ತಿರುಪತಿ: ಜಗತ್ತಿನ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನ ಶ್ರೀಮಂತಿಕೆ ಮತ್ತು ಅಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಗೆ ಎಷ್ಟು ಖ್ಯಾತಿಯೋ ಅಲ್ಲಿ ಕೊಡಲ್ಪಡುವ ಲಡ್ಡು ಪ್ರಸಾದಕ್ಕೂ ಅಷ್ಟೇ ಫೇಮಸ್. ದಿನನಿತ್ಯ ಇಲ್ಲಿ ಲಕ್ಷಾಂತರ ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ನೀಡಲಾಗುತ್ತದೆ. ಇಲ್ಲಿಯವರೆಗೆ ತಿರುಪತಿಯಲ್ಲಿ ನೂರಾರು ಮಂದಿ ತಮ್ಮ ಕೈಯಾರೆ ಲಡ್ಡು ತಯಾರಿಸುತ್ತಿದ್ದರು. ಇನ್ಮುಂದೆ ಈ ಲಡ್ಡು ತಯಾರಿಕೆಯನ್ನು ಯಂತ್ರದ ಮೂಲಕ ತಯಾರಿಸಲು ನಿರ್ಧಾರ ಮಾಡಲಾಗಿದೆ.
ಹೌದು.. ಡಿಸೆಂಬರ್ ಅಂತ್ಯದ ವೇಳೆಗೆ ತಿರುಪತಿ ದೇಗುಲದಲ್ಲಿ ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಪ್ರತಿದಿನ 6 ಲಕ್ಷ ಲಡ್ಡುಗಳನ್ನು ತಯಾರಿಸುವ ಸಲುವಾಗಿ ಸುಮಾರು 50 ಕೋಟಿ ವೆಚ್ಚದಲ್ಲಿ ಎರಡು ಯಂತ್ರಗಳನ್ನು ರಿಲಯನ್ಸ್ ಕಂಪನಿಯು ದೇಗುಲಕ್ಕೆ ನೀಡಲಿದೆ.
ಇದನ್ನೂ ಓದಿ: Tirupati: ತಿರುಪತಿ ತಿಮ್ಮಪ್ಪನ ದರ್ಶನ ಈಗ ಮತ್ತಷ್ಟು ದುಬಾರಿ, ಇಲ್ಲಿಗೆ ಹೋಗೋ ಮುನ್ನ ಈ ವಿಚಾರ ತಿಳಿದುಕೊಳ್ಳಲೇಬೇಕು!
ವಿದೇಶದಿಂದ ಆಮದು
ಈ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಟಿಟಿಡಿ ವಿದೇಶದಿಂದ ಆಮದು ಮಾಡಿಕೊಳ್ಳಲಿದ್ದು, ಜರ್ಮನಿ, ಆಸ್ಟ್ರೇಲಿಯಾ ಮತ್ತು ಸ್ವಿಟ್ಜರ್ಲೆಂಡ್ನಿಂದ ಬರಲಿವೆ. ಅಲ್ಲದೇ, ರಿಲಯನ್ಸ್ ಇಂಡಸ್ಟ್ರೀಸ್ ಈ ಯಂತ್ರೋಪಕರಣಗಳನ್ನು ನೀಡಲು ಸಿದ್ಧವಿದೆ. ಕೊನೆಯಲ್ಲಿ ಕೈಯಿಂದ ಲಡ್ಡುಗಳಿಗೆ ಅಂಡಾಕಾರದ ಆಕಾರ ನೀಡಬೇಕಾಗುವುದನ್ನು ಬಿಟ್ಟರೆ ಸಂಪೂರ್ಣ ತಯಾರಿಕೆ ಸ್ವಯಂಚಾಲಿತ ಯಂತ್ರದಲ್ಲೇ ಆಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಹೇಳಿದ್ದಾರೆ.
ಶುಚಿತ್ವ, ಗುಣಮಟ್ಟ ಮತ್ತು ಪ್ರಮಾಣ ಹೆಚ್ಚು
ಹಲವು ದಶಕಗಳಿಂದ ದೊಡ್ಡ ಡೊಡ್ಡ ಪಾತ್ರೆಗಳ ಮೂಲಕ ಲಡ್ಡುಗಳನ್ನು ಕೈಯ್ಯಾರೆ ತಯಾರಿಸಲಾಗುತ್ತಿತ್ತು. ಇನ್ನುಮುಂದೆ ಈ ಅತ್ಯಾಧುನಿಕ ಯಂತ್ರವು ಪ್ರತಿದಿನಕ್ಕೆ 6 ಲಕ್ಷ ಲಡ್ಡು ತಯಾರಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಇದು ಸದ್ಯ ದಿನವೊಂದಕ್ಕೆ ತಯಾರಾಗುವ ಲಡ್ಡುಗಳ ಸಂಖ್ಯೆಗಿಂತ ಭಾರಿ ಪ್ರಮಾಣದಲ್ಲಿ ಅಧಿಕವಾಗಿರಲಿದೆ. ಯಂತ್ರ ಬಳಕೆಯಿಂದ ಉತ್ತಮ ಗಾತ್ರ ಮತ್ತು ಗುಣಮಟ್ಟದ ಆರೋಗ್ಯಕರವಾದ ಲಡ್ಡುಗಳನ್ನು ತಯಾರಿಸಬಹುದು. ಶುಚಿತ್ವ ಕಾಪಾಡಲೂ ಸಾಧ್ಯವಾಗುತ್ತದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Tirupati Income: ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! ಕಳೆದ ವರ್ಷ 1,400 ಕೋಟಿ ರೂಪಾಯಿ ಆದಾಯ
ಇನ್ನು ಈ ಅತ್ಯಾಧುನಿಕ ಲಡ್ಡು ತಯಾರಿಕಾ ಯಂತ್ರದಿಂದ ಹೆಚ್ಚು ಆರೋಗ್ಯಕರ ಮತ್ತು ರುಚಿಯಾದ ತಿರುಪತಿ ಲಡ್ಡು ಪ್ರಸಾದಗಳ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಲಡ್ಡು ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಳೆದ ಹಲವು ದಶಕಗಳಿಂದ ಪ್ರಸಾದವನ್ನು ಕೈಯಾರೆ ಉತ್ಪಾದಿಸಲಾಗುತ್ತಿದ್ದು, ಹೊಸ ಯಂತ್ರಗಳು ಪ್ರಮಾಣ ಮತ್ತು ಗುಣಮಟ್ಟ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಧರ್ಮಾರೆಡ್ಡಿ ಹೇಳಿದರು.
ಯಂತ್ರ ಹೇಗೆ ಕೆಲಸ ಮಾಡುತ್ತದೆ?
ಹೊಸ ಯೋಜನೆಯಡಿ, ಬೇಳೆ ಹಿಟ್ಟಿನ ಮಿಶ್ರಣವನ್ನು ಇತರ ಕಚ್ಚಾ ಪದಾರ್ಥಗಳೊಂದಿಗೆ ನೇರವಾಗಿ ಸ್ವಯಂಚಾಲಿತ ‘ಬೂಂದಿ ಪೋಟು’ಗೆ ಕಳುಹಿಸಲಾಗುತ್ತದೆ. ಆಗ ಯಂತ್ರವು ಹೆಚ್ಚಿನ ತಾಪಮಾನದಲ್ಲಿ ಕುದಿಯುತ್ತಿರುವ ಶುದ್ಧ ತುಪ್ಪವನ್ನು ಪ್ಯಾನ್ಗೆ ಮಿಶ್ರಣ ಮಾಡುತ್ತದೆ. ಈ ಯಂತ್ರವು ಕುದಿಯುವ ತುಪ್ಪದಿಂದ ಬೂಂದಿಯನ್ನು ಬೇರ್ಪಡಿಸಿ ಮತ್ತೊಂದು ಯಂತ್ರಕ್ಕೆ ಕಳುಹಿಸಿ ಅಲ್ಲಿ ಗೋಡಂಬಿ, ಏಲಕ್ಕಿ, ಒಣದ್ರಾಕ್ಷಿ, ಸಕ್ಕರೆ ಮಿಠಾಯಿ ಮತ್ತು ಸಕ್ಕರೆ ಪಾಕವನ್ನು ಬೆರೆಸುತ್ತದೆ. ಬಳಿಕ ಲಡ್ಡು ಪೋಟು ಕೆಲಸಗಾರರು ಸ್ವಯಂಚಾಲಿತ ಯಂತ್ರಗಳಿಂದ ಲಭ್ಯವಿರುವ ಮಿಶ್ರಣದಿಂದ ಲಡ್ಡುಗಳನ್ನು ತಯಾರಿಸಿ ಸಂಬಂಧಪಟ್ಟ ಕೌಂಟರ್ಗಳಿಗೆ ಕಳುಹಿಸುತ್ತಾರೆ.
ಇನ್ನು ತಿರುಪತಿ ದೇಗುಲದ ಪ್ರಸಾದ ಮಾರಾಟದ ಮೂಲಕ 2022-2023ರ ಆರ್ಥಿಕ ವರ್ಷದಲ್ಲಿ 365 ಕೋಟಿ ರೂ. ಆದಾಯವನ್ನು ಗಳಿಸಬಹುದು ಎಂದು ಟಿಟಿಡಿ ಅಂದಾಜಿಸಿದ್ದು, ಅಲ್ಲದೇ, ಜನವರಿಯಲ್ಲಿ 123 ಕೋಟಿ ರೂ. ಹುಂಡಿಗೆ ಹರಿದುಬಂದಿದೆ. ಜನವರಿಯಲ್ಲಿ 21 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು ಹಾಗೂ 8 ಲಕ್ಷ ಭಕ್ತರು ಕೇಶಮುಂಡನ ಮಾಡಿಸಿಕೊಂಡಿದ್ದರು ಎಂದು ಟಿಟಿಡಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ