ಮಾನಸಿಕ ಅಸ್ವಸ್ಥ ಮಕ್ಕಳಿಬ್ಬರು ತಾಯಿಯನ್ನೇ ಕೊಂದು ರಕ್ತದ ಮಡುವಿನಲ್ಲಿದ್ದ ಅಮ್ಮನ ಪಕ್ಕದಲ್ಲಿಯೇ ಗೊಂಬೆ ಜೊತೆ ಆಟವಾಡುತ್ತಿದ್ದಂತಹ ಘಟನೆ ನಡೆದಿದೆ. ಮಕ್ಕಳ ಈ ವರ್ತನೆ ಕಂಡು ಅಕ್ಕಪಕ್ಕದ ಜನರು ಬೆಚ್ಚಿ ಬಿದ್ದಿದ್ದಾರೆ. ತಮಿಳುನಾಡಿನ ತಿರುನೇಲ್ವಿಲಿ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ. ತಾಯಿಯನ್ನುಕೊಂದ ಈ ಮಕ್ಕಳಿಗೆ ತಾಯಿ ಇನ್ನು ಮರಳಿ ಬರುವುದಿಲ್ಲ ಎಂಬ ತಿಳುವಳಿಕೆ ಸಹ ಇಲ್ಲದಂತೆ ವರ್ತನೆ ತೋರಿದ್ದಾರೆ. ಈ ವೇಳೆ ಮಕ್ಕಳನ್ನು ಪುಸಲಾಯಿಸಿ ಕೇಳಿದಾಗ , ತಾವೇ ತಾಯಿಯನ್ನು ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಇಬ್ಬರು ಮಕ್ಕಳನ್ನು ಮಾನಸಿಕ ವೈದ್ಯರ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ.
ಏನಿದು ದಾರುಣ ಘಟನೆ:
ಪಲಯಂಕೊಟ್ಟಯಿಯ ಕೆಟಿಸಿ ನಗರದಲ್ಲಿನ ಉಷಾ ಎಂಬ ಮಹಿಳೆ ವಾಸವಾಗಿದ್ದಳು. ಗಂಡ ತೊರೆದು ಹೋದ ಹಿನ್ನಲೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಈಕೆ ಜೀವನ ನಡೆಸುತ್ತಿದ್ದಳು. ಈಕೆಯ ಸರಿಸುಮಾರ 20 ವರ್ಷದ ಇಬ್ಬರು ಹೆಣ್ಣು ಮಕ್ಕಳು ಮಾನಸಿಕ ಅಸ್ವಸ್ಥರಾಗಿದ್ದು, ಉಷಾ ಮಕ್ಕಳಿಗೆ ಪಾಠ ಹೇಳಿ ಕೊಡುತ್ತ ಜೀವನ ಸಾಗಿಸುತ್ತಿದ್ದಳು.
ಮಂಗಳವಾರ ಉಷಾ ಮನೆಯಿಂದ ಹೊರ ಬಾರದಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಏನೋ ಅನಾಹುತವಾಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದರು. ಇದೇ ವೇಳೆ ಇಬ್ಬರು ಅಕ್ಕ ತಂಗಿಯವರು ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಅಕ್ಕ ಪಕ್ಕದವರು ವಿಚಾರಿಸಿದಾಗ ತಾಯಿ ಸತ್ತಿದ್ದಾಳೆ ಎಂದಿದ್ದಾರೆ.
ಈ ಸುದ್ದಿ ತಿಳಿದಾಕ್ಷಣ ನೆರೆ ಮನೆಯವರು ನೆಲ್ಲೈ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಉಷಾ ರಕ್ತದ ಮಡುವಿನಲ್ಲಿ ಮಲಗಿದ್ದರು. ಅಲ್ಲದೇ ಅದೆ ರಕ್ತದ ಮಡುವಿನಲ್ಲಿ ಬುದ್ದಿ ಮಾಂದ್ಯ ಅಕ್ಕ- ತಂಗಿಯರು ಗೊಂಬೆಯೊಂದಿಗೆ ಆಟವಾಡುತ್ತಿದ್ದರು.
ಇದನ್ನು ಓದಿ: ಸಿಎಂ ಸ್ಥಾನದಿಂದ ಕೆಳಗಿಳಿಯುವ ಮೊದಲೂ ಯಡಿಯೂರಪ್ಪ ಲೂಟಿಗೆ ಇಳಿದಿದ್ದಾರಾ: ಕುಮಾರಸ್ವಾಮಿ ಪ್ರಶ್ನೆ!
ಮನೆಯ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದ ಮಕ್ಕಳಿಗೆ ಸಾಕಷ್ಟು ಪುಸಲಾಯಿಸಿದ ಬಳಿಕ ಅವರು ಚಿಲಕ ತೆಗೆದಿದ್ದಾರೆ. ಈ ವೇಳೆ ಮಕ್ಕಳ ಬಟ್ಟೆ ಕೂಡ ರಕ್ತ ಸಿಕ್ತಬಾಗಿದ್ದು, ಗಾಬರಿಗೊಂಡ ಮಕ್ಕಳು ಏನು ಮಾತನಾಡದೇ ಸುಮ್ಮನಿದ್ದರು. ಈ ವೇಳೆ ಈ ಅಕ್ಕ ತಂಗಿಯರು ತಾಯಿ ಇನ್ನಿಲ್ಲ ಎಂಬ ಬಗ್ಗೆ ಅರಿವೇ ಇಲ್ಲದಂತೆ ಪರಸ್ಪರ ಬಿಸ್ಕೆಟ್ ತಿಂದು ಆಟವಾಡುತ್ತಿದ್ದರು.
ಉಷಾಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಅಕ್ಕ ತಂಗಿಯರಿಗೆ ಪೊಲೀಸರು ಬರ್ಗರ್ ನೀಡಿ ಅವರನ್ನು ಅಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರತ್ತ ಕರೆ ತಂದಿದ್ದಾರೆ. ವೈದ್ಯರ ಸಮಾಲೋಚನೆ ಬಳಿಕ ತಾಯಿ ತಮಗೆ ಕೋಲಿನಿಂದ ಹೊಡೆದ ಕಾರಣ ನಾವು ಆಕೆಯನ್ನು ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾಗಿ ತಿಳಿಸಿದ್ದಾರೆ.
ಬುದ್ದಿ ಮಾಂದ್ಯ ಮಕ್ಕಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರು ಅವರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸಕರ ಬಳಿ ಕರೆದೊಯ್ಯುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ