ರಾಯ್ಪುರ: ಭದ್ರತಾ ಪಡೆ ಮತ್ತು ನಕ್ಸಲರ (Naxals) ನಡುವೆ ನಡೆದ ಕಾಳಗದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವ (Jawans Killed) ಘಟನೆ ಛತ್ತೀಸ್ಗಡ್ ರಾಜ್ಯದ (Chhattisgarh Encounter) ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ನಕ್ಸಲರನ್ನು ಮಟ್ಟ ಹಾಕಲು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪರಸ್ಪರ ಗುಂಡಿನ ದಾಳಿ ನಡೆದಾಗ ಮೂವರು ಪೊಲೀಸರು ಎನ್ಕೌಂಟರ್ಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಬೆಳಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಛತ್ತೀಸ್ಗಡ್ ರಾಜ್ಯದ ಸುಕ್ಮಾ ಜಿಲ್ಲೆಯ ಸಮೀಪದ ಜಗರ್ಗುಂಡ ಮತ್ತು ಕುಂದೇಡ್ ಗ್ರಾಮಗಳಲ್ಲಿ ನಕ್ಸಲರು ಇದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಸ್ಥಳಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ನಕ್ಸಲರು ಮತ್ತು ಛತ್ತೀಸ್ಗಡ್ ಪೊಲೀಸರ ಜಿಲ್ಲಾ ಮೀಸಲು ಕಾವಲು (ಡಿಆರ್ಜಿ) ಪಡೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಡಿಆರ್ಜಿ ತಂಡವು ನಕ್ಸಲರ ಶೋಧ ಕಾರ್ಯಾಚರಣೆ ನಡೆಸಿದ್ದ ವೇಳೆ ಮುಖಾಮುಖಿ ಉಂಟಾಗಿದೆ. ಹೀಗಾಗಿ ಪರಸ್ಪರ ಗುಂಡಿನ ದಾಳಿ ನಡೆದಿದೆ ಎಂದು ಐಜಿಪಿ ಸುಂದರ್ ರಾಜ್ ಪಿ ತಿಳಿಸಿದ್ದಾರೆ.
ಹುತಾತ್ಮರಾಗಿರುವ ಭದ್ರತಾ ಪಡೆಯ ಸಿಬ್ಬಂದಿ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಮುರಾಮ್ ನಾಗ್ (36), ಕಾನ್ಸ್ಟೇಬಲ್ಗಳಾದ ಕುಂಜಾಮ್ ಜೋಗ (33) ಮತ್ತು ವಂಜಮ್ ಭೀಮ (31) ಎಂದು ತಿಳಿದು ಬಂದಿದ್ದು, ಗುಂಡಿನ ಕಾಳಗದಲ್ಲಿ ಜೀವ ಕಳೆದುಕೊಂಡ ನತದೃಷ್ಟ ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿರುವ ಪೊಲೀಸ್ ಐಜಿ, ರಾಜಧಾನಿ ರಾಯಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಜಗರ್ಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಆರ್ಜಿ ತಂಡವು ನಕ್ಸಲರು ಕಾರ್ಯಾಚರಿಸುತ್ತಿರುವ ಸುಳಿವು ಸಿಕ್ಕಿತ್ತು. ಇದರ ಖಚಿತ ಮಾಹಿತಿಯ ಮೇರೆಗೆ ನಮ್ಮ ತಂಡ ಪತ್ತೆ ಕಾರ್ಯಾಚರಣೆ ನಡೆಸಿತ್ತು ಎಂದು ತಿಳಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಹೆಚ್ಚುವರಿ ಪೊಲೀಸ್ ಪಡೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಮೃತ ಸಿಬ್ಬಂದಿಯ ದೇಹಗಳನ್ನು ಜಗರ್ಗುಂಡಕ್ಕೆ ಸಾಗಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ನಕ್ಸಲರ ಪತ್ತೆ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ಈ ಗುಂಡಿನ ಚಕಮಕಿಯಲ್ಲಿ ಆರಕ್ಕೂ ಹೆಚ್ಚು ನಕ್ಸಲರನ್ನು ನಮ್ಮ ಪೊಲೀಸ್ ಪಡೆ ಹೊಡೆದುರುಳಿಸಿದ್ದಾರೆ. ಆದರೆ ನಕ್ಸಲರ ತಂಡದ ಸದಸ್ಯರು ಅವರ ಶವಗಳನ್ನು ಕಾಡಿನ ಒಳಗೆ ಎಳೆದುಕೊಂಡು ಹೋಗುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಛತ್ತೀಸ್ಗಡ್ ಸಿಎಂ ಭೂಪೇಶ್ ಬಾಘೇಲ್ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಪೊಲೀಸ್ ಸಿಬ್ಬಂದಿಯ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ