ಕೊಚ್ಚಿ: ಕೇರಳದ ಪೆಟ್ಶಾಪ್ನಿಂದ (Pet Shop) ಸುಮಾರು 15000 ರೂಪಾಯಿ ಮೌಲ್ಯದ ನಾಯಿ ಮರಿಯನ್ನು (Puppy theft) ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು (Engineering Students) ಪೊಲೀಸರು ಬಂಧಿಸಿದ್ದಾರೆ. ಉಡುಪಿ (Udupi) ಮೂಲದ ಇಬ್ಬರು ವಿದ್ಯಾರ್ಥಿಗಳು ಬೆಲೆ ಬಾಳುವ ನಾಯಿ ಮರಿಯನ್ನು ಕಳ್ಳತನ ಮಾಡಿದ್ದು, ಪೆಟ್ ಶಾಪ್ ಮಾಲೀಕ ನೀಡಿದ ದೂರಿನನ್ವಯ ನಾಯಿ ಮರಿಯನ್ನು ಕದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಶನಿವಾರ ಸಂಜೆ ಈ ವಿಚಿತ್ರ ಘಟನೆ ಕೇರಳದ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದ್ದು, ಬೆಕ್ಕು ಮಾರುವ ನೆಪದಲ್ಲಿ ನೆಟ್ಟೂರಿನಲ್ಲಿರುವ ಪೆಟ್ ಶಾಪ್ಗೆ ಬೈಕ್ನಲ್ಲಿ ಬಂದ ಉಡುಪಿ ಮೂಲದ ನಿಖಿಲ್ ಮತ್ತು ಶ್ರೇಯಾ, ಪೆಟ್ ಶಾಪ್ ಮಾಲೀಕನ ಜೊತೆ ಬೆಕ್ಕು ಮಾರುವ ಕುರಿತು ಮಾತನಾಡಿದ್ದಾರೆ. ಹೀಗೆ ಮಾತನಾಡುತ್ತಿದ್ದಂತೆ ಅಂಗಡಿ ಮಾಲೀಕನ ಗಮನ ಬೇರೆಡೆಗೆ ಸೆಳೆದ ವಿದ್ಯಾರ್ಥಿನಿ ಪಂಜರದಲ್ಲಿ ಇಟ್ಟಿದ್ದ ನಾಯಿ ಮರಿಯನ್ನು ತೆಗೆದುಕೊಂಡು ನಿಖಿಲ್ನ ಹೆಲ್ಮೆಟ್ಗೆ ಹಾಕಿದ್ದಾಳೆ.
ಇದನ್ನೂ ಓದಿ: Bengaluru: ಲೈವ್ ಬ್ಯಾಂಡ್ನಲ್ಲಿ ಯುವತಿಯರ ಡ್ಯಾನ್ಸ್ ನೋಡಲು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಗ್ಯಾಂಗ್ ಅಂದರ್
ಮಾರಾಟ ಮಾಡಲು ತಂದಿದ್ದ ಪಪ್ಪಿ
ಅಂಗಡಿ ಮಾಲೀಕ ಇತ್ತೀಚೆಗೆ ಕೇರಳದ ಎಡಪಲ್ಲಿಯಿಂದ ಮೂರು ನಾಯಿ ಮರಿಗಳನ್ನು ಖರೀದಿಸಿ ತನ್ನ ಪೆಟ್ ಶಾಪ್ಗೆ ತಂದು ಇಟ್ಟಿದ್ದರು. ಆ ಪೈಕಿ ಒಂದು ನಾಯಿ ಮರಿಯನ್ನು ಆಲಪ್ಪುರ ಮೂಲದ ವ್ಯಕ್ತಿಗೆ ಮಾರಾಟ ಮಾಡಲು ನಿಗದಿ ಮಾಡಿ ಅಡ್ವಾನ್ಸ್ ತೆಗೆದುಕೊಂಡಿದ್ದರು. ಶನಿವಾರ ಆಲಪ್ಪುರದ ಗ್ರಾಹಕ ನಾಯಿ ಮರಿ ಖರೀದಿಗೆ ಪೆಟ್ ಶಾಪ್ಗೆ ಬಂದಿದ್ದು, ಆಗ ನಾಯಿ ಮರಿಯನ್ನು ಕೊಡಲು ಅಂಗಡಿ ಮಾಲೀಕ ಪಂಜರ ಓಪನ್ ಮಾಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಸಿಸಿ ಟಿವಿಯಿಂದ ಬಯಲಾಯ್ತು ಕೃತ್ಯ!
ನಾಯಿ ಮರಿ ಕಾಣದೇ ಇದ್ದಾಗ ಆಘಾತಕ್ಕೊಳಗಾದ ಅಂಗಡಿ ಮಾಲೀಕ ಕೂಡಲೇ ತನ್ನ ಪೆಟ್ ಶಾಪ್ನಲ್ಲಿದ್ದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಎರಡು ದಿನದ ಹಿಂದೆ ಅಂಗಡಿಗೆ ಬಂದಿದ್ದ ಯುವಕ ಮತ್ತು ಯುವತಿ ನಾಯಿ ಮರಿಯನ್ನು ಕದ್ದು ಬೈಕ್ನ ಹೆಲ್ಮೆಟ್ ಒಳಗೆ ಹಾಕಿಕೊಂಡು ಪರಾರಿಯಾಗಿರುವ ದೃಶ್ಯ ಸಿಸಿ ಟಿವಿ ದೃಶ್ಯದ ಮೂಲಕ ತಿಳಿದು ಬಂದಿದೆ.
ಇದನ್ನೂ ಓದಿ: Camera Theft: ರೀಲ್ಸ್ ಮಾಡೋ ಹುಚ್ಚಿಗೆ ಕಳ್ಳತನಕ್ಕಿಳಿದ ಸ್ಟೂಡೆಂಟ್! ಮದುವೆ ಮನೆಯಲ್ಲಿ ಕ್ಯಾಮೆರಾ ಕದ್ದ ಖರ್ತನಾಕ್!
ಮತ್ತೊಂದು ಪೆಟ್ ಶಾಪ್ನಿಂದ ನಾಯಿಯ ಆಹಾರವನ್ನೂ ಕದ್ದರು!
ಅಸಲಿಗೆ ನಾಯಿ ಮರಿ ಕದ್ದ ಕಳ್ಳರು ಎತ್ತ ಕಡೆ ಹೋಗಿರಬಹುದು ಎಂಬ ಕುತೂಹಲದಿಂದ ನಿಖಿಲ್ ಮತ್ತು ಶ್ರೇಯಾ ಸಾಗಿರುವ ಮಾರ್ಗದಲ್ಲಿನ ಇತರ ಸಿಸಿ ಟಿವಿ ದೃಶ್ಯಗಳನ್ನು ಅಂಗಡಿ ಮಾಲೀಕ ಪರಿಶೀಲನೆ ಮಾಡಿದ್ದಾರೆ. ಆಗ ಅವರು ವೈಟ್ಟಿಲದ ಮತ್ತೊಂದು ಪೆಟ್ ಶಾಪ್ನಿಂದ ನಾಯಿಗೆ ಕೊಡುವ ಆಹಾರವನ್ನೂ ಕದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಎರಡೂ ಪೆಟ್ ಶಾಪ್ನ ಮಾಲೀಕರು ಕಳ್ಳತನ ಆಗಿರುವ ಬಗ್ಗೆ ಪಣಂಗಾಡ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ಮತ್ತು ಶ್ರೇಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪಣಂಗಾಡ್ ಠಾಣೆ ಪೊಲೀಸರು ನಿಖಿಲ್ ಮತ್ತು ಶ್ರೇಯಾ ಚಲಿಸುತ್ತಿದ್ದ ಬೈಕ್ ನಂಬರ್ನ ಆಧಾರದ ಮೇಲೆ ಮತ್ತು ಅವರು ಹೋದ ಹಾದಿಯ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದಾಗ ಇಬ್ಬರೂ ಕಳ್ಳರು ಉಡುಪಿ ಮೂಲದವರು ಎಂದು ತಿಳಿದು ಬಂದಿದೆ. ಹೀಗಾಗಿ ಉಡುಪಿಗೆ ಬಂದಿಳಿದ ಕೇರಳದ ಪೊಲೀಸರು ಉಡುಪಿಯ ಅವರ ನಿವಾಸದಲ್ಲಿ ಶ್ರೇಯಾ ಮತ್ತು ನಿಖಿಲ್ನನ್ನು ಬಂಧನ ಮಾಡಿದ್ದಾರೆ. ಜೊತೆಗೆ ಕದ್ದ ನಾಯಿ ಮರಿಯನ್ನು ಕೊಂಡು ಹೋಗಿ ಪೆಟ್ ಶಾಪ್ ಮಾಲೀಕನಿಗೆ ಒಪ್ಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ