ನವದೆಹಲಿ(ಮೇ 19): ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಆಹ್ವಾನದ ಮೇರೆಗೆ ದೇಶಕ್ಕೆ ಆರು ದಿನಗಳ ಭೇಟಿ ನೀಡಿರುವ ಈಜಿಪ್ಟ್ನ ಮಹಾ ಮುಫ್ತಿ ಶಾವ್ಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಂ (Shawki Ibrahim Abdel-Karim Allam), ಭಯೋತ್ಪಾದಕ ದಾಳಿ ನಡೆಸುವ ಮುಸ್ಲೀಮರು ಇಸ್ಲಾಂ ಧರ್ಮ ಹಾಗೂ ಬಾಂಧವರಿಗಾಗಿ ಕೆಲಸ ಮಾಡುತ್ತಿಲ್ಲ. ತಮಗಾಗಿ ಇಂತಹ ಅನ್ಯಾಯದ ದಾರಿ ಹಿಡಿದಿದ್ದಾರೆ ಅವರು ವಿವೇಚನಾಶೀಲರಾಗಿಲ್ಲ ಎಂದು ತಿಳಿಸಿದ್ದಾರೆ.
ಫತ್ವಾಗಳ ವಿಷಯದಲ್ಲಿ ಬುದ್ಧಿವಂತರಾಗಿರಬೇಕು
ವಿಭಿನ್ನ ನಂಬಿಕೆಗಳ ನಡುವಿನ ಯಾವುದೇ ವಿಚಾರ ವಿನಿಮಯಗಳು ಬಾಂಧವ್ಯ ನಿರ್ಮಿಸಲು ಭಿನ್ನತೆಗಳು ಮತ್ತು ವೈವಿಧ್ಯತೆಯನ್ನು ಅಳವಡಿಸಿಕೊಳ್ಳಬೇಕು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಮುಸ್ಲಿಮರು ಸಮಕಾಲೀನ ವಾಸ್ತವಗಳಿಗೆ ಹೊಂದಿಕೆಯಾಗದ ಧಾರ್ಮಿಕ ಫತ್ವಾಗಳಿಗೆ ಬಂದಾಗ ವಿವೇಚನಾಶೀಲರಾಗಿರಬೇಕು ಎಂದು ತಿಳಿಸಿದ್ದಾರೆ.
ಈಜಿಪ್ಟ್ನ ದಾರ್ ಅಲ್-ಇಫ್ತಾ, ಇಸ್ಲಾಮಿಕ್ ಸಲಹಾ ಸಂಸ್ಥೆ ಇಂತಹ ಅಧರ್ಮಕಾರಿ ವಿದ್ಯಮಾನವನ್ನು ಕೊನೆಗೊಳಿಸಲು ಮಾನ ಮನಸ್ಕ ವಿದ್ವಾಂಸರನ್ನು ಒಟ್ಟುಗೂಡಿಸುತ್ತಿದೆ ಎಂದು ಶಾವ್ಕಿ ತಿಳಿಸಿದ್ದಾರೆ.
ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದಭಾಗಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ಅಭಿಪ್ರಾಯಗಳನ್ನು ಅರಿತುಕೊಳ್ಳೋಣ
ಭಾರತದ ಬಗೆಗೆ ನಿಮ್ಮ ಕಲ್ಪನೆಗಳೇನು ಮತ್ತು ದೇಶದಲ್ಲಿ ನೀವು ಯಾವ ರೀತಿಯ ಬದ್ಧತೆಗಳನ್ನು ಹೊಂದಲು ಯೋಜಿಸುತ್ತೀರಿ?
ಭಾರತಕ್ಕೆ ಇದು ನನ್ನ ಎರಡನೆಯ ಭೇಟಿಯಾಗಿದೆ ಹಾಗೂ ಐದು ವರ್ಷಗಳ ಹಿಂದೆ ದೆಹಲಿಗೆ ಭೇಟಿ ನೀಡಿದಾಗಿನಿಂದ ಭಾರತವು ದಿಗ್ಭ್ರಮೆಗೊಳಿಸುವ ಅಭಿವೃದ್ಧಿಯನ್ನು ಕಂಡಿದೆ. ಇಲ್ಲಿಗೆ ಭೇಟಿ ನೀಡುವವರು ಯಾರು ಕೂಡ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.
ಭಾರತ ಸರ್ಕಾರವು ಕೈಗೊಂಡ ಹೊಸ ನಗರಾಭಿವೃದ್ಧಿಯೊಂದಿಗೆ ಭಾರತದ ಬುದ್ಧಿವಂತಿಕೆ ಮತ್ತು ಜ್ಞಾನದ ಪ್ರಾಚೀನ ದೃಷ್ಟಿಯ ಅದ್ಭುತ ಅಂಶವನ್ನು ವೈಯಕ್ತಿಕವಾಗಿ ಗಮನಿಸಬಹುದಾಗಿದೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಇತ್ತೀಚಿನ ಭೇಟಿಯು ಭಾರತ ಮತ್ತು ಈಜಿಪ್ಟ್ ನಡುವಿನ ನಿರಂತರವಾಗಿ ಬೆಳೆಯುತ್ತಿರುವ ಮತ್ತು ಬಲವಾದ ದ್ವಿಪಕ್ಷೀಯ ಸಂಬಂಧಕ್ಕೆ ಇನ್ನಷ್ಟು ಬಲವನ್ನು ಒಗ್ಗೂಡಿಸಿದೆ.
ಸವಾಲಿನ ಜಗತ್ತಿನಲ್ಲಿ ಬಾಂಧವ್ಯದ ಸೇತುವೆ ನಿರ್ಮಿಸುವ ಅಗತ್ಯತೆಯ ಕುರಿತು ಅಧ್ಯಕ್ಷ ಸಿಸಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶಗಳ ಮಹತ್ವವನ್ನು ನೀವು ಉಲ್ಲೇಖಿಸಿದ್ದೀರಿ. ಈ ಬಾಂಧವ್ಯವನ್ನು ಹೇಗೆ ಒಗ್ಗೂಡಿಸಬಹುದು?
ಭಾಷೆಗಳು, ಜನಾಂಗಗಳು, ಧರ್ಮಗಳು, ದೃಷ್ಟಿಕೋನಗಳು ಮತ್ತು ಚಿಂತನೆಯ ವಿಷಯದಲ್ಲಿ ನಾವು ದೇವರಿಂದ ವೈವಿಧ್ಯಮಯ ರೀತಿಯಲ್ಲಿ ರಚಿಸಲಾಗಿದೆ ಎಂಬುದನ್ನು ಅರಿತುಕೊಳ್ಳುವುದು ಆರಂಭದ ಹಂತವಾಗಿದೆ. ಇಸ್ಲಾಂನಲ್ಲಿ, ಈ ವೈವಿಧ್ಯತೆಯನ್ನು ದೈವಿಕ ಕೊಡುಗೆಯಾಗಿ ನೋಡಲಾಗುತ್ತದೆ. ಇದನ್ನು ಎಲ್ಲರೂ ಅಳವಡಿಸಿಕೊಂಡು ಮುಂದುವರಿಯಬೇಕು ಎಂದು ಅವರು ತಿಳಿಸಿದ್ದಾರೆ. ಪರಸ್ಪರ ತಿಳಿದುಕೊಳ್ಳುವುದು, ಇತರರ ದ್ವೇಷವನ್ನು ಪೋಷಿಸಲು ಸಹಾಯ ಮಾಡುವ ನಮ್ಮೊಳಗೆ ನಾವು ನಿರ್ಮಿಸಿಕೊಂಡ ವಿವಿಧ ಅಡೆತಡೆಗಳನ್ನು ತೊಡೆದುಹಾಕಬೇಕು.
ಇದನ್ನೂ ಓದಿ: Supreme Court: ಹೆಚ್ಚಿನ ಡಿವೋರ್ಸ್ ಆಗಲು ಲವ್ ಮ್ಯಾರೇಜ್ ಕಾರಣವಂತೆ; ಸುಪ್ರೀಂ ಕೋರ್ಟ್
ದೇವರು ನಮ್ಮನ್ನು ಸೃಷ್ಟಿಸಿರುವ ಉದ್ದೇಶವೇ ಪರಸ್ಪರ ಅರಿತುಕೊಳ್ಳುವುದಾಗಿದೆ. ಪರಸ್ಪರ ತಿಳಿದುಕೊಳ್ಳುವ ಉದ್ದೇಶವನ್ನು ಒತ್ತಿಹೇಳಿದರು. ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ನಿಜವಾದ ಪಾಲುದಾರಿಕೆ ಹಾಗೂ ಸಹಕಾರವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಮನುಷ್ಯ ತನ್ನಷ್ಟಕ್ಕೆ ತಾನೇ ಬದುಕಲಾರ. ಬದಲಾಗಿ, ನಮಗೆ ಮತ್ತು ಮಾನವೀಯತೆಗೆ ಉತ್ತಮವಾದದ್ದನ್ನು ನಾವು ತೊಡಗಿಸಿಕೊಳ್ಳಬೇಕು, ಸಂವಹನ ಮಾಡಬೇಕು ಮತ್ತು ಸಹಕರಿಸಬೇಕು ಎಂದು ಶಾವ್ಕಿ ತಿಳಿಸಿದ್ದಾರೆ.
ಭಾರತೀಯ ಮತ್ತು ಈಜಿಪ್ಟ್ ಸಮಾಜದ ನಡುವಿನ ವ್ಯತ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಉಗ್ರಗಾಮಿ ದೃಷ್ಟಿಕೋನಗಳ ಹಿಂದೆ ಇರುವ ಜನರು ಅಲ್ಪಸಂಖ್ಯಾತರು ಎಂದು ನೀವು ಹೇಳಿದ್ದೀರಿ. ಇವರನ್ನು ಹೇಗೆ ಎದುರಿಸಬಹುದು? ಈ ಭೇಟಿಯ ಸಮಯದಲ್ಲಿ ನೀವು ವಿವಿಧ ಧಾರ್ಮಿಕ ಗುಂಪುಗಳ ಜನರೊಂದಿಗೆ ಮಾತನಾಡುತ್ತೀರಾ?
ಪ್ರಪಂಚದಾದ್ಯಂತ ಧಾರ್ಮಿಕ ಅಧಿಕಾರದ ಬಿಕ್ಕಟ್ಟು ಇದೆ ಎಂಬುದು ತಿಳಿದುಕೊಳ್ಳಬಹುದಾದ ಸಂಗತಿಯಾಗಿದೆ. ದುರದೃಷ್ಟವಶಾತ್, ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಇಸ್ಲಾಂ ಅನ್ನು ಅಧ್ಯಯನ ಮಾಡದ ಮತ್ತು ಇಸ್ಲಾಂನ ಉನ್ನತ ಮೌಲ್ಯಗಳನ್ನು ತಿಳಿದಿಲ್ಲದ ಸ್ವಯಂಘೋಷಿತ ವಿದ್ವಾಂಸರಲ್ಲಿ ಅಲ್ಪಸಂಖ್ಯಾತರಿದ್ದಾರೆ ಎಂದು ಶಾವ್ಕಿ ತಿಳಿಸಿದ್ದಾರೆ.
ಇವರು ಇಸ್ಲಾಂ ಧರ್ಮದ ಹೆಸರಿನಲ್ಲಿ ಮುಸ್ಲಿಮರ ಹೆಸರಿನಲ್ಲಿ ಮಾತನಾಡುತ್ತಾರೆ ಹಾಗೂ ಅಧರ್ಮದ ಕೆಲಸಗಳನ್ನು ಮಾಡುತ್ತಾರೆ. ಇದನ್ನು ತಡೆಯಲು ನಾವು ವಿದ್ವಾಂಸರಾಗಿ, ತೊಡಗಿಸಿಕೊಳ್ಳಲು ಮತ್ತು ಅಂತರವನ್ನು ತುಂಬಲು ವಿಶ್ವಾಸಾರ್ಹ ವಿದ್ವಾಂಸರ ಒಕ್ಕೂಟವನ್ನು ನಿರ್ಮಿಸಲು ಪ್ರಯತ್ನಿಸುತ್ತೇವೆ.
ನಾನು ಜನರೊಂದಿಗೆ ಬೆರೆಯಲು ಬಂದಿದ್ದೇನೆ. ನಾನು ಕೇವಲ ಸ್ಮಾರಕಗಳು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ ಮಾಡಲು ಬಂದಿಲ್ಲ ಎಂದು ತಿಳಿಸಿರುವ ಶಾವ್ಕಿ ಉತ್ತಮ ಭವಿಷ್ಯಕ್ಕಾಗಿ, ಮಾನವೀಯತೆಗಾಗಿ ಮತ್ತು ನಮ್ಮ ಎರಡು ಮಹಾನ್ ರಾಷ್ಟ್ರಗಳಿಗಾಗಿ ನಾವು ಹೊಂದಿರುವ ಏಕೈಕ ಪರಿಹಾರವೆಂದರೆ ಪ್ರಬುದ್ಧ ಸಂವಾದವನ್ನು ತೊಡಗಿಸಿಕೊಳ್ಳುವುದು ಮತ್ತು ನಡೆಸುವುದು ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ. ಘರ್ಷಣೆಗಳು ಮತ್ತು ದ್ವೇಷದ ಭಾಷಣದ ಇತರ ಆಯ್ಕೆಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಾನವೀಯತೆಗೆ ಉಳಿದಿರುವ ಏಕೈಕ ಕಾರ್ಯಸಾಧ್ಯವಾದ ಆಯ್ಕೆಯು ತೊಡಗಿಸಿಕೊಳ್ಳುವುದು, ತಲುಪುವುದು ಮತ್ತು ಪರಸ್ಪರ ಸಹಕಾರವನ್ನು ಪ್ರಾರಂಭಿಸುವುದು ಎಂದು ನಾವು ನಂಬಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಆಧುನಿಕ ವಾಸ್ತವಗಳಿಗೆ ಹೊಂದಿಕೆಯಾಗದ ಅಸ್ಪಷ್ಟ ಧರ್ಮಗುರುಗಳು ನೀಡುವ ಫತ್ವಾಗಳ ಮೇಲೆ ಕೆಲವೊಮ್ಮೆ ಸಮಸ್ಯೆಗಳಿವೆ. ಇದನ್ನು ಹೇಗೆ ಪರಿಹರಿಸಬಹುದು?
ಆಧುನಿಕ ವಾಸ್ತವಗಳನ್ನು ಅರ್ಥಮಾಡಿಕೊಳ್ಳದ ಅಂತಹ ಜನರು ಜನರ ಕಾಳಜಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಂಬಂಧಿತ ಫತ್ವಾಗಳನ್ನು ರಚಿಸಲು ವಿಫಲರಾಗಿದ್ದಾರೆ ಎಂಬುದನ್ನು ಇಲ್ಲಿ ಅಂಗೀಕರಿಸಿಕೊಳ್ಳಲೇಬೇಕು. ಪ್ರಸ್ತುತ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಇಸ್ಲಾಮಿಕ್ ಪಠ್ಯಗಳನ್ನು ಪ್ರಸ್ತುತ ವಾಸ್ತವಗಳಿಗೆ ಸಂಬಂಧಿಸುವುದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಇದರಿಂದ ನಾವು ವಿಶ್ವಾದ್ಯಂತ ಮುಸ್ಲಿಮರಿಗೆ ಕಾರ್ಯಸಾಧ್ಯವಾದ ಪರಿಹಾರಗಳನ್ನು ಸೃಷ್ಟಿಸಬಹುದಾಗಿದೆ. ಇದು ಇಲ್ಲದಿದ್ದರೆ, ಫತ್ವಾಗಳು ದೋಷಪೂರಿತವಾಗಿರುತ್ತವೆ, ದೋಷಗಳಿಂದ ತುಂಬಿರುತ್ತವೆ, ಇದು ಮುಸ್ಲಿಮರ ಜೀವನಕ್ಕೆ ದೋಷವನ್ನುಂಟು ಮಾಡಬಹುದು ಮತ್ತು ಅಪ್ರಸ್ತುತವಾಗುತ್ತವೆ. ಈ ಪ್ರಮುಖ ಮಾನದಂಡಗಳನ್ನು ಪೂರೈಸುವ ಈಜಿಪ್ಟ್ನ ದಾರ್ ಅಲ್-ಇಫ್ತಾದಲ್ಲಿ ನಾವು ಫತ್ವಾಗಳನ್ನು ನೀಡುತ್ತಿದ್ದೇವೆ.
ಸ್ಥಳೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಸಾಮಾಜಿಕ ಶಾಂತಿಯನ್ನು ಸಾಧಿಸುವುದು ಸಂಸ್ಥೆಯ ಉನ್ನತ ಗುರಿಯಾಗಿದೆ. ಈ ಫತ್ವಾಗಳನ್ನು ಹೊರಡಿಸುವ ಸ್ವಯಂಘೋಷಿತ ಧರ್ಮಗುರುಗಳ ಈ ವಿದ್ಯಮಾನವನ್ನು ನಾವು ನೋಡುತ್ತಿದ್ದೇವೆ ಮತ್ತು ಮುಸ್ಲಿಮರ ಪ್ರಸ್ತುತ ವಾಸ್ತವಗಳೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಆದ್ದರಿಂದ ಅವರು ತಮ್ಮ ಸಮಸ್ಯೆಗಳಿಗೆ ತಪ್ಪು ಪರಿಹಾರಗಳನ್ನು ನೀಡುತ್ತಾರೆ ಮತ್ತು ಅವರನ್ನು ಇಸ್ಲಾಂನಿಂದ ದೂರ ತಳ್ಳುತ್ತಾರೆ, ಬದಲಿಗೆ ಅವರನ್ನು ಮೌಲ್ಯಗಳಿಗೆ ಬದ್ಧರಾಗುವಂತೆ ಮಾಡುತ್ತಾರೆ. ಈ ವಿದ್ಯಮಾನವನ್ನು ನಿಗ್ರಹಿಸುವಲ್ಲಿ ನಮಗೆ ಜವಾಬ್ದಾರಿಯಿದೆ ಮತ್ತು ಅದಕ್ಕಾಗಿಯೇ ನಾವು ವಿಶ್ವಾದ್ಯಂತ ಎಲ್ಲಾ ಫತ್ವಾ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ತರಲು ಒಂದೇ ಸಂಸ್ಥೆಯನ್ನು ರಚಿಸಿದ್ದೇವೆ, ಸ್ವಯಂ ಘೋಷಿತ ಜನರು ಫತ್ವಾ ಪ್ರವಚನವನ್ನು ಹೈಜಾಕ್ ಮಾಡುವುದನ್ನು ತಡೆಯಲು ಒಂದು ಸಾಮಾನ್ಯ ಕಾರ್ಯಸೂಚಿಯಾಗಿ ಈ ಸಂಸ್ಥೆ ಕೆಲಸ ಮಾಡುತ್ತದೆ.
ಇಲ್ಲಿ ಮಾಧ್ಯಮ ಕ್ಷೇತ್ರ ಮಹತ್ವದ ಜವಬ್ದಾರಿಯನ್ನು ನಿರ್ವಹಿಸಬೇಕು. ಮಾಧ್ಯಮಗಳು ಇಂತಹವರ ಬಳಿ ಹೋಗಿ ಅಭಿಪ್ರಾಯ ಪಡೆಯಬಾರದು. ಸಾಮಾನ್ಯ ಜನರೂ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪ್ರತಿಯೊಬ್ಬ ಮುಸ್ಲಿಮನು ತಪ್ಪು ವ್ಯಕ್ತಿಯ ಬಳಿಗೆ ಹೋಗುವಲ್ಲಿ ನಿಜವಾಗಿಯೂ ಜಾಗರೂಕರಾಗಿರಬೇಕು. ಪ್ರಸ್ತುತ ನೈಜತೆಗಳನ್ನು ಅರ್ಥಮಾಡಿಕೊಳ್ಳುವ ಉತ್ತಮ ಜನರನ್ನು, ಪ್ರಮಾಣೀಕೃತ ಮತ್ತು ಅಧಿಕೃತ ಜನರನ್ನು ತಲುಪುವ ವಿಷಯದಲ್ಲಿ ಸಾಮಾನ್ಯ ಮನುಷ್ಯನ ಪಾತ್ರ ಕೂಡ ಇದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಈಜಿಪ್ಟ್ನಲ್ಲಿ ಕ್ರಿಶ್ಚಿಯನ್ನರನ್ನು ಮತ್ತು ಪಾಕಿಸ್ತಾನದಲ್ಲಿ ಶಿಯಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ದಾಳಿಗಳು ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನೀವು ಟೀಕಿಸಿದ್ದೀರಿ. ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು ಮತ್ತು ಭಯೋತ್ಪಾದನೆ ಮತ್ತು ಇಸ್ಲಾಮಿಕ್ ನಂಬಿಕೆಯ ಜನರ ನಡುವಿನ ನಕಾರಾತ್ಮಕ ಸಂಪರ್ಕವನ್ನು ಪರಿಹರಿಸಲು ಏನು ಮಾಡಬಹುದು?
ನಿಜವಾದ ಧಾರ್ಮಿಕ ಮೌಲ್ಯಗಳು ಮತ್ತು ಹಿಂಸೆ, ಉಗ್ರವಾದ ಮತ್ತು ಭಯೋತ್ಪಾದನೆಯ ನಡುವೆ ಸಹಯೋಗವಿಲ್ಲ ಇವು ಪರಸ್ಪರ ಸಂಬಂಧ ಹೊಂದಿಲ್ಲ. ಅಲ್ಪಸಂಖ್ಯಾತ ಮುಸ್ಲೀಮರು ಮಾತ್ರವೇ ಭಯೋತ್ಪಾದನ ದಾಳಿಗಳನ್ನು ನಡೆಸುತ್ತಾರೆ. ಇವರು ಎಲ್ಲಾ ಮುಸ್ಲಿಂ ಬಾಂಧವರ ಪರವಾಗಿ ಕೆಲಸ ಮಾಡುವುದಿಲ್ಲ ತಮಗೆ ಬೇಕಾಗಿಯೇ ಕೆಲಸ ಮಾಡುತ್ತಾರೆ. ಒಂದು ರೀತಿಯ ಅನಾರೋಗ್ಯಕರ ಮನಸ್ಥಿತಿಯನ್ನು ಇವರು ಹೊಂದಿರುತ್ತಾರೆ. ಅವರು ಧಾರ್ಮಿಕ ಮೌಲ್ಯಗಳನ್ನು ಸಮಗ್ರ, ಪಾಂಡಿತ್ಯಪೂರ್ಣ ಮತ್ತು ಅಧಿಕೃತ ರೀತಿಯಲ್ಲಿ ಅರ್ಥಮಾಡಿಕೊಳ್ಳದ ಕಾರಣ ಅವರು ಅಂತಹ ಹಿಂಸಾಚಾರವನ್ನು ಆಶ್ರಯಿಸುತ್ತಾರೆ.
ಈ ಸಮಯದಲ್ಲಿ ಇಸ್ಲಾಂ ಮತ್ತು ಎಲ್ಲಾ ಧರ್ಮಗಳನ್ನು ಅರ್ಥಮಾಡಿಕೊಳ್ಳಲು ತಮ್ಮ ಸಂಪೂರ್ಣ ಜೀವನವನ್ನು ಧರ್ಮದ ಅಧ್ಯಯನಕ್ಕೆ ಮುಡಿಪಾಗಿಡುವ ಮತ್ತು ಆಧುನಿಕ ಪ್ರಪಂಚದ ವಾಸ್ತವಗಳನ್ನು ಅಧ್ಯಯನ ಮಾಡುವ ಹಾಗೂ ಧರ್ಮಗಳ ನಡುವೆ ಸೇತುವೆಯನ್ನಾಗಿ ನಿರ್ಮಿಸುವ ವಿದ್ವಾಂಸರ ಅಗತ್ಯವಿದೆ. ವಿದ್ವಾಂಸರಿಗೆ ಈ ವಿಷಯದಲ್ಲಿ ಮಹತ್ತರ ಜವಾಬ್ದಾರಿ ಇದೆ. ಈ ರೀತಿಯ ವಿದ್ಯಮಾನವನ್ನು ನಿಗ್ರಹಿಸಲು ಮತ್ತು ನಿಲ್ಲಿಸಲು ನಾವು ಸಮಾನ ಮನಸ್ಕ ವಿದ್ವಾಂಸರನ್ನು ಒಟ್ಟುಗೂಡಿಸುತ್ತಿದ್ದೇವೆ. ನಮ್ಮ ಗುರಿಯು ಸಮಾಜದ ಒಗ್ಗಟ್ಟು ಮತ್ತು ಸಾಮಾಜಿಕ ಶಾಂತಿಯನ್ನು ಸಾಧಿಸುವುದು ಆಗಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ