ಮುಂಬೈ (ಸೆಪ್ಟೆಂಬರ್ 12); ಮುಂದಿನ ವರ್ಷ ಉತ್ತರಪ್ರದೇಶ (Uttar Pradesh) ಮತ್ತು ಗೋವಾದಲ್ಲಿ (Goa) ವಿಧಾನ ಸಭಾ ಚುನಾವಣೆ ನಡೆಯಲಿದೆ. ಈ ಎರಡೂ ರಾಜ್ಯದಲ್ಲಿ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ (BJP) ಸಾಕಷ್ಟು ಕಸರತ್ತು ನಡೆಸುತ್ತಲೇ ಇದೆ. ಈ ನಡುವೆ ಗೋವಾ ಮತ್ತು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯೂ ಸ್ಪರ್ಧಿಸಲಿದೆ ಎಂದು ಘೋಷಿಸುವ ಮೂಲಕ ಪಕ್ಷದ ನಾಯಕ, ಸಂಸದ ಸಂಜಯ್ ರಾವತ್ (Sanjay Raut) ಹೊಸ ಸಂಚಲನ ಮೂಡಿಸಿದ್ದಾರೆ. ಅಲ್ಲದೆ, ಪಶ್ಚಿಮ ಉತ್ತರಪ್ರದೇಶದ ರೈತ ಸಂಘಟನೆಗಳು ತಮ್ಮ ಪಕ್ಷವನ್ನು ಬೆಂಬಲಿಸಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, "ಶಿವಸೇನೆ ಯುಪಿಯಲ್ಲಿ 80 ರಿಂದ 100 ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ (ಯುಪಿ ವಿಧಾನಸಭೆ 403 ಸದಸ್ಯರನ್ನು ಹೊಂದಿದೆ). ಗೋವಾ ವಿಧಾನಸಭೆಯಲ್ಲಿ 20 ಸ್ಥಾನಗಳಲ್ಲಿ ಪಕ್ಷವು ಸ್ಪರ್ಧಿಸಲಿದೆ (ಗೋವಾ 40 ವಿಧಾನಸಭಾ ಸದಸ್ಯರನ್ನು ಒಳಗೊಂಡಿದೆ)" ಎಂದು ತಿಳಿಸಿದ್ದಾರೆ.
"ಪಶ್ಚಿಮ ಯುಪಿಯ ರೈತ ಸಂಘಟನೆಗಳು ಶಿವಸೇನೆಯನ್ನು ಬೆಂಬಲಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿವೆ, ಜೊತೆಗೆ ನಾವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದೇವೆ. ಗೋವಾದಲ್ಲಿ 'ಮಹಾ ವಿಕಾಸ್ ಅಘಾಡಿ'ಯಂತಹ ಮೈತ್ರಿಯನ್ನು ಕಟ್ಟಲು ಪ್ರಯತ್ನಗಳು ನಡೆಯುತ್ತಿವೆ. ನಾವು ಯಶಸ್ವಿಯಾಗುತ್ತೇವೆಯೇ ಎಂದು ನೋಡೋಣ" ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆಯು ಈ ಎರಡು ರಾಜ್ಯಗಳಲ್ಲಿ ತನ್ನ ಕಾರ್ಯಕರ್ತರನ್ನು ಹೊಂದಿದ್ದು, ಗೆಲುವು ಅಥವಾ ಸೋಲನ್ನು ಲೆಕ್ಕಿಸದೆ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ರಾವತ್ ಹೇಳಿದ್ದಾರೆ.
2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ, ಶಿವಸೇನೆ ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಳ್ಳುವ ವಿಷಯದಲ್ಲಿ ತನ್ನ ದೀರ್ಘಕಾಲದ ಮಿತ್ರ ಪಕ್ಷವಾಗಿದ್ದ ಬಿಜೆಪಿಯ ಜೊತೆಗಿನ ಮೈತ್ರಿಯನ್ನು ಕಡಿದು ಹಾಕಿತ್ತು. ಅಲ್ಲಿ, ‘ಮಹಾ ವಿಕಾಸ್ ಅಘಾಡಿ’ ಎಂಬ ಹೊಸ ಮೈತ್ರಿಕೂಟವನ್ನು ರಚಿಸಿ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಿಕೊಂಡಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, "ಅದು ಬಿಜೆಪಿಯ ಆಂತರಿಕ ವಿಷಯ, ಹೊರಗಿನವರು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಅವರು ನನ್ನೊಂದಿಗೆ ರಾಜ್ಯಸಭಾ ಸದಸ್ಯರಾಗಿದ್ದರಿಂದ ರೂಪಾನಿಯವರ ಬಗ್ಗೆ ನನಗೆ ತಿಳಿದಿದೆ" ಎಂದು ಹೇಳಿದ್ದಾರೆ.
"ಕಳೆದ ಬಾರಿ ಬಿಜೆಪಿ ಗುಜರಾತ್ನಲ್ಲಿ ಬಹುಮತವಷ್ಟೇ ಪಡೆಯಲು ಸಾಧ್ಯವಾಯಿತು. ಈ ಬಾರಿ ಅಲ್ಲಿ ಬಿಜೆಪಿಯ ಪರಿಸ್ಥಿತಿ ಚೆನ್ನಾಗಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಪಾತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಠಾಕ್ರೆ ರಾಷ್ಟ್ರೀಯ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ರಾಷ್ಟ್ರೀಯ ನಾಯಕ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ