ಕೇರಳ: ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಸಾಧಿಸುವ ಮನಸ್ಸು, ಹಠ, ಛಲ ವಿದ್ದರೆ ಯಾರು ಏನು ಬೇಕಾದರೂ ಸಾದಿಸಬಹುದು. ಅದಕ್ಕೆ ಯಾವುದೂ ಕೂಡ ಅಡ್ಡಿಯಾಗುವುದಿಲ್ಲ. ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಅಪಘಾತದಿಂದ ಎಡಗಾಲು ಕಳೆದುಕೊಂಡ ವ್ಯಕ್ತಿಯೊಬ್ಬರು ಸುಮಾರು 300 ಕಿ.ಮೀವರೆಗೂ ವೀಲ್ ಚೇರ್ (Wheel Chair) ಮೂಲಕ ಶಬರಿ ಮಲೆಗೆ (Sabarimala) ಪ್ರಯಾಣಿಸುತ್ತಿದ್ದಾರೆ. ಇದರ ಏಕೈಕ ಕಾರಣವೆಂದರೆ ತಮಗೆ ಮನೆ ಕಟ್ಟಲು ಸಹಾಯ ಮಾಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದ ಶಿಕ್ಷಕಿಯೊಬ್ಬರಿಗಾಗಿ (Teacher). ಹೌದು, ಎಡಗಾಲು ಕಳೆದುಕೊಂಡ ಕಣ್ಣನ್ ಕೇರಳದ (Kerala) ಮಲಪ್ಪುರಂ (Malappuram) ಜಿಲ್ಲೆಯ ಕೊಟ್ಟಕ್ಕಲ್ನಿಂದ (Kottakkal) ಸುಮಾರು 300 ಕಿ.ಮೀ ದೂರದಲ್ಲಿರುವ ಶಬರಿಮಲೆಯ ಅಯ್ಯಪ್ಪ (Ayyappa) ಸ್ವಾಮಿ ದೇವಾಲಯಕ್ಕೆ ವೀಲ್ಚೇರ್ ಮೂಲಕ ತೆರಳುತ್ತಿದ್ದಾರೆ.
ಲಾರಿ ಸಾಮಾಗ್ರಿ ಇಳಿಸುವಾಗ ಅಪಘಾತ
ತಮಿಳುನಾಡಿನ ಮುತ್ತುಪೆಟ್ಟೈ ಮೂಲದ ಕಣ್ಣನ್ ಅವರು ಸುಮಾರು ವರ್ಷಗಳ ಹಿಂದೆ ಉತ್ತರ ಕೇರಳದ ಮಲಪ್ಪುರಂ ತೆರಳಿ ನೆಲೆಸಿದ್ದರು. ನಂತರ ಜೀವನ ನಡೆಸುವುದಕ್ಕಾಗಿ ವಿವಿಧ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಲಾರಿಯಿಂದ ಸಾಮಾಗ್ರಿಗಳನ್ನು ಇಳಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದರು.
ಹೀಗಿದ್ದರೂ, ತಮ್ಮ ಹೆಂಡತಿ ಮತ್ತು ನಾಲ್ಕು ಜನ ಮಕ್ಕಳನ್ನು ಸಾಕಬೇಕಾಗಿತ್ತು. ಹೀಗಾಗಿ ಎಡವಣ್ಣಪ್ಪರ ಪ್ರದೇಶದಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದರು. ಈ ನಡುವೆ ಕಣ್ಣನ್ ಅವರಿಗೆ ಕೊಂಡೊಟ್ಟಿ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಎಂ. ಪಿ. ಸಮೀರಾ ಅವರ ಪರಿಚಯವಾಗಿದೆ.
ಕಣ್ಣನ್ಗಾಗಿ 8 ಲಕ್ಷ ರೂ.ಗೆ ಮನೆ ನಿರ್ಮಿಸಿ ಕೊಟ್ಟಿದ್ದ ಶಿಕ್ಷಕಿ
ನಂತರ ಸಮೀರಾ ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರೊಂದಿಗೆ ಸೇರಿ 8 ಲಕ್ಷ ರೂಪಾಯಿ ಸಂಗ್ರಹಿಸಿ, ತಡಪರಂಬು ಎಂಬಲ್ಲಿ ಕಣ್ಣನ್ ಅವರಿಗೆ ಮನೆ ನಿರ್ಮಿಸಿ ನೀಡಿದರು ಮತ್ತು ಅವರಿಗಾಗಿ ಗಾಲಿಕುರ್ಚಿ (ವೀಲ್ಚೇರ್) ಅನ್ನು ಖರೀದಿಸಿ ನೀಡಿದ್ದರು.
ತಮಗೆ ಇಷ್ಟೇಲ್ಲಾ ಸಹಾಯ ಮಾಡುವ ಮೂಲಕ ಹೃದಯವಂತಿಕೆ ಮರೆದ ಶಿಕ್ಷಕಿ ಸಮೀರ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ಕಣ್ಣನ್ ಅವರು, ವೀಲ್ ಚೇರ್ನಲ್ಲಿಯೇ ಶಬರಿ ಮಲೆಗೆ ತೆರಳುತ್ತಿದ್ದಾರೆ . ಸದ್ಯ ಸಮೀರಾ ಅವರು ಪ್ರಸ್ತುತ ನಿಲಂಬೂರು ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದರ್ಶನ ಬಳಿಕ ಬಸ್ನಲ್ಲಿ ಹಿಂದಿರುಗಲು ಕಣ್ಣನ್ ಪ್ಲಾನ್
ಇತ್ತೀಚೆಗೆ ಕೊಂಡೊಟ್ಟಿಯಿಂದ ಪ್ರಯಾಣ ಆರಂಭಿಸಿದ ಕಣ್ಣನ್ ಅವರು, ಈ ತಿಂಗಳ ಅಂತ್ಯದ ವೇಳೆಯಷ್ಟೋತ್ತಿಗೆ ಸನ್ನಿಧಾನಂ ತಲುಪಲು ಪ್ಲಾನ್ ಮಾಡಿಕೊಂಡಿದ್ದಾರೆ. ದೇವಸ್ಥಾನ ತಲುಪಿ ದೇವರ ದರ್ಶನ ಪಡೆದ ಬಳಿಕ ಬಸ್ಸಿನಲ್ಲಿ ಹಿಂತಿರುಗಬೇಕೆಂದು ಅಂದು ಕೊಂಡಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ, ಯಾವುದೇ ಒಂದು ಕೆಲಸ ಮಾಡಲು ಆಸಕ್ತಿ ಇರಬೇಕು. ಹಾಗೆ ಆಸಕ್ತಿ ಮೂಡಲು ಆ ಕೆಸಲದ ಬಗ್ಗೆ ನಮಗೆ ಪ್ರೀತಿ ಇರಬೇಕು. ಹಾಗೆ ಆ ಕೆಲಸದಲ್ಲಿ ಪ್ರೀತಿ ಇದ್ದಾಗ ಸಹಜವಾಗಿಯೇ ಆ ಕೆಲಸ ಯಶಸ್ವಿಯಾಗುತ್ತದೆ. ಕೈಯಲ್ಲಿ ಆಗುವುದಿಲ್ಲ ಎಂದು ಸುಮ್ಮನೆ ಕುಳಿತುಕೊಂಡರೇ, ಯಾವುದೇ ಕೆಲಸ ಸಾಗುವುದಿಲ್ಲ.
ಇದನ್ನೂ ಓದಿ: Sabarimala: ಕಂದಕಕ್ಕೆ ಉರುಳಿದ ವಾಹನ, ಶಬರಿಮಲೆಗೆ ತೆರಳುತ್ತಿದ್ದ 8 ಭಕ್ತರು ಸಾವು, ಇಬ್ಬರಿಗೆ ಗಾಯ!
ಹಾಗೆಯೇ ಜೀವನದಲ್ಲಿ ತಮಗಾಗಿ ಒಳಿತನ್ನು ಮಾಡಿದವರಿಗೆ, ಒಳ್ಳೆಯದಾಗಲಿ ಎಂದು ಬಯಸುವುದರಲ್ಲಿ ತಪ್ಪಿಲ್ಲ. ಕಾಲಿಲ್ಲದ ವ್ಯಕ್ತಿಗೆ ಮನೆ ಕಟ್ಟಿಸಿಕೊಡುವ ಮೂಲಕ ಶಿಕ್ಷಕಿ ಹೃದಯವಂತಿಕೆ ಮೆರೆದರೆ, ತನಗಾಗಿ ಸಹಾಯ ಮಾಡಿದ ಶಿಕ್ಷಕಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಕೃತಜ್ಞತೆ ಹೇಳಲು ಹೊರಟಿರುವ ಈ ವ್ಯಕ್ತಿಗೆ ನಿಜಕ್ಕೂ ಹ್ಯಾಟ್ಸಾಫ್ ಎಂದೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ