ತ್ರಿಶೂರ್, ಕೇರಳ: ವಿವಿಧ ಕೊಲೆ ಪ್ರಕರಣಗಳ ಆರೋಪಿ ರಿಪ್ಪರ್ ಜಯನಂದನ್ (Ripper Jayanandan) ಪೆರೋಲ್ (Parole) ಮೇಲೆ ಬಿಡುಗಡೆಯಾಗಿದ್ದಾನೆ. ಜಯನಂದನ್ನನ್ನು ಎರಡು ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಜಯನಂದನ್ಗೆ ಹೈಕೋರ್ಟ್ (High Court) ಪೆರೋಲ್ ಮಂಜೂರು ಮಾಡಿದೆ. ಎರಡು ದಿನಗಳ ಕಾಲ ಪೊಲೀಸ್ (Police) ಸಮ್ಮುಖದಲ್ಲಿ ಜಯನಂದನ್ಗೆ ಪೆರೋಲ್ ನೀಡಲಾಗಿದೆ. ಮಗಳು ಹೈಕೋರ್ಟ್ ವಕೀಲೆಯಾಗಿದ್ದಾರೆ. ತನ್ನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಪತಿಗೆ ಪೆರೋಲ್ ನೀಡುವಂತೆ ಕೋರಿ ಜಯನಂದನ್ ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರ (State Government) ಜಯನಂದನ್ ಪೆರೋಲ್ಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಮಗಳು ತನ್ನ ತಾಯಿಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ವಾದಿಸಿ ಪರೋಲ್ ಸಿಗುವಂತೆ ಮಾಡಿದ್ದಾರೆ. ಕೊನೆಗೆ ನ್ಯಾಯಾಲಯ ಜಯಾನಂದನ್ಗೆ ಎರಡು ದಿನಗಳ ಪೆರೋಲ್ ಮಂಜೂರು ಮಾಡಿದೆ.
ಜಯನಂದನ್ ಮಗಳ ಮದುವೆ ಇಂದು ವಡಕ್ಕುಂನಾಥ ದೇವಸ್ಥಾನದಲ್ಲಿ ನಡೆಯುತ್ತಿದೆ. ಜಯನಂದನ್ ಪೊಲೀಸರೊಂದಿಗೆ ದೇವಸ್ಥಾನಕ್ಕೆ ಬಂದಿದ್ದು, ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ.
24 ಅಪರಾಧ ಪ್ರಕರಣಗಳ ಆರೋಪಿ
ಈಗಾಗಲೆ 17 ವರ್ಷಗಳ ಜೈಲುವಾಸ ಅನುಭವಿಸಿರುವ ರಿಪ್ಪರ್ ಜಯನಂದನ್ ಮೊದಲ ಬಾರಿಗೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾನೆ. ಜಯಾನಂದನ್ ಪುತ್ತನ್ವೇಲಿಕರ ಕೊಲೆ ಪ್ರಕರಣ, ಪೆರಿಂಜನಂ ಪ್ರಕರಣ, ಮಾಲಾ ಜೋಡಿ ಕೊಲೆ ಪ್ರಕರಣ ಸೇರಿದಂತೆ 24 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ರಿಪ್ಪರ್ ಜಯನಂದ್ ಅವರನ್ನು ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿನಲ್ಲಿ ಇರಿಸಲಾಗಿತ್ತು. ಮಹಿಳೆಯರ ತಲೆಗೆ ಹೊಡೆದು ಚಿನ್ನಾಭರಣ ದೋಚುವುದು ಜಯನಂದನ್ ಕೊಲೆ ಮಾಡುವ ವಿಧಾನವಾಗಿತ್ತು.
ಕೀರ್ತಿಗೆ 11 ವರ್ಷವಾಗಿದ್ದಾಗ ಜಯನಂದನ್ ಬಂಧನ
ಜಯನಂದನ್ ಮಗಳು ಕೀರ್ತಿಗೆ 11 ವರ್ಷ ವಯಸ್ಸಾಗಿದ್ದಾಗ ಪೊಲೀಸರು ಬಂಧಿಸಿದ್ದರು. ತ್ರಿಶೂರ್ ಗ್ರಾಮವೊಂದರಲ್ಲಿ ಮೀನುಗಾರನಾಗಿದ್ದ ಜಯನಂದನ್ 2006 ರ ನವೆಂಬರ್ 1ರಂದು ಕೆಲಸಕ್ಕೆ ಹೋಗುತ್ತಿದ್ದಾಗ ಪೊಲೀಸರು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು. ಕೆಲವೇ ದಿನಗಳಲ್ಲಿ, ಕೇರಳದ ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ 2004 ಮತ್ತು 2006 ರ ನಡುವೆ ನಡೆದ ಐದು ಕೊಲೆ ಪ್ರಕರಣಗಳಲ್ಲಿ ಆರೋಪಿ ಎಂದು ಆರೋಪಿಸಲಾಗಿತ್ತು.ಇದೀಗ ಆತ 17 ವರ್ಷಗಳ ಜೈಲು ಶಿಕ್ಷೆ ಅನುಭವಿಸುದ್ದಾನೆ. ಮಾಧ್ಯಮಗಳು ಜಯನಂದನ್ ರಿಪ್ಪರ್ ಜಯನಂದನ್ ಎಂದು ಕರೆದಿವೆ.
ಮೂರು ಪ್ರಕರಣಗಳಲ್ಲಿ ಖುಲಾಸೆ, 2 ರಲ್ಲಿ ಶಿಕ್ಷೆ
ಜಯನಂದನ್ನನ್ನು ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಹಲವು ಬಾರಿ ಹೇಳಿಕೆ ಬಿಡುಗಡೆ ಮಾಡಿದ್ದರು. ಆದರೆ ಜಯನಂದನ್ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗಲೆಲ್ಲಾ ಆತ ಉಲ್ಟಾ ಹೊಡೆಯುತ್ತಿದ್ದ. ಪೊಲೀಸರ ಚಿತ್ರಹಿಂಸೆ ತಾಳಲಾರದೆ ತಪ್ಪೊಪ್ಪಿಕೊಂಡೆ ಎಂದು ಜಯನಂದನ್ ಹೇಳುತ್ತಿದ್ದ. ಇನ್ನೂ ಐದು ಕೊಲೆ ಪ್ರಕರಣಗಳ ಪೈಕಿ ಮೂರರಲ್ಲಿ ಜಯನಂದನನ್ನು ಖುಲಾಸೆಗೊಳಿಸಲಾಗಿದೆ. ಎರಡರಲ್ಲಿ ಜಯನಂದನ್ನಿಗೆ ಶಿಕ್ಷೆಯಾಗಿದೆ. ಒಂದರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ನಂತರ ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಕಡಿತಗೊಳಿಸಿದರೆ, ಸುಪ್ರೀಂ ಕೋರ್ಟ್ 20 ವರ್ಷಕ್ಕೆ ಇಳಿಸಿತ್ತು.
ಕೈತಪ್ಪಿದ ಕ್ಷಮಾದಾನ ಅವಕಾಶ
ಸ್ವಾತಂತ್ರ್ಯೋತ್ಸವ 75ನೇ ವರ್ಷದ ಸಂಭ್ರಮದ ವೇಳೆ ಹಲವಾರು ಖೈದಿಗಳನ್ನು ಬಿಡುಗಡೆ ಮಾಡಿತ್ತು. ಆದರೆ 2004 ರಲ್ಲಿ ನಡೆದಿದ್ದ ಮತ್ತೊಂದು ಕೊಲೆ ಪ್ರಕರಣದಲ್ಲಿ ಜಯನಂದನ್ ಆರೋಪಿಯಾಗಿ 2021 ರಲ್ಲಿ ಸೇರಿಸಲಾಗಿತ್ತು. ಹಾಗಾಗಿ ಸ್ವಾತಂತ್ರ್ಯದ ಸಂದರ್ಭದಲ್ಲಿ ಕ್ಷಮಾದಾನ ಪಡೆಯುವ ಅವಕಾಶವನ್ನು ಕೈತಪ್ಪಿತು ಎಂದು ಹೇಳಲಾಗುತ್ತಿದೆ. ಆ ಸಂದರ್ಭದಲ್ಲಿ ಮುಕ್ಕಾಲು ಭಾಗದಷ್ಟು ಶಿಕ್ಷೆ ಅನುಭವಿಸಿದ ಹಲವಾರು ಕೈದಿಗಳನ್ನು ಬಿಡುಗಡೆಯಾಗಿದ್ದರು.
ಸಿನಿಮಾಗಳೇ ಪ್ರೇರಣೆ
ಜಯನಂದನ್ ಕೇವಲ 8ನೇ ತರಗತಿ ಓದಿದ್ದು, ಸಿನಿಮಾಗಳಲ್ಲಿನ ಹಿಂಸಾತ್ಮಕ ದೃಶ್ಯಗಳಿಂದ ಪ್ರೇರಿತನಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಫಿಂಗರ್ಪ್ರಿಂಟ್ಗಳನ್ನು ತಪ್ಪಿಸಲು ಕೈಗಳಿಗೆ ಸಾಕ್ಸ್ಗಳನ್ನು ಧರಿಸುತ್ತಿದ್ದ. ಸೀಮೆಎಣ್ಣೆ ಎರಚಿ ಗ್ಯಾಸ್ ಸಿಲಿಂಡರ್ ತೆರೆದು ಸಾಕ್ಷಿ ನಾಶಪಡಿಸುವುದು ಜಯನಂದನ್ ವಿಧಾನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈತ 17 ವರ್ಷಗಳ ಜೈಲಿನಲ್ಲಿ ಎರಡು ಬಾರಿ ತಪ್ಪಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ