ಭಾರತದ ಬಂಧಿತ 54 ಮೀನುಗಾರರ ಪೈಕಿ 40 ಜನರನ್ನು ಬಿಡುಗಡೆ ಮಾಡಿದ ಶ್ರೀಲಂಕಾ ಸರ್ಕಾರ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ನೌಕಾಪಡೆಯು 14 ಮೀನುಗಾರರನ್ನೊಳಗೊಂಡು ಭಾರತೀಯ ಮೀನುಗಾರಿಕೆಯ ದೊಡ್ಡ ಹಡಗನ್ನು ಜಾಫ್ನಾದ ಕೋವಿಲಾನ್ ಕರಾವಳಿಯ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಬಂಧಿಸಿತ್ತು.

  • Share this:

    ಕೊಲಂಬೋ: ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೆ ಒಳಗಾಗಿದ್ದ ಭಾರತದ 54 ಮೀನುಗಾರರ ಪೈಕಿ 40 ಜನರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ತಮಿಳುನಾಡು ಮೀನುಗಾರಿಕೆ‌ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಲಂಕಾ ನೌಕಾಪಡೆಯು ವಶಕ್ಕೆ ಪಡೆದಿದ್ದ ಐದು ದೋಣಿಗಳಲ್ಲಿ ನಾಲ್ಕು ದೋಣಿಗಳನ್ನು ಮರಳಿಸಲಾಗಿದೆ. ಪುದುಚೇರಿಯ ಕಾರೈಕಲ್ ಮೂಲದ 14 ಮೀನುಗಾರರು ಶ್ರೀಲಂಕಾ ವಶದಲ್ಲಿಯೇ ಇದ್ದು, ತಡವಾಗಿ ಅವರ ಬಿಡುಗಡೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಶ್ರೀಲಂಕಾ ನೌಕಾಪಡೆಯು ದೇಶದ ಸರಹದ್ದಿನ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಐದು ಮೀನುಗಾರಿಕಾ ಬೋಟ್‌ ಮತ್ತು ಕನಿಷ್ಠ 54 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ಗುರುವಾರ ತಿಳಿಸಿತ್ತು.


    ನೌಕಾಪಡೆಯು 14 ಮೀನುಗಾರರನ್ನೊಳಗೊಂಡು ಭಾರತೀಯ ಮೀನುಗಾರಿಕೆಯ ದೊಡ್ಡ ಹಡಗನ್ನು ಜಾಫ್ನಾದ ಕೋವಿಲಾನ್ ಕರಾವಳಿಯ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಬಂಧಿಸಿತ್ತು.


    ಆಗಾಗ್ಗೆ ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸುತ್ತಿರುವ ಕುರಿತು ಮೀನುಗಾರರ ಒಕ್ಕೂಟದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಶೀಘ್ರ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


    ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾನುವಾರದಿಂದ ರಾತ್ರಿ ಕರ್ಫ್ಯೂ ಜಾರಿ; ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ಚಟುವಟಿಕೆಗಳು ಸ್ಥಗಿತ


    ಮೀನುಗಾರರು ಆದಷ್ಟು ಬೇಗನೇ ಬಿಡುಗಡೆಯಾಗದಿದ್ದರೆ, ಮೀನುಗಾರಿಕೆ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಏಪ್ರಿಲ್‌ 6ರ ತಮಿಳುನಾಡು ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.


    ಜನವರಿಯಲ್ಲಿ ದೇಶದ ಸಮುದ್ರದ ಸರಹದ್ದಿನಲ್ಲಿ ಮೀನುಗಾರಿಕೆ ಮಾಡಿದ್ದಕ್ಕಾಗಿ ಒಂದು ಯಾಂತ್ರಿಕೃತ ದೋಣಿ ಸಹಿತ ಒಂಬತ್ತು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.

    Published by:MAshok Kumar
    First published: