ಮುಂಬೈ: ಮನೆಯ ಬಾಗಿಲ (Door) ಮುಂದೆ ನೆರೆ ಮನೆಯ ವ್ಯಕ್ತಿಯೊಬ್ಬ ಚಪ್ಪಲಿ (Slipper) ಬಿಟ್ಟಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ನಡೆದಿದೆ. ಬಾಗಿಲ ಬಳಿ ಚಪ್ಪಲಿ ಬಿಟ್ಟ ವ್ಯಕ್ತಿಯನ್ನು ಗಂಡ ಹೆಂಡತಿ (Husband-Wife) ಸೇರಿ ಕೊಲೆ ಮಾಡಿದ್ದಾರೆ. 54 ವರ್ಷದ ಅಫ್ಸರ್ ಖಾತ್ರಿ ಎಂಬ ವ್ಯಕ್ತಿಯೇ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ದುರ್ದೈವಿ. ಕೊಲೆಯಾದ ವ್ಯಕ್ತಿ ಹಾಗೂ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದವು ಎಂದು ತಿಳಿದುಬಂದಿದ್ದು, ಶನಿವಾರ ಚಪ್ಪಲಿ ಬಿಟ್ಟ ವಿಚಾರಕ್ಕೆ ನಡೆದ ಜಗಳ ಅತಿರೇಕಕ್ಕೆ ತಿರುಗಿ ವ್ಯಕ್ತಿಯ ಜೀವವನ್ನೇ ತೆಗೆಯಲಾಗಿದೆ.
ಮನೆಯ ಬಾಗಿಲ ಬಳಿ ಮೃತ ವ್ಯಕ್ತಿ ಹಾಗೂ ಆರೋಪಿ ದಂಪತಿ ಒಬ್ಬರ ಮನೆ ಬಾಗಿಲ ಮುಂದೆ ಮತ್ತೊಬ್ಬರು ಚಪ್ಪಲಿ ಬಿಡುತ್ತಿದ್ದರು. ಶನಿವಾರ ರಾತ್ರಿಯೂ ಇದೇ ವಿಚಾರಕ್ಕೆ ದಂಪತಿ ಹಾಗೂ ಅಫ್ಸರ್ ನಡುವೆ ಜಗಳ ಶುರುವಾಗಿದೆ. ಹೀಗೆ ಶುರುವಾದ ಜಗಳದಲ್ಲಿ ಮಹಿಳೆ ಮತ್ತು ಆಕೆಯ ಪತಿ ಇಬ್ಬರು ಸೇರಿ ಅಫ್ಸರ್ನನ್ನು ಹತ್ಯೆ ಮಾಡಿದ್ದಾರೆ ಎಂದು ನಯಾ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಿಲಾನಿ ಸೈಯದ್ ಹೇಳಿದ್ದಾರೆ.
ಹೊಡೆದಾಟದಲ್ಲಿ ಗಾಯಗೊಂಡಿದ್ದ ಅಫ್ಸರ್ ಖಾತ್ರಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿದೆ. ಆದರೆ ಆಕೆಯ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ದಂಪತಿ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲಾನಿ ತಿಳಿಸಿದ್ದಾರೆ.
ಇದನ್ನೂ ಓದಿ:HIV: ಹಲವು ರೋಗಿಗಳಿಗೆ ಒಂದೇ ಸಿರಿಂಜ್ ಬಳಕೆ, ವೈದ್ಯನ ಎಡವಟ್ಟಿನಿಂದ ಬಾಲಕಿಗೆ ಹೆಚ್ಐವಿ ಪಾಸಿಟಿವ್!
ಪಟಾಕಿ ಶೆಡ್ಗೆ ಬೆಂಕಿ ಮಹಿಳೆ ಸಜೀವ ದಹನ
ಪಟಾಕಿ ಶೆಡ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಓರ್ವ ಮಹಿಳೆ ಸಜೀವ ದಹನವಾಗಿರುವಂತಹ ದಾರುಣ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಶಿವನಾರ್ಪುರಂನಲ್ಲಿ ನಡೆದಿದೆ. ಘಟನೆಯಲ್ಲಿ ಕೆಲಸ ಮಾಡುತ್ತಿದ್ದ 8 ಮಹಿಳೆಯರಿಗೆ ಗಾಯವಾಗಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳು ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಿಲಿಂಡರ್ ಸ್ಫೋಟದಿಂದ 13 ವರ್ಷದ ಬಾಲಕ ಸಾವು
ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. 13 ವರ್ಷದ ಬಾಲಕ ಮಹೇಶ್ ಸಾವನ್ನಪ್ಪಿದ ದುರ್ದೈವಿ ಬಾಲಕ. ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ಸಿಲಿಂಡರ್ ರೀ ಫಿಲ್ಲಿಂಗ್ ವೇಳೆ ಭೀಕರ ಸ್ಫೋಟ
ಅಂದಹಾಗೆ ಈ ಸ್ಫೋಟ ನಡೆದಿದ್ದು ಸಿಲಿಂಡರ್ ರೀ ಫಿಲ್ಲಿಂಗ್ ಅಂಗಡಿಯಲ್ಲಿ. ಬಾಲಕ ಮನೆ ಬಳಿಯೇ ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ಗೋಡೌನ್ ಇತ್ತು. ಇಲ್ಲಿ ಲಿಯಾಕತ್ ಎಂಬುವನು ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ. ಈ ವೇಳೆ ಬಾಲಕ ಅಂಗಡಿ ಪಕ್ಕದಲ್ಲೇ ನಿಂತಿದ್ದ ಎನ್ನಲಾಗಿದೆ. ಈ ವೇಳೆ ಗ್ಯಾಸ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಂಗಡಿ ಪಕ್ಕದಲ್ಲಿ ನಿಂತಿದ್ದ ಬಾಲಕ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಸಾವು
ಇಂದು ಬೆಳಗ್ಗೆ 10 ಗಂಟೆಗೆ ಸಿಲಿಂಡರ್ ಸ್ಫೋಟಗೊಂಡಿದೆ. ಇಂದು ಶಾಲೆಗೆ ರಜೆ ಇರೋದ್ರಿಂದ ಬಾಲಕ ಅಂಗಡಿ ಬಳಿಯೇ ನಿಂತಿದ್ದ. ಆದರೆ ಸಿಲಿಂಡರ್ ಸ್ಫೋಟದಿಂದ ಬಾಲಕ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮಹೇಶ್ ಸಾವನ್ನಪ್ಪಿದ್ದಾನೆ.
ಸಿಲಿಂಡರ್ ಸ್ಫೋಟದ ಬಳಿಕ ಸಿಬ್ಬಂದಿ ಎಸ್ಕೇಪ್
ಅಂದಹಾಗೆ ಇದಕ್ಕೆಲ್ಲ ಕಾರಣವಾಗಿದ್ದು ಗ್ಯಾಸ್ ಸಿಲಿಂಡರ್ ರೀ ಫಿಲ್ಲಿಂಗ್ ಗೋಡೌನ್ ಸಿಬ್ಬಂದಿ ಲಿಯಾಕತ್. ಈತನೇ ಸಿಲಿಂಡರ್ ರಿಫಿಲ್ ಮಾಡುತ್ತಿದ್ದು, ಅಜಾಗರೂಕತೆಯಿಂದ ಗ್ಯಾಸ್ ಸ್ಫೋಟಗೊಂಡಿದೆ. ಇನ್ನು ಘಟನೆಯ ಬೆನ್ನಲ್ಲೆ ಲಿಯಾಕತ್ ಸ್ಥಳದಿಂದ ಎಸ್ಕೇಪ್ ಅಗಿದ್ದಾನೆ. ಇದೀಗ ಲಿಯಾಕತ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ