ಚಂಡೀಘಡ (ಪಂಜಾಬ್) : ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ (War of Independence) ಬಗ್ಗೆ ನೀವೆಲ್ಲರೂ ಶಾಲೆಗಳಲ್ಲಿ ಓದಿಯೇ ಇರುತ್ತೀರಿ. 1857 ರಲ್ಲಿ ನಡೆದ ಈ ಸಂಗ್ರಾಮವನ್ನು ಸಿಪಾಯಿ ದಂಗೆ ಎಂತಲೂ ಕರೆಯುತ್ತಿದ್ದರು. ಇದೀಗ, 1857 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಸೈನಿಕರ (Soldier) ಅಸ್ಥಿಪಂಜರಗಳು (Skeleton) ಅಮೃತಸರದ ಬಳಿ ನಡೆದ ಉತ್ಖನನದಲ್ಲಿ ಪತ್ತೆಯಾಗಿವೆ. ಈ ಉತ್ಖನನದಲ್ಲಿ ಒಟ್ಟು 282 ಸೈನಿಕರ ಅಸ್ಥಪಪಂಜರಗಳು ಸಿಕ್ಕಿವೆ ಎಂದು ಪಂಜಾಬ್ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜೆ. ಎಸ್. ಸೆಹ್ರಾವತ್ ತಿಳಿಸಿದ್ದಾರೆ.
1857 ರಲ್ಲಿ, ಭಾರತೀಯ ಸೈನಿಕರು, ತಮಗೆ ಬಳಸಲು ನೀಡುತ್ತಿದ್ದ ಸಿಡಿಮದ್ದುಗಳ ಮೇಲೆ ಹಂದಿ ಮಾಂಸ ಮತ್ತು ದನದ ಕೊಬ್ಬು ಬಳಸಲಾಗುತ್ತಿದ್ದುದರಿಂದ ಅದನ್ನು ಬಳಸುವುದಿಲ್ಲ ಎಂದು ದಂಗೆ ಎದ್ದಿದ್ದರು ಎಂದು ಇತಿಹಾಸ ಹೇಳುತ್ತದೆ.
282 ಭಾರತೀಯ ಸೈನಿಕರ ಅಸ್ಥಿಪಂಜರ ಪತ್ತೆ
“ಈ ಅಸ್ಥಿಪಂಜರಗಳು, 1857 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹತ್ಯೆ ಮಾಡಲ್ಪಟ್ಟ 282 ಭಾರತೀಯ ಸೈನಿಕರಿಗೆ ಸೇರಿವೆ. ಪಂಜಾಬಿನ ಅಮೃತಸರದ ಬಳಿಯ, ಅಜ್ನಾಲದಲ್ಲಿರುವ ಧಾರ್ಮಿಕ ರಚನೆಯೊಂದರ ಕೆಳಗೆ ಕಾಣ ಸಿಕ್ಕಿರುವ ಬಾವಿ ಒಂದರಿಂದ ಇವುಗಳನ್ನು ಉತ್ಖನನ ಮಾಡಲಾಗಿದೆ” ಎಂದು ಸಹಾಯಕ ಪ್ರಾಧ್ಯಾಪಕ ಡಾ. ಜೆ. ಎಸ್. ಸೆಹ್ರಾವತ್ ಮಾಹಿತಿ ನೀಡಿದ್ದಾರೆ.
“ಅಧ್ಯಯನವೊಂದು ಸೂಚಿಸಿರುವ ಪ್ರಕಾರ, ಈ ಸೈನಿಕರು ಹಂದಿ ಮಾಂಸ ಮತ್ತು ದನದ ಕೊಬ್ಬು ಹಚ್ಚಿದ್ದ ಸಿಡಿಮದ್ದುಗಳ ಬಳಕೆಯ ವಿರುದ್ಧ ದಂಗೆ ಎದ್ದಿದ್ದರು. ನಾಣ್ಯಗಳು, ಡಿಎನ್ಎ ಅಧ್ಯಯನ, ಧಾತು ರೂಪದ ವಿಶ್ಲೇಷಣೆ, ಮಾನವಶಾಸ್ತ್ರ, ರೇಡಿಯೋ ಕಾರ್ಬನ್ ಡೇಟಿಂಗ್, ಎಲ್ಲಾ ಅಂಶಗಳು ಅದನ್ನೇ ಸೂಚಿಸುತ್ತಿವೆ” ಎಂದು ಡಾ. ಜೆ. ಎಸ್. ಸೆಹ್ರಾವತ್ ಹೇಳಿದ್ದಾರೆ.
ಸಿಡಿಮದ್ದುಗಳ ಮೇಲೆ ಹಂದಿ ಮಾಂಸ ಮತ್ತು ದನದ ಕೊಬ್ಬು ಬಳಕೆ
ಕೆಲವು ಇತಿಹಾಸಕಾರರು, 1857 ರಲ್ಲಿ ಬ್ರಿಟೀಷರ ವಿರುದ್ಧ ನಡೆದ ಈ ಸಿಪಾಯಿಗಳ ದಂಗೆಯನ್ನು, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರು. ಬ್ರಿಟೀಷ್ ಸೇನೆಯಲ್ಲಿ ಬಳಸಲಾಗುತ್ತಿದ್ದ ಸಿಡಿಮದ್ದುಗಳಿಗೆ ಹಂದಿ ಮತ್ತು ದನದ ಮಾಂಸದ ಕೊಬ್ಬು ಸವರಲಾಗುತ್ತಿತ್ತು. ಅದು ಬ್ರಿಟೀಷರ ಭಾರತೀಯ ಸೇನೆಯಲ್ಲಿ ಸಿಪಾಯಿಗಳಾಗಿ ಸೇರಿಕೊಂಡಿದ್ದ ಹಲವಾರು ಜನರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿತ್ತು. ಆ ಕಾರಣಕ್ಕಾಗಿ ಅವರುಗಳು ತಾವು ಆ ಸಿಡಿಮದ್ದುಗಳ ಬಳಕೆಯನ್ನು ವಿರೊಧಿಸುತ್ತೇವೆ ಎಂದು ದಂಗೆ ಎದ್ದಿದ್ದರು. ಮೊದಲಿಗೆ ಮೀರತ್ನಲ್ಲಿ ಆರಂಭವಾದ ಈ ದಂಗೆ, ಬಳಿಕ ದೆಹಲಿ, ಆಗ್ರಾ, ಕಾನ್ಪುರ ಮತ್ತ ಲಕ್ನೋಗೂ ಹಬ್ಬಿತ್ತು.
ಸುದ್ದಿ ಸಂಸ್ಥೆಯೊಂದು, ಟ್ವಿಟ್ಟರ್ನಲ್ಲಿ ಹಂಚಿಕೊಂಡ ಈ ಸುದ್ದಿಗೆ ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರತಿಕ್ರಿಯೆ
“ನನ್ನ ಭಾರತೀಯ ಸೈನಿಕರನ್ನು ಗೌರವಿಸಿ, ನಿಮ್ಮ ಪ್ರಯತ್ನಗಳಿಗೆ ವಂದನೆಗಳು, ನಮಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ” ಎಂದು ಒಬ್ಬ ನೆಟ್ಟಿಗ ಬರೆದುಕೊಂಡಿದ್ದರೆ, “ಸಾಧ್ಯವಾದರೆ ಅವರಿಗೆ ಅಂತಿಮ ಸಂಸ್ಕಾರ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡುವುದು ನಮ್ಮ ನೈತಿಕ ಕರ್ತವ್ಯ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Sadhguru: ಸದ್ಗುರು ಪ್ರಕಾರ ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ರೈತರೇ ಇರುವುದಿಲ್ಲವಂತೆ! ಯಾಕೆ ಗೊತ್ತೇ?
“ಅವರು ಸ್ವಾತಂತ್ರ್ಯ ಯೋಧರಾಗಿದ್ದರು, ಅವರು ಒಂದು ರೀತಿಯಲ್ಲಿ ಯೋಗಿಗಳಿದ್ದಂತೆ. ಅವರನ್ನು ಕೆಲವು ಪವಿತ್ರ ಸ್ಥಳಗಳಲ್ಲಿ ಹೂಳಬೇಕು” ಎಂದು ಇನ್ನೊಬ್ಬ ನೆಟ್ಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಆ ಸಂಗತಿಗೆ ಬ್ರಿಟೀಷರು ಯಾವಾಗ ಕ್ಷಮೆ ಕೇಳುತ್ತಾರೆ? ನಾಜಿಸಂಗಾಗಿ ಜರ್ಮನಿಯವರು ಇಂದಿಗೂ ಕೂಡ ಕ್ಷಮೆ ಕೇಳುತ್ತಿದ್ದಾರೆ ಎಂದಾದಲ್ಲಿ, ಬ್ರಿಟೀಷರಿಗೆ ಕ್ಷಮೆ ಯಾಚಿಸಲು ಏನು ಅಡ್ಡಿಯಾಗುತ್ತಿದೆ?” ಎಂದು ಇನ್ನೊಬ್ಬ ಸಾಮಾಜಿಕ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ