ಪಾಟ್ನಾ (ಸೆಪ್ಟೆಂಬರ್ 12); ಈ ವರ್ಷಾಂತ್ಯದಲ್ಲಿ ಬಿಹಾರ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಅಧಿಕ ಸ್ಥಾನಗಳನ್ನು ಗಳಿಸುವ ಸಲುವಾಗಿ ಭರದ ಸಿದ್ಧತೆಯಲ್ಲಿ ತೊಡಗಿವೆ. ಈ ನಡುವೆ ಮಿತ್ರ ಪಕ್ಷಗಳಾದ ಜೆಡಿಯು ಮತ್ತು ಬಿಜೆಪಿ ನಡುವೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆಸುವ ಸಲುವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಇಂದು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರನ್ನು ಅವರ ಪಾಟ್ನಾ ನಿವಾಸದಲ್ಲೇ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸ್ಥಾನ ಹಂಚಿಕೆ ಕುರಿತು ಅನೌಪಚಾರಿಕವಾಗಿ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭಿಯಾನ ನಡೆಸುವ ಜವಾಬ್ದಾರಿಯನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರಿಗೆ ನೀಡಲಾಗಿದ್ದು, ಅವರೂ ಸಹ ಇಂದಿನ ಚರ್ಚೆಯಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಅಥವಾ ಎಲ್ಜೆಪಿಯೊಂದಿಗಿನ ನಿತೀಶ್ ಕುಮಾರ್ ಅವರ ಮೈತ್ರಿಯ ಬಗ್ಗೆ ಅನಿಶ್ಚಿತತೆಯ ಮೋಡ ಕವಿದಿದ್ದು ಈ ನಡುವೆಯೇ ಬಿಜೆಪಿ ಮತ್ತು ಜೆಡಿಯು ಪ್ರಮುಖ ಸಭೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಈ ಎರಡೇ ಪಕ್ಷಗಳು ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಿರುವುದು ಬಹುತೇಕ ಖಚಿತವಾಗಿದೆ.
ಎನ್ಡಿಎ ಮೈತ್ರಿಕೂಟದ ಭಾಗವಾಗುವ ಕುರಿತು ಈ ಹಿಂದೆಯೇ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದ ಚಿರಾಗ್ ಪಾಸ್ವಾನ್, "ಎನ್ಡಿಎ ಜೊತೆಗಿನ ಮೈತ್ರಿಯ ಕುರಿತು ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ, ನಿತೀಶ್ ಕುಮಾರ್ ಎನ್ಡಿಎ ನಾಯಕನಾಗಿ ಬಿಹಾರದಲ್ಲಿ ಗುರುತಿಸುವುದರಲ್ಲಿ ನಮಗೆ ಒಪ್ಪಿಗೆ ಇಲ್ಲ. ಬಿಜೆಪಿ ಪಕ್ಷದ ಬೇರೆ ಯಾವುದೇ ನಾಯಕ ಬೇಕಿದ್ದರೂ ಎನ್ಡಿಎ ಮುಖವಾಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅಲ್ಲದೆ, ಬಿಹಾರದಲ್ಲಿ ಬಿಹಾರಿಗಳಿಗೆ ಮೊದಲ ಆದ್ಯತೆ ಎಂಬ ನಿಮ್ಮ ಸಿದ್ಧಾಂತ, ಅಭಿಯಾನದ ಕುರಿತು ತಮ್ಮ ನಿಲುವನ್ನು ಬಿಜೆಪಿ ಮೊದಲು ಸ್ಪಷ್ಟಪಡಿಸಲಿ" ಎಂದಿದ್ದರು.
ಕೊರೋನಾ ವೈರಸ್ ಅನ್ನು ನಿಯಂತ್ರಿಸುವಲ್ಲಿ ಮತ್ತು ಪ್ರವಾಹದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಸರ್ಕಾರ ಎಡವಿದೆ ಎಂದು ಚಿರಾಗ್ ಪಾಸ್ವಾನ್ ನೇತೃತ್ವದ ಜನಶಕ್ತಿ ಪಕ್ಷ ಕಳೆದ ಹಲವು ದಿನಗಳಿಂದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕಾಪ್ರಹಾರವನ್ನು ನಡೆಸುತ್ತಲೇ ಇದೆ. ಹೀಗಾಗಿ ಚಿರಾಗ್ ಪಾಸ್ವಾನ್ ಎನ್ಡಿಎ ಮೈತ್ರಿಯ ಭಾಗವಾಗುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ