ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಿವಸೇನೆ ಮತ್ತು ಎನ್ಸಿಪಿಗೆ ಧನ್ಯವಾದಗಳನ್ನು ಹೇಳಬೇಕು ಏಕೆಂದರೆ ನಾವುಗಳು ಖಾಲಿ ಜಾಗಗಳನ್ನು ತುಂಬಲು “ಮಾನವ ಸಂಪನ್ಮೂಲ” ಒದಗಿಸಿದ್ದೇವೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯ ಮಾಡಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಸಂಜಯ್ ರಾವತ್, ಪಂಚಾಯತ್ ರಾಜ್ ಮತ್ತು ಆರೋಗ್ಯ ಇಲಾಖೆಯ ಹೊಸ ಕೇಂದ್ರ ಸಚಿವರಾಗಿರುವ ಕಪಿಲ್ ಪಾಟೀಲ್ ಮತ್ತು ಭಾರತಿ ಪವಾರ್ ಇಬ್ಬರು ಈ ಮೊದಲು ಎನ್ಸಿಪಿಯಲ್ಲಿ ಇದ್ದವರು. ಆನಂತರ ಬಿಜೆಪಿಗೆ ಹಾರಿದವರು. ಸಚಿವ ನಾರಾಯಣ್ ರಾಣೆ ಈ ಹಿಂದೆ ಶಿವಸೇನಾ ಮತ್ತು ಕಾಂಗ್ರೆಸ್ನಲ್ಲಿದ್ದರು ಎಂದಿದ್ದಾರೆ.
ಬುಧವಾರ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರದ ನಾಲ್ವರು ಹೊಸ ಕೇಂದ್ರ ಸಚಿವರಲ್ಲಿ ಮೂವರು ಬಿಜೆಪಿ ಹಿನ್ನೆಲೆಯವರಲ್ಲ ಶಿವಸೇನೆ ಹಾಗೂ ಎನ್ಸಿಪಿಯಿಂದ ವಲಸೆ ಹೋದವರು ಎಂದು ಕೇಂದ್ರ ಸರ್ಕಾರವನ್ನು ಕುಟಿಕಿದ್ದಾರೆ “ಪ್ರಧಾನಿ ಮೋದಿ ಅವರಿಗೆ ಪ್ರಮುಖ ಖಾತೆಗಳನ್ನು ನೀಡಲು ಅವರಲ್ಲಿ ಪ್ರಮುಖ ಅಂಶಗಳನ್ನು ನೋಡಿರಬೇಕು. ಕೇಂದ್ರ ಸಂಪುಟಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಿದ್ದಕ್ಕಾಗಿ ಬಿಜೆಪಿಯು ಶಿವಸೇನೆ ಮತ್ತು ಎನ್ಸಿಪಿಗೆ ಧನ್ಯವಾದ ಹೇಳಬೇಕು” ಎಂದು ರಾವತ್ ಹೇಳಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ನಾರಾಯಣ್ ರಾಣೆ ಅವರಿಗೆ ಹಂಚಿಕೆಯಾಗಿರುವ ಅವರ ಸಚಿವ ಸ್ಥಾನಕ್ಕಿಂತ ಅವರ ಸ್ಥಾನಮಾನ ದೊಡ್ಡದಿದೆ. ನಾರಾಯಣ್ ರಾಣೆ ಅವರು ಈ ಹಿಂದೆ ಪ್ರಮುಖ ಖಾತೆಗಳನ್ನು ಹೊಂದಿದ್ದರು” ಎಂದು ಸಂಸದ ಸಂಜಯ್ ರಾವತ್ ನುಡಿದಿದ್ದಾರೆ.
ಮಹಾರಾಷ್ಟದಲ್ಲಿ ನಮಗೆ ಟಾಂಗ್ ಕೊಡಲು ಕೊಂಕಣ ಪ್ರದೇಶದ ನಾರಾಯಣ್ ರಾಣೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, “ಹೀಗೆ ಹೇಳುವುದು ಕ್ಯಾಬಿನೆಟ್ ಮತ್ತು ಸಂವಿಧಾನವನ್ನು ಅವಮಾನಿಸುವುದಕ್ಕೆ ಸಮ” ಎಂದು ಎಂದಿದ್ದಾರೆ ಸಂಜಯ್ ರಾವತ್.
ನಮ್ಮ ಮಹಾರಾಷ್ಟ್ರದ ನಾಲ್ವರು ಮಂತ್ರಿಗಳಿಗೆ ಉತ್ತಮ ಖಾತೆಗಳು ದೊರೆತಿವೆ. ಎಂಎಸ್ಎಂಇ, ಹಣಕಾಸು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಜನರಿಗೆ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ರಾವತ್ ಹೇಳಿದ್ದು, ಜೊತೆಗೆ ಕೇಂದ್ರ ಸಚಿವ ಸಂಪುಟದಿಂದ ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ನಿರ್ಗಮಿಸಿರುವುದು ನಿಜಕ್ಕೂ ವಿಷಾದಕರ ಸಂಗತಿ.
ಈ ಹಿಂದೆ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿವಸೇನೆ ರಾಜಕೀಯ ಬೆಳವಣಿಗೆಯಲ್ಲಿ ಈಗ ಬಿಜೆಪಿಯ ಕಡು ವಿರೋಧಿಯಾಗಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವಿದೆ.
ಪ್ರತಿ ಹಂತದಲ್ಲೂ ಬಿಜೆಪಿಗೆ ಮಗ್ಗುಲ ಮುಳ್ಳಾಗಿರು ಸಂಜಯ್ ರಾವತ್ ಪ್ರತಿ ಹಂತದಲ್ಲೂ, ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಇವರಿಗೆ ಟಾಂಗ್ ಕೊಡುವ ವ್ಯಕ್ತಿಯನ್ನು ಇಷ್ಟು ದಿನ ಹುಡುಕುತ್ತಿದ್ದ ಬಿಜೆಪಿ ನಾರಾಯಣ್ ರಾಣೆಯವರಿಗೆ ಕೇಂದ್ರದ ನೂತನ ಸಚಿವ ಸಂಪುಟದಲ್ಲಿ ಅವಕಾಶ ಕೊಟ್ಟಿದ್ದು. ಇನ್ನು ಮೇಲೆ ಇವರಿಬ್ಬರ ಮಾತಿನ ಯುದ್ದ ಹೇಗಿರಲಿದೆ ಎಂಬುದೇ ಕುತೂಹಲದ ಅಂಶವಾಗಿದೆ.
ಇದನ್ನೂ ಓದಿ: ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ಆಗಸ್ಟ್ 15 ರಂದು 5 ಸಾವಿರ ಮನೆಗಳ ಹಂಚಿಕೆಗೆ ನಿರ್ಧಾರ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಶಿವರಾಜ್ ಸಿಂಗ್ ಚೌಹ್ಹಾಣ್ ಸರ್ಕಾರ ರಚನೆಗೆ ಕಾರಣರಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ