ಹೈದರಾಬಾದ್: ಬಿಆರ್ಎಸ್ (BRS) ಪಕ್ಷದ ಶಾಸಕನ ವಿರುದ್ಧ ಆಕ್ಷೇಪಾರ್ಹ (Derogatory)ಪದ ಬಳಕೆ ಮಾಡಿದ ಆರೋಪದ ಮೇಲೆ ಆಂಧ್ರ ಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಸಹೋದರಿ, ಹಾಗೂ ವೈಎಸ್ಆರ್ಟಿಪಿ (YSRTP) ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾರನ್ನು (YS Sharmila) ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಅವರ ಪಾದಯಾತ್ರೆಯನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಮೆಹಬೂಬ್ಬಾದ್ ಶಾಸಕ ಶಂಕರ್ ನಾಯಕ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಪ್ರಕರಣ ದಾಖಲಾಗಿದ್ದು, ಪೊಲೀಸರು ಶರ್ಮಿಳಾರನ್ನು ವಶಕ್ಕೆ ಪಡೆದು ಹೈದರಾಬಾದ್ಗೆ ಸ್ಥಳಾಂತರಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಪಾದಯಾತ್ರೆ ಭಾಗವಾಗಿ ಭಾಷಣ ಮಾಡುವ ವೇಳೆ ಸ್ಥಳೀಯ ಶಾಸಕನ ಮೇಲೆ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದರೆಂಬ ಆರೋಪ ಕೇಳಿಬರುತ್ತಿದೆ.
ಪಾದಯಾತ್ರೆ ತಡೆದು, ಫ್ಲೆಕ್ಸ್-ಕಟೌಟ್ ಧ್ವಂಸ
ತಮ್ಮ ಶಾಸಕನ ಮೇಲಿನ ಅವಹೇಳನಕಾರಿ ಹೇಳಿಕೆಯನ್ನು ವಿರೋಧಿಸಿ ಬಿಆರ್ಎಸ್ ಕಾರ್ಯಕರ್ತರು ಮಹಬೂಬಾಬಾದ್ ಬೆಟೋಲುವಿನಲ್ಲಿ ಶರ್ಮಿಳಾ ಅವರ ಪಾದಯಾತ್ರೆಯನ್ನು ತಡೆದಿದ್ದಾರೆ. ವೈಎಸ್ಆರ್ಟಿಪಿ ಫ್ಲೆಕ್ಸ್ ಮತ್ತು ಕಟೌಟ್ಗಳನ್ನು ಬಿಆರ್ಎಸ್ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಶರ್ಮಿಳಾ ವಿರುದ್ಧ ಎಸ್ಸಿ ಮತ್ತು ಎಸ್ಟಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಶರ್ಮಿಳಾ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ವಿವಾದಿತ ಹೇಳಿಕೆ ನೀಡಿದ್ದ ಶಂಕರ್
ಮೆಹಬೂಬಾಬಾದ್ನಲ್ಲಿ ವೈಎಸ್ ಶರ್ಮಿಳಾ ಪಾದಯಾತ್ರೆ ಕುರಿತು ಬಿಆರ್ಎಸ್ ಶಾಸಕ ಶಂಕರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಂಗಳಮುಖಿಯಂತಿರುವ ಕೆಲವರು ಇಲ್ಲಿಗೆ ಆಂಧ್ರದಿಂದ ವಲಸೆ ಬರುತ್ತಿದ್ದಾರೆ ಎಂದು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ನಮ್ಮ ಪಕ್ಷದ ಕಾರ್ಯಕರ್ತರಿಗೆ ಸನ್ನೆ ಮಾಡಿದರೆ ನಿಮ್ಮನ್ನೆಲ್ಲಾ ಅಟ್ಟಾಡಿಸಿ ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು.
ಶಂಕರ್ ನಾಯಕ್ ಮೇಲೆ ಶರ್ಮಿಳಾ ವಾಗ್ದಾಳಿ
ಶಂಕರನಾಯಕ್ ಹೇಳಿಕೆಗೆ ಶರ್ಮಿಳಾ ಅದೇ ದಾಟಿಯಲ್ಲಿ ಪ್ರತಿದಾಳಿ ನಡೆಸಿದ್ದರು. ನೆಲ್ಲಿಕುದೂರು ತಾಲೂಕು ಕೇಂದ್ರದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಆಕೆ ಶಂಕರ್ ನಾಯ್ಕ್ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಶಂಕರ್ ನಾಯ್ಕ್ ನಮ್ಮ ಮೇಲೆ ದಾಳಿ ಮಾಡಿಸುತ್ತೀರಾ? ಒಮ್ಮೆ ಸನ್ನೆ ಮಾಡಿ, ಯಾರು ಏನು ಮಾಡುತ್ತಾರೋ ನೋಡುತ್ತೇನೆ, ಈ ವೈಎಸ್ಆರ್ ಮಗಳು ನಿಮ್ಮ ಮಾತಿಗೆಲ್ಲಾ ಹೆದರುವವಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಂಕರ್ ಭೂಗಳ್ಳ ಎಂದಿದ್ದ ಶರ್ಮಿಳಾ
" ಶಂಕರ್ ನಾಯ್ಕ್ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಪಾದಯಾತ್ರೆ ತಡೆಯುವಂತೆ ಕಾರ್ಯಕರ್ತರಿಗೆ ಒತ್ತಡ ಏರಲಾಗುತ್ತಿದೆ. ಜನರ ಪರವಾಗಿ ನಿಂತು ಹೋರಾಟ ಮಾಡಲು ನಾವು ಭಯಪಡಬೇಕಾ..?. ನಿಮ್ಮ ವಂಚನೆಗಳನ್ನು ಬಹಿರಂಗಪಡಿಸುತ್ತಿರುವುದಕ್ಕೆ ಭಯಪಡಬೇಕಾ? ನೀವು ಬಾಯಿ ತೆರೆದರೆ ಬರೀ ಸುಳ್ಳು ಹೇಳುತ್ತೀರಾ. ಶಂಕರ್ ನಾಯ್ಕ್ ಒಬ್ಬ ಭೂಗಳ್ಳ. ಅವನಿಗೆ ಗೊತ್ತಿರುವುದು ಜನರಿಂದ ಜಮೀನು ಕಬಳಿಸುವುದು ಮಾತ್ರ" ಎಂದು ಶರ್ಮಿಳಾ ಎಂದು ಆರೋಪಗಳ ಸುರಿಮಳೆ ಸುರಿಸಿದ್ದರು.
ಈ ಹೇಳಿಕೆಯನ್ನು ಖಂಡಿಸಿದ ಬಿಆರ್ಎಸ್ ಕಾರ್ಯಕರ್ತರು, ಶಂಕರ್ ನಾಯ್ಕ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ವಿರುದ್ಧ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ವೈಎಸ್ಆರ್ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರಿಗೆ ಪಾದಯಾತ್ರೆಗೆ ಮೊದಲು ಅವಕಾಶ ನಿರಾಕರಿಸಲಾಗಿತ್ತು. ಆದರೆ ಎರಡು ತಿಂಗಳ ನಂತರ ಷರತ್ತುಗಳ ಮೇಲೆ ಅವಕಾಶ ನೀಡಲಾಗಿತ್ತು. ಪಾದಯಾತ್ರೆಯನ್ನು ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಮಾತ್ರ ಮಾಡಬೇಕು. ಪಕ್ಷಗಳು, ಜಾತಿಗಳು, ಧರ್ಮಗಳು ಅಥವಾ ವ್ಯಕ್ತಿಗಳ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಬಾರದೆಂದು ಷರತ್ತನ್ನು ವಿಧಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ