ನವದೆಹಲಿ: ದೆಹಲಿಯಲ್ಲಿ (Delhi) ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೇ ಮೇ 28ರಂದು ಸೆಂಟ್ರಲ್ ವಿಸ್ತಾದ (Central Vista) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಲಿದ್ದಾರೆ. ಆದರೆ ನೂತನ ಸಂಸತ್ ಭವನದ ಉದ್ಘಾಟನೆಗೂ ಮೊದಲೇ ಅಪಸ್ವರ ಕೇಳಿ ಬಂದಿದೆ.
ಹೌದು.. ಮೇ 28ರಂದು ನಡೆಯಲಿರುವ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಘೋಷಿಸಿದೆ. ಅದರ ಬೆನ್ನಲ್ಲೇ ನಿನ್ನೆ ಸಂಜೆ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ಸೆಂಟ್ರಲ್ ವಿಸ್ತಾ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡೋದಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ: Hyderabad: ಪಾರ್ಸೆಲ್ ನೀಡಲು ಹೋದಾಗ ನಾಯಿ ದಾಳಿ! 3ನೇ ಮಹಡಿಯಿಂದ ಬಿದ್ದು ಡೆಲಿವರಿ ಬಾಯ್ ಗಂಭೀರ
ರಾಷ್ಟ್ರಪತಿಗೆ ಅವಮಾನ ಮಾಡಲಾಗಿದೆ
ನೂತನ ಸಂಸತ್ ಭವನದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ಮಾಡಿಸಬೇಕಿತ್ತು. ಆದರೆ ರಾಷ್ಟ್ರಪತಿಗೆ ಅವಕಾಶ ಕೊಡದೆ ಅವಮಾನ ಮಾಡಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಂಟ್ರಲ್ ವಿಸ್ತಾ ಉದ್ಘಾಟನೆ ಮಾಡೋದನ್ನು ವಿರೋಧಿಸಿ ಕಾರ್ಯಕ್ರಮ ಬಹಿಷ್ಕಾರ ಮಾಡೋದಾಗಿ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಹೇಳಿಕೊಂಡಿದೆ.
ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ಗಳ ಕುರಿತು ಕೇಂದ್ರ ಸರ್ಕಾರದ ಕಾರ್ಯಕಾರಿ ಆದೇಶದ ಕುರಿತು ವಿರೋಧ ಪಕ್ಷಗಳನ್ನು ತಲುಪುವ ಭಾಗವಾಗಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಆ ನಂತರ ಮಮತಾ ಬ್ಯಾನರ್ಜಿ ಅವರ ದಾರಿಯನ್ನೇ ಹಿಡಿದಿರುವ ಕೇಜ್ರಿವಾಲ್ ತಾವು ಕೂಡ ಸೆಂಟ್ರಲ್ ವಿಸ್ತಾ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡರು.
ಇದನ್ನೂ ಓದಿ: The Kerala Story: ಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ ತನ್ನ ಪ್ರೇಯಸಿಯನ್ನೇ ಅತ್ಯಾಚಾರಗೈದ ಕಿರಾತಕ!
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್, ‘ಸಂಸತ್ತು ಕೇವಲ ಹೊಸ ಕಟ್ಟಡವಲ್ಲ; ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳೊಂದಿಗೆ ಸ್ಥಾಪನೆಯಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದು ಅರ್ಥವಾಗುವುದಿಲ್ಲ. ಅವರಿಗೆ, ಭಾನುವಾರದ ಹೊಸ ಕಟ್ಟಡದ ಉದ್ಘಾಟನೆಯು ನಾನು, ನಾನು, ನನ್ನದೇ ಆಗಿದೆ.’ ಎಂದು ಹೇಳಿದ್ದಾರೆ.
ದಲಿತ ಬುಡಕಟ್ಟು ಮತ್ತು ವಂಚಿತ ಸಮಾಜಕ್ಕೆ ಮಾಡಿದ ಅವಮಾನ
ಇತ್ತ ಈ ಸಂಬಂಧ ಟ್ವೀಟ್ ಮಾಡಿರುವ ಆಮ್ ಆದ್ಮಿ ಮುಖಂಡ ಸಂಜಯ್ ಸಿಂಗ್, ‘ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರನ್ನು ಆಹ್ವಾನಿಸದಿರುವುದು ಅವರಿಗೆ ಮಾಡಿದ ಘೋರ ಅವಮಾನ. ಇದು ಭಾರತದ ದಲಿತ ಬುಡಕಟ್ಟು ಮತ್ತು ವಂಚಿತ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಮೋದಿ ವಿರುದ್ಧ ಪ್ರತಿಭಟಿಸಿ ಆಮ್ ಆದ್ಮಿ ಪಕ್ಷ ಸೆಂಟ್ರಲ್ ವಿಸ್ತಾ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಲಿದೆ’ ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ, ರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿಗಳನ್ನು ಉದ್ಘಾಟನೆಗೆ ಆಹ್ವಾನಿಸದೆ ಸರಕಾರ ಪದೇ ಪದೇ ಅವರಿಗೆ ಅಗೌರವ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ