news18-kannada Updated:December 20, 2020, 6:53 PM IST
ಬೋಲ್ಪುರದಲ್ಲಿ ರೋಡ್ ಶೋ ನಡೆಸಿದ ಕೇಂದ್ರ ಸಚಿವ ಅಮಿತ್ ಶಾ
ಕೊಲ್ಕತ್ತಾ(ಡಿಸೆಂಬರ್. 20) : ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಬಂಗಾಳದ ಮತದಾರರನ್ನು ಕೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಮತ ಚಲಾಯಿಸುವುದು ಪ್ರಗತಿಗೆ ಮತ ಹಾಕಿದಂತೆ ಎಂದು ತಿಳಿಸಿದ್ದಾರೆ. ಕೊಲ್ಕತ್ತಾದ ಬಿರ್ಭುಮ್ ಜಿಲ್ಲೆಯ ಬೋಲ್ಪುರದಲ್ಲಿ ನಡೆದ ರೋಡ್ ಶೋ ವೊಂದರಲ್ಲಿ ಮಾತನಾಡಿದ ಅಮಿತ್ ಶಾ, ನಾನು ಬೋಲ್ಪುರದಲ್ಲಿ ಅನೇಕ ರೋಡ್ ಶೋ ನೋಡಿದ್ದೇನೆ. ನಾನು ಅನೇಕ ರಾಲಿಗಳನ್ನು ಸಂಘಟಿಸಿದ್ದೇನೆ. ಆದರೆ ಇಂದು ನಾನು ಸಾಕ್ಷಿಯಾಗುತ್ತಿರುವುದು ನಾವು ಮೊದಲು ನೋಡಿದಂತೆ ಅಲ್ಲ. ಈ ಸಭೆಯು ಬಂಗಾಳದ ಜನರು ಮಮತಾ ವಿರುದ್ಧದ ಕೋಪವನ್ನು ತೋರಿಸುತ್ತದೆ. ಬಂಗಾಳದ ಜನರು ಬದಲಾವಣೆ ಬಯಸುತ್ತಾರೆ ಎಂದು ಹೇಳಿದರು. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶದಿಂದ ಬಂಗಾಳಕ್ಕೆ ಅಕ್ರಮ ವಲಸೆ ಬರುವುದನ್ನು ಕೊನೆಗೊಳಿಸುತ್ತೇವೆ ಎಂದು ಕೇಂದ್ರ ಸಚಿವ ಅಮಿತ್ ಶಾ ತಿಳಿಸಿದರು.
ನೀವು ನಮಗೆ ಮತ ಹಾಕಿದ್ರೆ, ಪ್ರಗತಿಗೆ ಮತ ಹಾಕುತ್ತೀರಿ ಎಂದು ಭರವಸೆ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಬಂಗಾಳ ಪ್ರಗತಿಯ ಹಾದಿಯನ್ನು ಕಳೆದುಕೊಂಡಿದೆ. ನೀವು ಈಗಾಗಲೇ ಮಮತಾ ಬ್ಯಾನರ್ಜಿ ಅವರಿಗೆ ಸಮಯ ನೀಡಿದ್ದೀರಿ, ಈಗ ಪ್ರಧಾನಿ ಮೋದಿ ಅವರಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ :
ಮಾಲೆಗಾಂವ್ ಸ್ಪೋಟ ಪ್ರಕರಣ: 2 ನೇ ಬಾರಿಯೂ ಕೋರ್ಟ್ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್
ರೋಡ್ ಶೋ ಮುನ್ನ ಕೇಂದ್ರ ಸಚಿವ ಅಮಿತ್ ಶಾ ಅವರು ವಿಶ್ವ ಭಾರತೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಶಾಂತಿನಿಕೇತನ ವಿಶ್ವ ಭಾರತಿ ಕ್ಯಾಂಪಸ್ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
2018ರಲ್ಲಿ ಸಿಪಿಎಂ ತೊರೆದು ಟಿಎಂಸಿ ಸೇರಿದ್ದ ಶಾಸಕಿ ದೀಪಾಲಿ ಬಿಸ್ವಾಸ್ ಮತ್ತು ಸಿಪಿಎಂ, ಸಿಪಿಐ ಹಾಗೂ ಕಾಂಗ್ರೆಸ್ನ ತಲಾ ಒಬ್ಬ ಶಾಸಕರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೇದಿನಿಪುರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬರ್ಧಮಾನ್ ಪೂರ್ವ ಕ್ಷೇತ್ರದ ಟಿಎಂಸಿ ಸಂಸದ ಸುನಿಲ್ ಮಂಡಲ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Published by:
G Hareeshkumar
First published:
December 20, 2020, 6:42 PM IST