ನವದೆಹಲಿ: ಹಲವು ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದ ಲಷ್ಕರ್-ಎ- ತಯಬಾ (Lashkar-e-Taiba) ಸಂಘಟನೆಯ ಉಗ್ರನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು (Jammu and Kashmir Police) ಗುರುವಾರ ಬಂಧಿಸಿದ್ದಾರೆ. ರಿಯಾಸಿ ಜಿಲ್ಲೆಯ ಆರಿಫ್ (Arif) ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸರ್ಕಾರಿ ಶಾಲಾ ಶಿಕ್ಷಕನ (teacher) ಹುದ್ದೆಯಲ್ಲಿ ಇದ್ದುಕೊಂಡೇ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ವೈಷ್ಣೋದೇವಿ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಸ್ಫೋಟಕ ಪ್ರಕರಣ ಸೇರಿದಂತೆ ಹಲವೆಡೆ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವೂ ಆರಿಫ್ ಮೇಲಿದೆ.
ಲಷ್ಕರ್-ಎ-ತಯಬಾ ಸಂಘಟನೆ ಉಗ್ರ
ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೇ ಆರಿಫ್ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಜನವರಿ 21ರಂದು ಜಮ್ಮುವಿನ ನರ್ವಾಲ್ನಲ್ಲಿ ನಡೆದ ಸ್ಫೋಟದಲ್ಲೂ ಭಾಗಿಯಾಗಿದ್ದ ಎಂದು ಜಮ್ಮು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದು, ಆತನಿಂದ ಪರ್ಫ್ಯೂಮ್ ಐಇಡಿ ಯನ್ನು ( Improvised explosive device) ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
11 ದಿನಗಳ ಪರಿಶ್ರಮದಿಂದ ಬಂಧನ
ಜಮ್ಮುವಿನಲ್ಲಿ ಬ್ಲಾಸ್ಟ್ ನಡೆದ 11 ದಿನಗಳ ನಂತರ ಜಮ್ಮು ಪೊಲೀಸರ ಸತತ ಪರಿಶ್ರಮದಿಂದಾಗಿ ರಿಯಾಸಿ ಜಿಲ್ಲೆಯ ನಿವಾಸಿಯಾಗಿರುವ ಆರಿಫ್ ಅಹ್ಮದ್ನನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ. ಗಣರಾಜ್ಯೋತ್ಸವ ಆಚರಣೆಗೆ ಐದು ದಿನ ಬಾಕಿಯಿರುವಾಗ ಜನವರಿ 21ರಂದು ಜಮ್ಮುವಿನ ನರ್ವಾಲ್ ಕೈಗಾರಿಕಾ ಪ್ರದೇಶದಲ್ಲಿ ಎರಡು ಐಇಡಿ ಸ್ಫೋಟಿಸಲಾಗಿತ್ತು. ಮೊದಲ ಸ್ಟೋಟದಲ್ಲಿ ಐವರು ಮತ್ತು ಎರಡನೇ ಸ್ಫೋಟದಲ್ಲಿ ನಾಲ್ವರು ಸೇರಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದರು.
ಪರ್ಫ್ಯೂಮ್ ಐಇಡಿ ಪತ್ತೆ
ಇಲ್ಲಿಯವರೆಗೆ ನಾವು ಉಗ್ರರ ಬಂಧನ ವೇಳೆ ಸ್ಫೋಟಕ ವಸ್ತುಗಳು, ಬಾಂಬ್ಗಳು ಮತ್ತು ಟೈಮರ್ ಅಳವಡಿಸಲಾದ ಐಇಡಿಗಳನ್ನು ನೋಡಿದ್ದೇವೆ. ಆದರೆ ಆರಿಫ್ನಿಂದ ಹೊಸ ರೀತಿಯ ಐಇಡಿಯಯನ್ನು ವಶಪಡಿಸಿಕೊಳ್ಳಲಾಗಿದೆ. ಅದು ನೋಡುವುದಕ್ಕೆ ಪರ್ಫ್ಯೂಮ್ ಬಾಟಲ್ನಂತಿದೆ. ಆದರೆ ಸ್ಫೋಟಕ ವಸ್ತುಗಳನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ಪರ್ಫ್ಯೂಮ್ ಬಾಟಲಿಯ ಮಾದರಿಯ ಐಇಡಿ ದೊರೆತಿದೆ.
ಇದು ನಮಗೂ ಹೊಸದಾಗಿರುವುದರಿಂದ, ಅದು ಎಷ್ಟು ಹಾನಿಕಾರಕ ಮತ್ತು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ತಜ್ಞರು ಪರೀಕ್ಷೆ ಮಾಡಲಿದ್ದಾರೆ. ನಾವು ಅದನ್ನು ಇಲ್ಲಿಯವರೆಗೆ ಮುಟ್ಟಿಲ್ಲ, ಇದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಿಲ್ಬಾಗ್ ಸಿಂಗ್ ಪ್ರಕರಣವನ್ನು ವಿವರಿಸಿದ್ದಾರೆ.
ಕೋಮು ದ್ವೇಷ ಪ್ರಚೋದಿಸುವ ಉದ್ದೇಶ
ಈ ಐಇಡಿಗಳ ಬ್ಲಾಸ್ಟ್ಗಳ ಪ್ರಮುಖ ಉದ್ದೇಶವೆಂದರೆ ಅಮಾಯಕ ಜನರನ್ನು ಗುರಿಯಾಗಿಸುವುದು ಮತ್ತು ಜಮ್ಮು ಪ್ರದೇಶದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವುದು. ಈ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಆರಿಫ್ ತನ್ನ ಕೆಲಸವನ್ನು ಕಳೆದುಕೊಳ್ಳುವುದರ ಜೊತೆಗೆ, ನಾವು ಅವನ ವಿರುದ್ಧ ಬಲವಾದ ದಾಖಲೆಯನ್ನು ಸಿದ್ಧಪಡಿಸುತ್ತಿದ್ದೇವೆ. ಆತ ಬಹಳ ಬುದ್ಧಿವಂತನಾಗಿದ್ದು, ತನ್ನ ಬಟ್ಟೆ, ಶೂ ಮತ್ತು ಮೊಬೈಲ್ ಫೋನ್ಗಳನ್ನು ಸುಟ್ಟಿಹಾಕಿದ್ದ. ಆದರೆ ಪೊಲೀಸರು ತಮಗೆ ಸಿಕ್ಕಂತಹ ಸಣ್ಣ ಸುಳಿವಿನಿಂದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಡ್ರೋನ್ ಮೂಲಕ ಐಇಡಿ ರವಾನೆ
ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವುದರ ಭಾಗವಾಗಿ ಆರಿಫ್ ಕೆಲಸ ಮಾಡುತ್ತಿದ್ದ. ನರ್ವಾಲ್ ಪ್ರದೇಶದಲ್ಲಿ ಸ್ಫೋಟಕ್ಕೆ ಬಳಸಿದ ಐಇಡಿಗಳನ್ನು ಕಳೆದ ಡಿಸೆಂಬರ್ನಲ್ಲಿ ಡ್ರೋನ್ಗಳ ಮೂಲಕ ಆರಿಫ್ಗೆ ರವಾನಿಸಲಾಗಿತ್ತು. ನರ್ವಾಲ್ ಪ್ರದೇಶದಲ್ಲಿ ಸ್ಫೋಟಗಳ ಮೂಲಕ ಅತಿಹೆಚ್ಚು ಜನರಿಗೆ ಹಾನಿ ಮಾಡುವ ಉದ್ದೇಶವನ್ನು ಈ ಉಗ್ರ ಹೊಂದಿದ್ದ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ