ಶ್ರೀನಗರ (ಆ. 18): ಕಾಶ್ಮೀರದ ಬರಾಮುಲ್ಲಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರ ದಾಳಿಗೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಇಟಿ ಕಮಾಂಡರ್ ಸೇರಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ.
ಸೋಮವಾರ ಉಗ್ರರು ಮತ್ತು ಭಾರತೀಯ ಸೇನಾ ಪಡೆಯ ನಡುವೆ ನಡೆದ ಗುಂಡಿನ ದಾಳಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಸಿಆರ್ಪಿಎಫ್ ಯೋಧರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇಂದು ನಡೆದ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾದ ಕಮಾಂಡರ್ ಸಜ್ಜದ್ ಅಲಿಯಾಸ್ ಹೈದರ್ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಬರಾಮುಲ್ಲಾದಲ್ಲಿ ನಡೆದ ಕಾರ್ಯಾಚರಣೆ ವೇಳೆ ಯೋಧರು, ಪೊಲೀಸು ಗಸ್ತು ತಿರುಗುವಾಗ ಉಗ್ರರು ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಸಿಆರ್ ಪಿಎಫ್ ಯೋಧರು, ಓರ್ವ ಪೊಲೀಸ್ ಸೇರಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ನಂತರ ಭದ್ರತಾ ಸಿಬ್ಬಂದಿ ಎನ್ಕೌಂಟರ್ ಆರಂಭಿಸಿದ್ದು, ಎಲ್ಇಟಿ ಪ್ರಮುಖ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು. ಘಟನೆ ನಡೆಯುತ್ತಿದ್ದಂತೆ ಮತ್ತಷ್ಟು ಉಗ್ರರು ಸ್ಥಳಕ್ಕೆ ಧಾವಿಸಿದ್ದರು. ಇಂದು ಭಾರತೀಯ ಯೋಧರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿಸ್ಕಿ ಬಾಟಲ್ನಲ್ಲಿದ್ದ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ; ಪ್ರಾಣಾಪಾಯದಿಂದ ಮೂವರು ಪಾರು
ಇಂದು ಸಿಆರ್ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಲ್ಇಟಿ ಕಮಾಂಡರ್ ಸಜ್ಜದ್ನನ್ನು ಹತ್ಯೆ ಮಾಡಿರುವುದು ಭಾರತೀಯ ಸೇನೆಯ ಬಹುಮುಖ್ಯ ಸಾಧನೆಯಾಗಿದೆ. ಆತ ಟಾಪ್ 10 ಉಗ್ರರ ಪೈಕಿ ಒಬ್ಬನಾಗಿದ್ದ. 2016ರಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆ ಸೇರಿದ್ದ ಆತ ಅನೇಕ ಯುವಕರನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದ್ದ. ಸಜ್ಜದ್ ಸಾವಿನ ನಂತರ ನಾವು 20 ಯುವಕರನ್ನು ಬಂಧಿಸಿದ್ದೇವೆ. ಅನೇಕ ಪ್ರಕರಣಗಳಲ್ಲಿ ಸಜ್ಜದ್ ಹುಡುಕಾಟ ನಡೆಸಲಾಗುತ್ತಿತ್ತು ಎಂದು ಡಿಜಿಪಿ ದಿಲ್ ಬಾಗ್ ಸಿಂಗ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ