ರಾಷ್ಟ್ರ ರಾಜಧಾನಿ ದೆಹಲಿ ತುಂಬಾ ಚಿಕ್ಕ ರಾಜ್ಯ. ಇದು ಪೂರ್ಣಪ್ರಮಾಣದ ಕೇಂದ್ರಾಡಳಿತ ಪ್ರದೇಶವೂ ಅಲ್ಲ. ಅಥವಾ ಸ್ವಾಯತ್ತ ರಾಜ್ಯವೂ ಅಲ್ಲ. ಈ ಸಣ್ಣ ರಾಜ್ಯಕ್ಕಾಗಿ ದೊಡ್ಡ ಪೈಪೋಟಿ ನಡಿತಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬಹುದು ಅಂತಾ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ. ಇಷ್ಟರ ಮಧ್ಯೆ ಸೋತರೂ ಗೌರವಾನ್ವಿತವಾಗಿ ಸೋಲಬೇಕು, ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಸುಲಭದ ತುತ್ತಾಗಲು ಬಿಡಬಾರದು ಎಂಬುದು ಬಿಜೆಪಿ ಲೆಕ್ಕಾಚಾರ. ಇದಕ್ಕೂ ಮೀರಿದ್ದು ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಸೀಟು ಗೆಲ್ಲಬೇಕೆಂಬುದು ಬಿಜೆಪಿ ಗುರಿ. ಕಾಂಗ್ರೆಸ್ ಕತೆ ಬೇರೆ. ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಗೆ ಈ ಸಲದ ಚುನಾವಣೆ ಅಸ್ತಿತ್ವ ಉಳಿಸಿಕೊಳ್ಳೋಕೆ ಭಾರೀ ಪ್ರಯತ್ನ ಪಡ್ತಿದೆ.
ಕೇಂದ್ರ ಮತ್ತು ಸ್ಥಳೀಯ ನಗರ ಪಾಲಿಕೆಯಲ್ಲಿ ಅಧಿಕಾರ ಹೊಂದಿರುವುದರಿಂದ ಬಿಜೆಪಿಗೆ ಅಭ್ಯರ್ಥಿ ಹುಡುಕುವುದು ದೊಡ್ಡ ಸಮಸ್ಯೆ ಅಲ್ಲ. ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿದ್ದ ಮಹೇಶ್ ಗಿರಿ ಮತ್ತಿತರರಂಥವರಿದ್ದಾರೆ. ಅವರಿಗೆ ಟಿಕೆಟ್ ಕೊಡುತ್ತೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಭಾರೀ ಸಮಸ್ಯೆ ಕಂಡುಬರುತ್ತಿದೆ. ಶೀಲಾ ದೀಕ್ಷಿತ್ ಇದ್ದಾಗ ಅವರ ನಾಮಬಲದಿಂದ ಸ್ವಲ್ಪ ತ್ರಾಣ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಅಜಯ್ ಮಾಕೆನ್, ಕಪಿಲ್ ಸಿಬಾಲ್, ಸಂದೀಪ್ ದೀಕ್ಷಿತ್ ಅಂಥವರೇ ಚುನಾವಣಾ ಅಖಾಡಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಚುನಾವಣಾ ಕಣದಲ್ಲಿ ಪ್ರತಿ ನಿಮಿಷ, ಪ್ರತಿ ನಡೆಗಳು ನಿರ್ಣಾಯಕವೇ. ಈಗ ಆಮ್ ಆದ್ಮಿ ಪಕ್ಷ ಮೊದಲೇ ಟಿಕೆಟ್ ಅನೌನ್ಸ್ ಮಾಡಿ ಯಡವಟ್ಟು ಮಾಡಿಕೊಂಡಿತು ಎಂಬ ಮಾತುಗಳೂ ಕೇಳಿಬರುತ್ತಿವೆ. ಆಮ್ ಆದ್ಮಿ ಪಕ್ಷ ಟಿಕೆಟ್ ನಿರಾಕರಿಸಿರುವವರಿಗೆ ಬಿಜೆಪಿ-ಕಾಂಗ್ರೆಸ್ ಗಾಳ ಹಾಕಿವೆ. ಅಷ್ಟರಮಟ್ಟಿಗೆ ಕಾಂಗ್ರೆಸ್-ಬಿಜೆಪಿಗೆ ಅಭ್ಯರ್ಥಿಗಳ ಹುಡುಕಾಟ ತುಸು ಸಲೀಸಾಗಿದೆ.
ಚುನಾವಣಾ ಕಣ ಪ್ರವೇಶಿಸಿದ ನಿರ್ಭಯ ಪ್ರಕರಣ
ನಿರ್ಭಯ ಅತ್ಯಾಚಾರ ಪ್ರಕರಣ ನಿರೀಕ್ಷೆಯಂತೆ ರಾಜಕೀಯಗೊಳ್ಳುತ್ತಿದೆ. ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ತಡವಾಗಲು ಆಪ್ ಕಾರಣ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ ಸಿಖ್ ದಂಧೆಯ ವಿಚಾರದ ಮೂಲಕ ಕಾಂಗ್ರೆಸ್ ಮೇಲೂ ಕಿಡಿಕಾರಿದ್ದಾರೆ. 1984ರ ಸಿಖ್ ದಂಧಯನ್ನು ಪುನರುಚ್ಛರಿಸುವ ಮೂಲಕ ಕಾಂಗ್ರೆಸ್ ಅನ್ನು ಇನ್ನಷ್ಟು ಕಷ್ಟಕ್ಕೆ ದೂಡಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ: ಆಡಳಿತವಿರೋಧಿ ಅಲೆ ತಡೆದು ಗೆಲುವಿನ ನಗೆ ಬೀರಲು ಬಿಜೆಪಿ ಹಾದಿ ತುಳಿಯುತ್ತಿರುವ ಆಪ್!
ನಿರ್ಭಯ ಮತ್ತು ಸಿಖ್ ದಂಧೆ ವಿಷಯದಲ್ಲಿ ತಕ್ಷಣದ ಪ್ರತಿಕ್ರಿಯೆಗಳನ್ನೂ ಮೀರಿ ಆಪ್ ಮತ್ತು ಕಾಂಗ್ರೆಸ್ ಯಾವ ತಂತ್ರ ಮಾಡುತ್ತವೆ ಎನ್ನುವುದನ್ನು ಕಾದುನೋಡಬೇಕು. ಮೇಲಾಗಿ ನಿರ್ಭಯ ಪ್ರಕರಣ ಬಹುತೇಕ ಮುಗಿದುಹೋಗಿರುವಂಥದ್ದು. ಸಿಖ್ ದಂಧೆ ಹಳೆಯ ಪ್ರಕರಣ. ಬಿಜೆಪಿ ಈ ಎರಡೂ ಪ್ರಕರಣಗಳಿಂದ ಚುನಾವಣಾ ಲಾಭವನ್ನು ನಿರೀಕ್ಷೆ ಮಾಡುತ್ತಿದೆ. ಅದಕ್ಕೆ ಲಾಭ ಆಗುತ್ತದೆಯೋ ಇಲ್ಲವೋ? ಮುಂದೆ ಗೊತ್ತಾಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ