ತಿಳಿದುಬಂದಿದೆ.
ಕಾರು ಸ್ಫೋಟವಾಗುವ ಭಯಕ್ಕೆ ಹೆದರಿದ ಸ್ಥಳೀಯರು
ಸಾಮಾಜಿಕ ಜಾಲತಾಣದಲ್ಲಿ ಕಾರು ಉರಿಯುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಳಗಿನಿಂದ ಕಿರುಚಾಟಗಳು ಕೇಳಿಬರುತ್ತಿವೆ. ಕೆಲವು ಸ್ಥಳೀಯ ಜನರು ಕಾರಿನ ಕಡೆಗೆ ಓಡುತ್ತಿರುವುದನ್ನು ಅಲ್ಲಿ ಕಾಣಬಹುದು. ಆದರೆ ಕಾರು ಸ್ಫೋಟಗೊಳ್ಳಬಹುದೆಂಬ ಭಯದಿಂದ ಯಾರು ಕಾರಿನ ಬಳಿ ಹೆಚ್ಚು ಸಮಯ ಇರದೆ ಹಿಂದೆ ಸರಿದಿದ್ದಾರೆ.
" ಆ ಸಮಯದಲ್ಲಿ ನಾವು ಸಂಪೂರ್ಣವಾಗಿ ಅಸಹಾಯಕರಾಗಿದ್ದೆವು, ಕಾರಿನ ಮುಂಭಾಗ ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಕಾರಿನ ಪೆಟ್ರೋಲ್ ಟ್ಯಾಂಕ್ ಯಾವಾಗ ಬೇಕಾದರೂ ಸ್ಫೋಟವಾಗಬಹುದು ಎಂಬ ಭಯ ಇದ್ದಿದ್ದರಿಂದ, ನಾವು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ