ದೆಹಲಿ(ಜು. 27): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (National Herald Money Laundering Case) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಅವರನ್ನು ನಿನ್ನೆ (ಜುಲೈ 26ರಂದು) 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮತ್ತೆ ಇಂದು ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಜುಲೈ 21ರಂದು ಕೂಡ 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಸೋನಿಯಾ ಗಾಂಧಿ ಅವರು ಇಡಿ ಕಚೇರಿಗೆ ತೆರಳಲಿದ್ದು ವಿಚಾರಣೆ ಎದುರಿಸಲಿದ್ದಾರೆ. ಆದರೆ ಇಂದಾದರೂ ಅವರ ವಿಚಾರಣೆ ಕೊನೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
75 ವರ್ಷದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು "ಕೋವಿಡ್ ಮತ್ತು ಶ್ವಾಸಕೋಶದ ಸೋಂಕಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಕಟ್ಟುನಿಟ್ಟಾಗಿ ಸಲಹೆ ನೀಡಿದ್ದರು. ಜೂನ್ 2 ರಂದು ಸೋನಿಯಾ ಗಾಂಧಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಜೂನ್ 8 ರಂದು ಇಡಿ ಮುಂದೆ ಹಾಜರಾಗಬೇಕಿದ್ದ ಅವರು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದ್ದರು.
ಜುಲೈ 21ರಂದು ವಿಚಾರಣೆಗೆ ಹೋಗುವಾಗಲು ಅನಾರೋಗ್ಯದ ಕಾರಣಕ್ಕಾಗಿ ಮಗಳು ಪ್ರಿಯಾಂಕಾ ಗಾಂಧಿಯನ್ನು ಜೊತೆಯಲ್ಲಿ ಕರೆತರುವುದಾಗಿ ತಿಳಿಸಿದ್ದರು. ಇಡಿ ಅಧಿಕಾರಿಗಳು ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ವೇಳೆ ಪ್ರಿಯಾಂಕಾ ಗಾಂಧಿ ಕೂಡ ಉಪಸ್ಥಿತರಿದ್ದರು. ನಿನ್ನೆ ಕೂಡ ಪ್ರಿಯಾಂಕಾ ಗಾಂಧಿ ತಾಯಿಯ ಜೊತೆ ಇಡಿ ಕಚೇರಿಗೆ ತೆರಳಿದ್ದರು. ಇವತ್ತು ಮತ್ತೆ ಸೋನಿಯಾ ಗಾಂಧಿ ಅವರಿಗೆ ಪುತ್ರಿ ಪ್ರಿಯಾಂಕಾ ಜೊತೆಯಾಗಲಿದ್ದಾರೆ.
ರಾಹುಲ್ ಗಾಂಧಿ ಬಂಧನ ಸಾಧ್ಯತೆ
ಇದೇ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರ ಪುತ್ರ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕಳೆದ ತಿಂಗಳು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ರಾಹುಲ್ ಗಾಂಧಿ ಅವರು ಒಟ್ಟು 54 ಗಂಟೆ ವಿಚಾರಣೆ ಎದುರಿಸಿದ್ದಾರೆ. ರಾಹುಲ್ ಗಾಂಧಿ ಅವರು ಜುಲೈ 21ರಂದು ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಇಡಿ ಕಚೇರಿಗೆ ಕರೆದೊಯ್ದ ಬಿಟ್ಟು ಬಂದಿದ್ದರು.
ನಿನ್ನೆಯೂ ತಾಯಿಯ ಜೊತೆ ಇಡಿ ಕಚೇರಿವರೆಗೂ ಹೋಗಿ ಬಿಟ್ಟುಬಂದಿದ್ದರು. ನಂತರ ಸಂಸತ್ ಭವನದ ಬಳಿ ಇರುವ ವಿಜಯ್ ಚೌಕದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಇಂದು ಕೂಡ ರಾಹುಲ್ ಗಾಂಧಿ ಅವರು ತಾಯಿಯನ್ನು ಇಡಿ ಕಚೇರಿಗೆ ಡ್ರಾಪ್ ಮಾಡಿದ ಮೇಲೆ ಪ್ರತಿಭಟನೆ ಮಾಡಲಿದ್ದಾರೆ. ಆಗ ಮತ್ತೊಮ್ಮೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಕಳೆದ ವಾರ 3 ಗಂಟೆ ವಿಚಾರಣೆ
ಸೋನಿಯಾ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ಜುಲೈ 21ರಂದು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ನಿನ್ನೆ ಸುಧೀರ್ಘ 6 ಗಂಟೆಗಳ ಕಾಲ ಅಸೋಸಿಯೇಟ್ ಜನರಲ್ಸ್ ಮತ್ತು ಯಂಗ್ ಇಂಡಿಯಾ ನಡುವಿನ ವ್ಯವಹಾರಗಳ ಬಗ್ಗೆ ಇಡಿ ಪ್ರಶ್ನೆ ಮಾಡಿದ್ದಾರೆ. ಇಂದು ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರನ್ನೂ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಇದನ್ನೂ ಓದಿ: Unmarried Woman: ಅವಿವಾಹಿತ ಮಹಿಳೆಯ ಮಕ್ಕಳಿಗೆ ತಂದೆ ಹೆಸರು ಅಗತ್ಯವಿಲ್ಲ! ಕರ್ಣನ ಪಾತ್ರ ಪ್ರಸ್ತಾಪಿಸಿ ಕೋರ್ಟ್ ತೀರ್ಪು
ಮುಂದುವರೆಯಲಿರುವ ಕಾಂಗ್ರೆಸ್ ಪ್ರತಿಭಟನೆ
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರ ವಿರುದ್ಧ ಇಂದು ಕೂಡ ದೇಶಾದ್ಯಂತ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ದೆಹಲಿಯಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
2016 ರಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್ ಪ್ರವರ್ತಿತ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಸೋನಿಯಾ ಗಾಂಧಿ ಮತ್ತು ಅವರ ಮಗ ಯಂಗ್ ಇಂಡಿಯನ್ನ ಪ್ರವರ್ತಕರು ಮತ್ತು ಬಹುಪಾಲು ಷೇರುದಾರರಲ್ಲಿ ಸೇರಿದ್ದಾರೆ ಮತ್ತು ಪ್ರತಿಯೊಬ್ಬರೂ ಕಂಪನಿಯಲ್ಲಿ 38 ಪ್ರತಿಶತ ಪಾಲನ್ನು ಹೊಂದಿದ್ದಾರೆ.
ಇದನ್ನೂ ಓದಿ: National Herald Case: ಇಂದು ಮತ್ತೊಮ್ಮೆ ಸೋನಿಯಾ ಗಾಂಧಿಗೆ ಇಡಿ ವಿಚಾರಣೆ!
ಸುಬ್ರಮಣಿಯನ್ ಸ್ವಾಮಿ ನೀಡಿದ್ದ ದೂರು
2013 ರಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನ ಆಧಾರದ ಮೇಲೆ ದೆಹಲಿಯ ವಿಚಾರಣಾ ನ್ಯಾಯಾಲಯವು ಯಂಗ್ ಇಂಡಿಯನ್ ವಿರುದ್ಧ ಆದಾಯ ತೆರಿಗೆ ಇಲಾಖೆಯ ತನಿಖೆಯನ್ನು ಗಮನಕ್ಕೆ ತೆಗೆದುಕೊಂಡ ನಂತರ ಇಡಿ ಪಿಎಂಎಲ್ಎಯ ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿರುವುದರಿಂದ ಗಾಂಧಿ ಕುಟುಂಬವನ್ನು ತನಿಖೆ ಮಾಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ