• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಅಫ್ಘಾನ್​ನಲ್ಲಿರುವ ಹಿಂದೂ-ಸಿಖ್ಖರಿಗೆ ತಾಲಿಬಾನ್​ಗಳಿಂದ ಆತಂಕ ಇಲ್ಲ; ಗುರುದ್ವಾರದ ಮುಖ್ಯಸ್ಥರಿಂದ ಭರವಸೆ

ಅಫ್ಘಾನ್​ನಲ್ಲಿರುವ ಹಿಂದೂ-ಸಿಖ್ಖರಿಗೆ ತಾಲಿಬಾನ್​ಗಳಿಂದ ಆತಂಕ ಇಲ್ಲ; ಗುರುದ್ವಾರದ ಮುಖ್ಯಸ್ಥರಿಂದ ಭರವಸೆ

ಕಾಬೂಲ್​ನಲ್ಲಿರುವ ಗುರುದ್ವಾರ.

ಕಾಬೂಲ್​ನಲ್ಲಿರುವ ಗುರುದ್ವಾರ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ಖರು ಮತ್ತು ಹಿಂದೂಗಳಿಗೆ ತಾಲಿಬಾನಿಗಳಿಂದ ಯಾವುದೇ ಭಯ ಅಥವಾ ಆತಂಕ ಇಲ್ಲ ಎಂದು ಕಾಬೂಲ್ ಗುರುದ್ವಾರದ ಮುಖ್ಯಸ್ಥ ಭರವಸೆ ನೀಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

  • Share this:

ಕಾಬೂಲ್ (ಆಗಸ್ಟ್​ 19); ಕಳೆದ ಒಂದು ವಾರದಲ್ಲಿ ಆಫ್ಘಾನಿಸ್ತಾನದಲ್ಲಿ ಎಲ್ಲವೂ ಬದಲಾಗಿದೆ. ಜನರಿಂದ ಚುನಾಯಿತಗೊಂಡ ಸರ್ಕಾರ ಉರುಳಿದೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸುತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್​ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ತಾಲಿಬಾನಿಗಳಿಗೆ ಹೆದರಿರುವ ಆಫ್ಘನ್​ ಜನ ದೇಶದಿಂದ ಪಲಾಯನ ಮಾಡಲು ಮುಂದಾಗಿದ್ದಾರೆ. ಈ ನಡುವೆ 200ಕ್ಕೂ ಹೆಚ್ಚು ಸಿಖ್ಖರು ಮತ್ತು ಹಲವು ಹಿಂದೂಗಳು ಕಾಬೂಲ್​ನಲ್ಲಿ ಸಿಲುಕಿದ್ದರು. ಅವರ ಪ್ರಾಣವನ್ನು ರಕ್ಷಿಸಿ ದೇಶಕ್ಕೆ ಮರಳಿ ಕರೆತರಬೇಕು ಎಂದು ಇತ್ತೀಚೆಗೆ ಪಂಜಾಬ್ ಸಿಎಂ ಅಮರೀಂದರ್​​ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಬಳಿ ಕೇಳಿಕೊಂಡಿದ್ದರು. ಆದರೆ, ಇದೀಗ ಕಾಬೂಲ್​ನಲ್ಲಿರುವ ಸಿಖ್ಖರ ಜೀವಕ್ಕೆ ಅಪಾಯ ಇಲ್ಲ ಎಂದು ಸ್ವತಃ ತಾಲಿಬಾನಿಗಳೇ ಸ್ಪಷ್ಟಪಡಿಸಿದ್ದಾರೆ.



ಕಾಬೂಲ್​ನಲ್ಲಿರುವ ಗುರುದ್ವಾರದ ಮುಖ್ಯಸ್ಥರು ಇಂದು ಸ್ವತಃ ಮಾತನಾಡಿರುವ ವಿಡಿಯೋ ಒಂದು ಟ್ವಿಟರ್​ನಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಆತ, "ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ಖರು ಮತ್ತು ಹಿಂದೂಗಳಿಗೆ ತಾಲಿಬಾನಿಗಳಿಂದ ಯಾವುದೇ ಭಯ ಅಥವಾ ಆತಂಕ ಇಲ್ಲ" ಎಂದು ಭರವಸೆ ನೀಡಿರುವ ವಿಡಿಯೋವನ್ನು ಅಕಾಲಿದಳ ಮತ್ತು ತಾಲಿಬಾನ್ ವಕ್ತಾರರು ಬುಧವಾರ ತಡರಾತ್ರಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಿಖ್ಖರಲ್ಲಿ ಮೂಡಿದ್ದ ಆತಂಕ ಇದೀಗ ದೂರವಾಗಿದೆ.


ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಅಕಾಲಿದಳದ ಮಂಜಿಂದರ್ ಸಿಂಗ್ ಸಿರ್ಸಾ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಕಾಬೂಲ್ ಗುರುದ್ವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾಲಿಬಾನ್ ನಾಯಕರು “ಹಿಂದುಗಳು ಮತ್ತು ಸಿಖ್ಖರನ್ನು ಭೇಟಿಯಾಗಿದ್ದಾರೆ. ಅವರ ಸುರಕ್ಷತೆಯ ಭರವಸೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.



76 ಸೆಕೆಂಡುಗಳ ಈ ವಿಡಿಯೊದಲ್ಲಿ ಹಲವಾರು ತಾಲಿಬಾನ್ ಸದಸ್ಯರು ಎಂದು ನಂಬಲಾಗಿರುವ ವ್ಯಕ್ತಿಗಳು ಗುರುದ್ವಾರಕ್ಕೆ ಭೇಟಿ ನೀಡಿ ಒಳಗೆ ಆಶ್ರಯ ಪಡೆದಿರುವ ಸಿಖ್ಖರ ಜೊತೆಗೆ ಮಾತನಾಡುತ್ತಿದ್ದಾರೆ. ವಿಡಿಯೊದಲ್ಲಿ ಗುರುದ್ವಾರ ಸಮಿತಿಯ ಅಧ್ಯಕ್ಷರ (ಪಾಷ್ಟೋ ಭಾಷೆಯಲ್ಲಿ) ಹೇಳಿಕೆಯೂ ಇದೆ.


ಇದನ್ನೂ ಓದಿ: ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿದ ತಾಲಿಬಾನ್​; ಅರಬ್​ ರಾಷ್ಟ್ರದಲ್ಲಿ ಅಡಗಿಕೊಂಡಿರುವ ಅಧ್ಯಕ್ಷ ಘನಿ


ಅಲ್ ಜಜೀರಾ ಸುದ್ದಿ ವರದಿಯ ಭಾಗವಾಗಿರುವಂತೆ ಕಾಣುವ ಈ ವಿಡಿಯೊವನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ರಾಜಕೀಯ ಕಚೇರಿಯ ವಕ್ತಾರ ಎಂ.ನಯೀಮ್ ಕೂಡ ಟ್ವೀಟ್ ಮಾಡಿದ್ದಾರೆ.


ಕಾಬೂಲ್‌ನಲ್ಲಿ ಸಿಖ್ಖರು ಮತ್ತು ಭಾರತೀಯರ ಜೀವನ: ಅವರ ದೇವಾಲಯಗಳ ಮುಖ್ಯಸ್ಥರು ಹೇಳುತ್ತಾರೆ ನಾವು ಸುರಕ್ಷಿತವಾಗಿದ್ದೇವೆ. ನಾವು ಯಾವುದೇ ಭಯ ಅಥವಾ ಆತಂಕವನ್ನು ಅನುಭವಿಸುತ್ತಿಲ್ಲ. ಮೊದಲು ಇಲ್ಲಿನ ಜನರು ಅವರ ಜೀವನ ಮತ್ತು ಹಣದ ಬಗ್ಗೆ ಭಯ ಮತ್ತು ಆತಂಕದಲ್ಲಿದ್ದರು. ಈಗ ಯಾವುದೇ ಸಮಸ್ಯೆಗಳಿಲ್ಲ. ನಮಗೆ ಭರವಸೆ ಇದೆ” ಎಂದು ಗುರುದ್ವಾರದ ಮುಖ್ಯಸ್ಥರು ಹೇಳಿದ್ದಾರೆ ಎಂದು ಎಂ.ನಯೀಮ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Afghan Crisis- ಆಫ್ಘಾನಿಸ್ತಾನ-ಭಾರತ ಮಧ್ಯೆ ಆಮದು ರಫ್ತು ಸ್ಥಗಿತ


ಈ ಹಿಂದೆ, ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ 200 ಸಿಖ್ಖರನ್ನು ಒಳಗೊಂಡಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಸ್ಥಳಾಂತರ ಕಾರ್ಯದಲ್ಲಿ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದರು.


20 ವರ್ಷಗಳ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದೆ. ಮೇ ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡಾಗಿನಿಂದ ಆರಂಭವಾದ ಮಾನವೀಯ ಬಿಕ್ಕಟ್ಟು, ಅಲ್ಲಿನ ಜನರಲ್ಲಿ ಭಯ ಮತ್ತು ಆತಂಕವನ್ನು ಹೆಚ್ಚಿಸಿದೆ.

top videos
    First published: