ನವದೆಹಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ತಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ. ಆದರೆ ಸಾರ್ವಜನಿನ ಜೀವನದಿಂದ ನಿವೃತ್ತಿ ಹೊಂದುವುದಿಲ್ಲ ಎಂದಿರುವ ಶರದ್ ಪವಾರ್, ಎನ್ಸಿಪಿ ಪಕ್ಷದ ಮುಂದಿನ ಮುಖ್ಯಸ್ಥರು ಯಾರು ಅನ್ನೋದನ್ನು ಕೂಡ ಘೋಷಣೆ ಮಾಡಿಲ್ಲ.
ಮುಂಬೈನಲ್ಲಿ ನಡೆದ ತಮ್ಮ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಮಹತ್ವದ ನಿರ್ಧಾರವನ್ನು ಶರದ್ ಪವಾರ್ ಘೋಷಿಸಿದರು. ಈ ವೇಳೆ ಅಚ್ಚರಿಗೊಳಗಾದ ಎನ್ಸಿಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಪ್ರತಿಭಟನೆ ಮಾಡಿದರು. ಇದೇ ವೇಳೆ ಹಲವರು ಬೇಸರದಿಂದ ತಮ್ಮ ನಾಯಕ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವ ನಿರ್ಧಾರಕ್ಕೆ ಭಾವುಕರಾಗಿ ಕಣ್ಣೀರು ಹಾಕಿದರು.
ನಾಲ್ಕು ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಶರದ್ ಪವಾರ್ ಅವರ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ವಿಶೇಷ ಅಂದ್ರೆ ಶರದ್ ಪವಾರ್ ತಮ್ಮ ನಿರ್ಧಾರ ಘೋಷಣೆ ಮಾಡುವ ವೇಳೆ ತಮ್ಮ ಸೋದರನ ಮಗ ಅಜಿತ್ ಪವಾರ್ ಕೂಡ ವೇದಿಕೆಯಲ್ಲಿ ಇದ್ದರು. ಮುಂದೆ ಪಕ್ಷದ ಮುಖ್ಯಸ್ಥರು ಯಾರಾಗುತ್ತಾರೆ ಅನ್ನೋದನ್ನು ಪಕ್ಷದ ಹಿರಿಯ ನಾಯಕರ ಸಮಿತಿ ನಿರ್ಧಾರ ಮಾಡಲಿದೆ ಎಂದು ಶರದ್ ಪವಾರ್ ಹೇಳಿದರು.
ಇದನ್ನೂ ಓದಿ: Mann Ki Baat: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನ 100ನೇ ಸಂಚಿಕೆಯ ಹೈಲೈಟ್ಸ್ ಇಲ್ಲಿದೆ
ಪವಾರ್ ಹೇಳಿದ್ದೇನು?
ತಮ್ಮ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮರಾಠಿಯಲ್ಲಿ ಮಾತನಾಡಿದ ಶರದ್ ಪವಾರ್, ‘ಕಳೆದ ಆರು ದಶಕಗಳಲ್ಲಿ ಮಹಾರಾಷ್ಟ್ರ ಮತ್ತು ನೀವೆಲ್ಲರೂ ನನಗೆ ಅತೀಹೆಚ್ಚು ಬೆಂಬಲ ಮತ್ತು ಪ್ರೀತಿಯನ್ನು ನೀಡಿರುವುದನ್ನು ನಾನು ಮರೆಯಲು ಸಾಧ್ಯವಿಲ್ಲ. ಹೊಸ ಪೀಳಿಗೆಯು ಪಕ್ಷವನ್ನು ಮುನ್ನಡೆಸಲು ಮುಂದಾಗಿರುವ ಕಾರಣ ಅವರಿಗೆ ಮಾರ್ಗದರ್ಶನ ಮಾಡಲು ನನಗೆ ಇದು ಸರಿಯಾದ ಸಮಯವಾಗಿದೆ. ಅಧ್ಯಕ್ಷ ಸ್ಥಾನದ ತೆರವಿನ ನಂತರ ಸೂಕ್ತ ನಾಯಕನ ಆಯ್ಕೆಯನ್ನು ಮಾಡಲು ನಾನು ಎನ್ಸಿಪಿ ಪಕ್ಷದ ಸದಸ್ಯರ ಸಮಿತಿಗೆ ಶಿಫಾರಸು ಮಾಡುತ್ತಿದ್ದೇನೆ. ಪಕ್ಷದ ಮುಖ್ಯಸ್ಥರು ಯಾರಾಗಬೇಕು ಅನ್ನೋದನ್ನು ಆ ಸಮಿತಿ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಇನ್ನು ಶರದ್ ಪವಾರ್ ಅವರು ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶರದ್ ಪವಾರ್ ಅವರನ್ನು ಒತ್ತಾಯಿಸಿದರು. ಅಲ್ಲದೇ ನೀವು ನಿಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳದ ಹೊರತು ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಒತ್ತಾಯ ಮಾಡಿದರು. ಆದರೆ ಆಗ ಶರದ್ ಪವಾರ್ ಅವರು ‘ನಾನು ನಿಮ್ಮೊಂದಿಗೆ ಇರುತ್ತೇನೆ. ಆದರೆ ಎನ್ಸಿಪಿ ಮುಖ್ಯಸ್ಥನಾಗಿ ಅಲ್ಲ ಎಂದು ಭಾವನಾತ್ಮಕವಾಗಿ ಹೇಳಿದಾಗ ಕಾರ್ಯಕರ್ತರು ಗದ್ಗದಿತರಾದರು.
ಇದನ್ನೂ ಓದಿ: SRH vs DC: ಡೆಲ್ಲಿ-ಹೈದರಾಬಾದ್ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್
ಸಮಿತಿಯಲ್ಲಿ ಯಾರ್ಯಾರಿದ್ದಾರೆ
ಶರದ್ ಪವಾರ್ ಅವರು ಘೋಷಿಸಿರುವ ಪಕ್ಷದ ಉನ್ನತ ಮಟ್ಟದ ಸಮಿತಿಯಲ್ಲಿ ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ, ಪಿ ಸಿ ಚಾಕೋ, ನರಹರಿ ಜಿರ್ವಾಲ್, ಅಜಿತ್ ಪವಾರ್, ಸುಪ್ರಿಯಾ ಸುಳೆ, ಜಯಂತ್ ಪಾಟೀಲ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ-ಪಾಟೀಲ್, ಅನಿಲ್ ದೇಶಮುಖ್, ರಾಜೇಶ್ ಟೋಪೆ, ಜಿತೇಂದ್ರ ಅವ್ಹಾದ್, ಹಸನ್ ಮುಶ್ರಿಫ್, ಧನನ್ ಸ್ಥಾನ ಪಡೆದಿದ್ದಾರೆ.
ಶರದ್ ಪವಾರ್ ಅವರ ಅಣ್ಣನ ಮಗ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಿಜೆಪಿಗೆ ಸೇರಲು ಯೋಚನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ಎನ್ಸಿಪಿ ಮುಖ್ಯಸ್ಥರ ಈ ಅಚ್ಚರಿಯ ನಡೆ ಭಾರೀ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ