ನವದೆಹಲಿ: ದಂಪತಿಗಳಿಬ್ಬರು (Couples) ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ (Divorce) ಮುಂದಾದರೆ ಅಂತಹ ಪ್ರಕರಣಗಳಿಗೆ ಆರು ತಿಂಗಳು ಕಾಯುವ ಅಗತ್ಯವಿಲ್ಲ. ಮುರಿದುಬಿದ್ದ ಮದುವೆ ಪ್ರಕರಣಗಳಲ್ಲಿ ತನ್ನ ವಿಶೇಷಾಧಿಕಾರ ಬಳಸಿಕೊಂಡು 6 ತಿಂಗಳ ಕಡ್ಡಾಯ ಕಾಯುವಿಕೆಯನ್ನು ರದ್ದು ಗೊಳಿಸಿ ಡಿವೋರ್ಸ್ ನೀಡಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ. ವಿಚ್ಛೇದನ ಪ್ರಕರಣಗಳಲ್ಲಿ ಆರು ತಿಂಗಳ ಕಡ್ಡಾಯ ಕಾಯುವಿಕೆಯನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರಿದ್ದ ಸುಪ್ರೀಂ ಕೋರ್ಟ್ ಪೀಠ ಈ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆಯ 13ನೇ ಬಿ ಸೆಕ್ಷನ್ ಪ್ರಕಾರ, ಪರಸ್ಪರ ಒಪ್ಪಿಗೆಯ ಮೂಲಕ ದಂಪತಿಗಳಿಬ್ಬರು ವಿಚ್ಛೇದನಕ್ಕೆ ಮುಂದಾದಾಗಲೂ ಆರು ತಿಂಗಳ ಕಡ್ಡಾಯ ಕಾಯುವಿಕೆ (ಕೂಲಿಂಗ್ ಆಫ್ ಪಿರಿಯಡ್) ಅವಧಿಯನ್ನು ಪೂರೈಸಬೇಕು. ಹೀಗಾಗಿ ಸಂವಿಧಾನದ 142 (1)ನೇ ವಿಧಿ ನೀಡಿರುವ ವೀಶೇಷಾಧಿಕಾರವನ್ನು ಬಳಸಿಕೊಂಡು ಈ 6 ತಿಂಗಳ ಕಡ್ಡಾಯ ಕಾಯುವಿಕೆಯನ್ನು ರದ್ದುಗೊಳಿಸುವ ಸಾಧ್ಯತೆ ಇದೆಯೇ ಎಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: 14 Mobile Apps Ban: ಮೊಬೈಲ್ ಪ್ರಿಯರಿಗೆ ಬ್ಯಾಡ್ ನ್ಯೂಸ್; ಮತ್ತೆ 14 ಮೊಬೈಲ್ ಆ್ಯಪ್ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ!
ಸುಪ್ರೀಂ ಹೇಳಿದ್ದೇನು?
ಈ ಬಗ್ಗೆ ವಿವರಣೆ ನೀಡಿರುವ ಸುಪ್ರೀಂ ಕೋರ್ಟ್, ವಿಚ್ಛೇದನಕ್ಕೆ ಕಡ್ಡಾಯ ಕಾಯುವಿಕೆಗೆ ಆದೇಶಿಸುವ ಮುನ್ನ ಆ ದಂಪತಿ ಪ್ರತ್ಯೇಕವಾಗಿ ಒಂದೂವರೆ ವರ್ಷ ಕಳೆದಿರಬೇಕು ಎಂದು ಕಾಯ್ದೆ ಹೇಳುತ್ತದೆ. ಆ ಒಂದೂವರೆ ವರ್ಷದಲ್ಲಿ ದಂಪತಿಯು ತಮ್ಮೊಳಗೆ ಭಿನ್ನಾಭಿಪ್ರಾಯ, ಸಮಸ್ಯೆ, ಅಸಮಾಧಾನಗಳನ್ನು ಬಗೆಹರಿಸಿಕೊಂಡು ಪುನಃ ಒಟ್ಟಾಗಿ ಜೀವಿಸಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗೆ ಒಂದೂವರೆ ವರ್ಷ ಜೊತೆಗೆ ವಾಸಿಸುತ್ತಿದ್ದರೂ ಅವರು ವಿಚ್ಛೇದನಕ್ಕೆ ಮುಂದಾದರೆ ಅವರು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಅರ್ಥ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚ್ಛೇದನ ಪ್ರಕರಣಗಳಲ್ಲಿ ದಂಪತಿಗಳ ಮಧ್ಯೆ ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವ ಕಾರಣ ನೀಡಿ ಡಿವೋರ್ಸ್ ಪಡೆಯಬೇಕೆಂಬುದು ಹಕ್ಕಲ್ಲ. ವಿಚ್ಛೇದನಕ್ಕೆ ಕಡ್ಡಾಯ ಕಾಯುವಿಕೆಯನ್ನು ರದ್ದುಪಡಿಸುವುದು ಅಷ್ಟೇ ಅಲ್ಲ, ಆ ವೇಳೆ ದಂಪತಿ ಪರಸ್ಪರ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತನ್ನ ವಿಶೇಷಾಧಿಕಾರ ಬಳಸಿಕೊಂಡು ಸುಪ್ರೀಂ ಕೋರ್ಟ್ ರದ್ದು ಮಾಡಬಹುದು. ಆದರೆ ಆದರೆ ಇಬ್ಬರಿಗೂ ನ್ಯಾಯ ಸಿಗಬೇಕು ಎಂಬ ಪರಿಕಲ್ಪನೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ವಿಶೇಷಾಧಿಕಾರವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Viral Video: ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ಹುಲಿರಾಯ! ಪ್ರಾಣಿಗಳ ಹೊಂದಾಣಿಕೆಯ ಅದ್ಭುತ ವಿಡಿಯೋ ವೈರಲ್
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಸಂವಿಧಾನದ 142ನೇ (Article 142) ವಿಧಿಯನ್ನು ಬಳಸಿಕೊಂಡು ಈ ತೀರ್ಪು ನೀಡಿದೆ.
2014ರಲ್ಲಿ ಶಿಲ್ಪಾ ಶೈಲೇಶ್ ಎಂಬುವವರು ಸಲ್ಲಿಸಿದ್ದ ಪ್ರಮುಖ ಅರ್ಜಿ ಸೇರಿದಂತೆ ಒಟ್ಟು ಐದು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ, ಇದರ ತೀರ್ಪನ್ನು 2022ರ ಸೆಪ್ಟೆಂಬರ್ 29ರಂದು ಕಾಯ್ದಿರಿಸಿತ್ತು. ಈ ವೇಳೆ ಸಾಂವಿಧಾನಿಕ ಪೀಠವು, ‘ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸುವಾಗ, ಸಾಮಾಜಿಕ ಬದಲಾವಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಕಾನೂನು ತರುವುದು ಸುಲಭ, ಆದರೆ ಅದರೊಂದಿಗೆ ಸಮಾಜವನ್ನು ಬದಲಾಯಿಸಲು ಮನವೊಲಿಸುವುದು ಕಷ್ಟ’ ಎಂದು ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ