ಹೈದರಾಬಾದ್: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Media) ತುಂಬಾ ಅಗಾಧವಾಗಿ ಬೆಳೆದಿದೆ. ಇದರ ಮೂಲಕ ಅಪರಿಚಿತರೂ ಸ್ನೇಹಿತರಾಗುತ್ತಾರೆ. ಇದು ಕೇವಲ ಸಮಯ ಕಳೆಯಲು, ಹರಟೆ ಹೊಡೆಯಲು ಮಾತ್ರವಲ್ಲ, ಬೇರೆಯಾದವರನ್ನು ಮತ್ತು ಕಾಣೆಯಾದವರನ್ನು ಮತ್ತೆ ಒಂದೆಡೆ ಸೇರಿಸಲು ನೆರವಾಗುತ್ತಿದೆ. ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದ (Social Media) ನೆರವಿನಿಂದ ನಾಲ್ಕು ವರ್ಷಗಳ ಹಿಂದೆ ಬೇರೆ ಬೇರೆಯಾಗಿದ್ದ ತಂದೆ-ಮಗಳು (Father-Daughter) ಮತ್ತೆ ಒಂದಾಗಿದ್ದಾರೆ. 2018 ರ ಮಿಸ್ಸಿಂಗ್ ಪ್ರಕರಣವನ್ನು (Missing Case) ಕರೀಂ ನಗರ ಪೊಲೀಸರು ಭೇದಿಸಿದ್ದಾರೆ.
ಬಾಲಕಿ ಪೋಷಕರ ಪತ್ತೆಗೆ ಸಾಮಾಜಿಕ ಜಾಲತಾಣ ಮೊರೆ
ಕರೀಂ ನಗರ ಜಿಲ್ಲೆಯ ಸೈದಾಪುರ ಮಂಡಲದ ಎಗ್ಲಾಸ್ಪುರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಕಿಯನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೋಟ ರಾಜಿರೆಡ್ಡಿ, ತಿರುಪತಿ ರೆಡ್ಡಿ ಎಂಬುವವರು ವಿವರ ಕೇಳಿದಾಗ ಈ ಮಗು ಯಾವುದೇ ಉತ್ತರ ನೀಡಿಲ್ಲ. ಹಾಗಾಗಿ ಈ ವಷಯವನ್ನು ಬರೆದು ವಾಟ್ಸಪ್ ಹಾಗೂ ಫೇಸ್ಬುಕ್ ಮಗುವಿನ ಪೋಷಕರು ಸಿಗುವವರೆಗೂ ಶೇರ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಗಳನ್ನು ಗುರುತಿಸಿದ ತಂದೆ
ಈ ಸಂದೇಶ ವೈರಲ್ ಆಗಿದ್ದು, ವಿದೇಶದಲ್ಲಿದ್ದ ಮಗುವಿನ ತಂದೆ ನೋಡಿದ್ದಾರೆ. ತಾನು ವಿದೇಶದಿಂದ ಬರುತ್ತಿದ್ದು, ತನ್ನ ಮಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದಾದ ಬಳಿಕ ಮಗುವನ್ನು ಕರೀಂನಗರದ ಬಾಲಭವನಕ್ಕೆ ಸ್ಥಳಾಂತರಿಸಲಾಗಿದೆ.
ತಂದೆ-ಮಗಳು ಬೇರೆಯಾಗಲೂ ಕೊರೊನಾ ಕಾರಣ
ಪೊಲೀಸರ ವಿವರಗಳ ಪ್ರಕಾರ, ಆಂಧ್ರಪ್ರದೇಶ ರಾಜ್ಯದಲ್ಲಿ ಶ್ರೀಕಾಕುಳಂ ಜಿಲ್ಲೆಯ ರವಿಚಂದ್ರ ಮತ್ತು ಸುಷ್ಮಾ ದಂಪತಿಗೆ ಮಧು ಎಂಬ ಪುತ್ರ ಹಾಗೂ ಹಾಜಿ ಎಂಬ ಪುತ್ರಿ ಇದ್ದಾರೆ. ರವಿಚಂದ್ರ ಉದ್ಯೋಗ ನಿಮಿತ್ತ ನೈಜೀರಿಯಾಕ್ಕೆ ತೆರಳಿದ್ದರು. 2019 ರಲ್ಲಿ ಪತ್ನಿ ಸುಷ್ಮಾ ಕೊರೊನಾದಿಂದ ನಿಧನರಾದರು. ಆ ಸಮಯದಲ್ಲಿ ಲಾಕ್ ಡೌನ್ ಪರಿಸ್ಥಿತಿಯಿಂದ ರವಿಚಂದ್ರ ನೈಜೀರಿಯಾದಿಂದ ಬರಲು ಸಾಧ್ಯವಾಗಿರಲಿಲ್ಲ. ಮಕ್ಕಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಅತ್ತೆ-ಮಾವನಿಗೆ ಹೇಳಿದ್ದಾರೆ.
ಮಾರಾಟವಾಗಿದ್ದ ಬಾಲಕಿ
ಆದರೆ ಅತ್ತೆ ಮಾವ ಸಣ್ಣಪುಟ್ಟ ವ್ಯಾಪಾರಸ್ಥರಾಗಿದ್ದರಿಂದ ಸಾಲಬಾಧೆಯಿಂದ ಊರು ಬಿಟ್ಟು ಹೋಗಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಮಗು ನಾಪತ್ತೆಯಾಗಿದೆ. ರವಿಚಂದ್ರ ಅವರಿಗೆ ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗದ ಕಾರಣ ಭಾರತಕ್ಕೆ ಬಾರದೆ ಅಲ್ಲೇ ಉಳಿದುಕೊಂಡರು. ಆದರೆ ನಾಪತ್ತೆಯಾಗಿದ್ದ ಬಾಲಕಿ ಹೈದರಾಬಾದ್ನಲ್ಲಿ ಆಂಡಾಳಮ್ಮ ಎಂಬ ಮಹಿಳೆಗೆ ಸಿಕ್ಕಿದೆ. ಆಕೆ ಆ ಮಗುವನ್ನು ಕರೀಂನಗರ ಜಿಲ್ಲೆಯ ಸೈದಾಪುರದ ಭಾಗ್ಯಲಕ್ಷ್ಮಿ ಎಂಬ ಮಹಿಳೆಗೆ ಮಾರಾಟ ಮಾಡಿದ್ದಾಳೆ. ಭಾಗ್ಯಲಕ್ಷ್ಮಿ 15 ದಿನಗಳ ಹಿಂದೆ ಆ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಳು. ಈಕೆ ಸ್ಥಳೀಯ ಸರಪಂಚರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಸರಪಂಚ್ ಮಗುವಿನ ಬಗ್ಗೆ ಪ್ರಶ್ನಿಸಿದಾಗ ಭಾಗ್ಯಲಕ್ಷ್ಮಿ ಅಸಮಂಜಸ ಉತ್ತರ ನೀಡುತ್ತಿದ್ದರಿಂದ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿದೇಶದಿಂದಲೇ ಪೊಲೀಸರನ್ನು ಸಂಪರ್ಕಿಸಿದ ಬಾಲಕಿ ತಂದೆ
ನಂತರ ಬಾಲಕಿಯನ್ನು ಕರೀಂನಗರದ ಭಾಲಭವನದಲ್ಲಿ ಇರಿಸಿದ್ದಾರೆ. ಮತ್ತೊಂದೆಡೆ ಗ್ರಾಮದ ಸರಪಂಚ್ ಮಗುವಿನ ಫೋಟೋಗಳನ್ನು ಫೇಸ್ಬುಕ್ ಮತ್ತು ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಿ ಬಾಲಕಿ ಪೋಷಕರನ್ನು ಪತ್ತೆ ಹಚ್ಚಲು ನೆರವಾಗಿ ಎಂದು ಕೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿ ಫೋಟೋಗಳನ್ನು ನೋಡಿದ ರವಿಚಂದ್ರ ನೈಜೀರಿಯಾದಿಂದ ಕರೀಂನಗರ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಆ ಬಾಲಕಿ ತನ್ನ ಮಗಳೆಂದು ತಿಳಿಸಿದ್ದು, ಕರೆದುಕೊಂಡು ಹೋಗಲು ತಾನೂ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ. ತಾನೂ ಬರುವವರೆಗೂ ಮಗುವನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣ ನಾಲ್ಕು ವರ್ಷಗಳಿಂದ ತನ್ನ ಮಗಳನ್ನು ಕಾಣಲು ಪರಿತಪಿಸುತ್ತಿದ್ದ ತಂದೆಯ ಸಂಕಟವನ್ನು ಪರಿಹರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ