Taj Mahal: 2 ತಿಂಗಳ ನಂತರ ತಾಜ್ ಮಹಲ್ ದರ್ಶನ; ಆನ್​​ಲೈನ್​​ನಲ್ಲೇ ಟಿಕೆಟ್ ಪಡೆಯಬೇಕು..!

ತಾಜ್​ ಮಹಲ್

ತಾಜ್​ ಮಹಲ್

ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಎಲ್ಲಾ ಕೇಂದ್ರೀಕೃತ ಸ್ಮಾರಕಗಳು, ತಾಣಗಳು ಹಾಗೂ ವಸ್ತು ಸಂಗ್ರಹಾಲಯಗನ್ನು ಜೂನ್​ 16ರಿಂದ ತೆರೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಆದೇಶದಲ್ಲಿ ತಿಳಿಸಿದ್ದಾರೆ.

  • Share this:

    ನವದೆಹಲಿ(ಜೂ.15): ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಬಹುತೇಕ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಸದ್ಯ ಕೋವಿಡ್​ ಹರಡುವಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆ, ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆಗ್ರಾದಲ್ಲಿರುವ ಪ್ರೇಮ ಸ್ಮಾರಕ ತಾಜ್​ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಬುಧವಾರದಿಂದ(ಜೂ.16) ಮತ್ತೆ ತೆರೆಯಲಾಗುತ್ತಿದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಸುಮಾರು 2 ತಿಂಗಳ ಬಳಿಕ ಪ್ರವಾಸಿಗರಿಗೆ ತಾಜ್​ಮಹಲ್​ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.


    ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ತಾಜ್​ಮಹಲ್​ನ್ನು ಕೊರೋನಾ ಕಾರಣದಿಂದಾಗಿ ಎರಡನೇ ಬಾರಿಗೆ ಏಪ್ರಿಲ್​ 4ರಿಂದ ಮುಚ್ಚಲಾಗಿತ್ತು. ಕಳೆದ ವರ್ಷ ಕೂಡ ಕೋವಿಡ್​ ಹೆಚ್ಚಾಗಿದ್ದರಿಂದ ತಾಜ್​ಮಹಲ್​​ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.


    ತಾಜ್​ಮಹಲ್​ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಸ್ಮಾರಕದ ಯಾವುದೇ ಭಾಗವನ್ನು ಮುಟ್ಟಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ. ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್​​ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಭಾರತೀಯ ಪುರಾತತ್ವ ಸಮೀಕ್ಷೆ ಹೇಳಿದೆ.


    ಇದನ್ನೂ ಓದಿ:ಲಾಕ್​​ಡೌನ್​ನಿಂದ ಕೊಳೆಯುತ್ತಿವೆ ರುಚಿಕರ ಮಾವು: ಫೇಮಸ್ ಹುಲಕೋಟಿ ಮಾವನ್ನು ಕೇಳೋರಿಲ್ಲ!


    ಸಂದರ್ಶಕರು ಆನ್​ಲೈನ್​​ನಲ್ಲಿ ಪ್ರವೇಶ ಟಿಕೆಟ್​​ಗಳನ್ನು ಕಾಯ್ದಿರಿಸಬೇಕು, ಯಾವುದೇ ಆಫ್​ಲೈನ್​ ಬುಕ್ಕಿಂಗ್​ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.


    ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಎಲ್ಲಾ ಕೇಂದ್ರೀಕೃತ ಸ್ಮಾರಕಗಳು, ತಾಣಗಳು ಹಾಗೂ ವಸ್ತು ಸಂಗ್ರಹಾಲಯಗನ್ನು ಜೂನ್​ 16ರಿಂದ ತೆರೆಯಬೇಕೆಂದು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಆದೇಶದಲ್ಲಿ ತಿಳಿಸಿದ್ದಾರೆ.



    ತಾಜ್​​ಮಹಲ್​​ಗೆ ಭೇಟಿ ನೀಡುವ ಪ್ರವಾಸಿಗರು ಸ್ಪಂಜಿನಂತಹ ಕಾರ್ಪೆಟ್​ ಮೇಲೆ ನಡೆಯಬೇಕು. ಅಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗಿದ್ದು, ಅವರ ಶೂ, ಚಪ್ಪಲಿಗಳು ಸ್ಯಾನಿಟೈಜ್ ಆಗುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


    ಮೊಘಲ್ ದೊರೆ ಶಹಜಾನ ಪ್ರೀತಿಯ ಸಂಕೇತವಾಗಿ ತನ್ನ ಮಡದಿಗಾಗಿ ಕಟ್ಟಿಸಿದ ಪ್ರೇಮ ಸ್ಮಾರಕ ತಾಜ್​ಮಹಲ್. ಕಳೆದ ವರ್ಷ ಕೊರೋನಾ ಮಹಾಮಾರಿ ಮೊದಲ ಬಾರಿಗೆ ಭಾರತಕ್ಕೆ ಅಪ್ಪಳಿಸಿದಾಗ, ತಾಜ್​ಮಹಲ್​ನ್ನು ಮುಚ್ಚಲಾಗಿತ್ತು. ಕ್ರಮೇಣ, ಕೊರೋನಾ ಪ್ರಕರಣಗಳು ಇಳಿಕೆಯಾದ ಬಳಿಕ ಸೆಪ್ಟೆಂಬರ್​​ನಲ್ಲಿ ಮತ್ತೆ ತೆರೆದು ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು.


    ಇದನ್ನೂ ಓದಿ:ಕೊಡಗು: ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವವರಿಗೆ ವ್ಯಾಕ್ಸಿನ್ ವಿತರಣೆ


    ತಾಜ್​​ಮಹಲ್​ನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದ್ದು, ವಿಶ್ವದ 7 ಅದ್ಭುತಗಳಲ್ಲಿ ಇದೂ ಸಹ ಒಂದಾಗಿದೆ. ಈ ಸ್ಮಾರಕವನ್ನು ನಿರ್ಮಿಸಲು ಸುಮಾರು 20 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಅಂತಿಮವಾಗಿ 1653ರಲ್ಲಿ ಮುಕ್ತಾಯಗೊಂಡು, ಅಲ್ಲಿಂದ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವಾಯಿತು.


    ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಪ್ರೇಕ್ಷಣೀಯ ಸ್ಥಳಗಳಾದ ಕೆಂಪುಕೋಟೆ, ತಾಜ್​ಮಹಲ್, ಅಜಂತಾ ಗುಹೆ ಸೇರಿದಂತೆ ಎಲ್ಲಾ ಕೇಂದ್ರೀಕೃತ ಸ್ಮಾರಕಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಏಪ್ರಿಲ್​ 15ರಿಂದ ಮುಚ್ಚಲು ಸರ್ಕಾರ ಆದೇಶಿಸಿತ್ತು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹರಡದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Latha CG
    First published: