ಲಕ್ನೋ: ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ನಿವಾಸದ ಹೊರಗೆ ಬಾಂಬ್ ಪತ್ತೆಯಾಗಿದೆ (Bomb Threat) ಎಂಬ ಅಘಾತಕಾರಿ ಸುದ್ದಿಯಿಂದ ಸ್ಥಳದಲ್ಲಿ ಆತಂಕ ಸ್ಥಿತಿ ನಿರ್ಮಾಣವಾಗಿದೆ. ಆದರೆ ಪೊಲೀಸರು, ಬಾಂಬ್ ನಿಷ್ಕ್ರೀಯದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ತಂಡ (Bomb Disposal Squad)ತಪಾಸಣೆ ನಡೆಸಿದೆ. ಪದೇ ಪದೇ ಯೋಗಿ ಆದಿತ್ಯನಾಥ್ ಅವರಿಗೆ ಈ ರೀತಿಯ ಬೆದರಿಕೆಗಳು ಬರುತ್ತಿರುವುದರಿಂದ ಅವರ ನಿವಾಸದ ಸುತ್ತ ಮುತ್ತ ಭದ್ರತೆ ಹೆಚ್ಚಿಸಲಾಗಿದೆ.
ಕಂಟ್ರೋಲ್ ರೂಂಗೆ ಕರೆ
ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಬಾಂಬ್ ಬಗ್ಗೆ ಮಾಹಿತಿ ಲಭಿಸಿದ್ದು, ಮುನ್ನೆಚ್ಚರಿಕೆಯಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ತಿಳಿಸಿದ್ದಾರೆ. ಆದರೆ ತಪಾಸಣೆ ನಡೆಸಿದಾಗ ಸ್ಥಳದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಗಿ ಭದ್ರತೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಹೊರಗೆ ಬಾಂಬ್ ನೋಡಿರುವ ಬಗ್ಗೆ ಮಾಹಿತಿದಾರರು ಕಂಟ್ರೋಲ್ ರೂಮ್ಗೆ ಕರೆ ಮಾಡಿ ಹೇಳಿದ್ದಾರೆ. ಕರೆಗೆ ಸ್ಪಂದಿಸಿದ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ . ಹುಸಿ ಬಾಂಬ್ ಕರೆಯಾದರೂ ಯೋಗಿ ನಿವಾಸ ಸಮೀಪದ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದಾರೆ. ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಮತ್ತೊಂದು ಪೊಲೀಸರ ತಂಡದ ಲಕ್ನೋ ನಗರ ಸುತ್ತ ಗಸ್ತು ತಿರುಗಿ ಅನುಮಾನಸ್ಪದ ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸ್ ಮೂಲಗಳಿಂದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Pulwama Attack: ಇನ್ನೂ ಮಾಸದ ಪುಲ್ವಾಮಾ ದಾಳಿ ಕಹಿನೆನಪು! ಅಲ್ಲಿಂದ ಇಲ್ಲಿವರೆಗೆ ಆಗಿದ್ದೇನು?
ವ್ಯಕ್ತಿಗಾಗಿ ಹುಡುಕಾಟ
ಯೋಗಿ ಆದಿತ್ಯನಾಥ್ ಮನೆಯ ಹೊರಗೆ ಬಾಂಬ್ ಪತ್ತೆಯಾಗಿದೆ ಎಂದು ಹುಸಿ ಬಾಂಬ್ ಕರೆ ಮಾಡಿರುವ ವ್ಯಕ್ತಿಗಾಗಿ ನಮ್ಮ ಪೊಲೀಸ್ ತಂಡ ಹುಡುಕಾಟ ಆರಂಭಿಸಿದೆ. ಯೋಗಿ ಆದಿತ್ಯನಾಥ್ ಅವರಿಗೆ ಇಂತಹ ಬೆದರಿಕೆಗಳು ಹೆಚ್ಚಿರುವ ಕಾರಣ ನಾವು ಪ್ರತಿ ಕರೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಹೀಗಾಗಿ ಈ ಕರೆಯನ್ನು ಸಹಾ ಗಂಭೀರವಾಗಿ ಪರಿಗಣಿಸಲಾಗಿತ್ತು. ಇದೀಗ ಇದು ಸುಳ್ಳು ಕರೆ ಎಂಬುದು ತಿಳಿದುಬಂದಿದ್ದು. ಆ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪತ್ರದ ಮೂಲಕ ಬೆದರಿಕೆ ಕರೆ
ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳಿದ್ದಾಗ ಯೋಗಿ ಆದಿತ್ಯನಾಥ್ ಅವರನ್ನು ಇನ್ನೂ ಮೂರು ದಿನಗಳಲ್ಲಿ ಹತ್ಯೆ ಮಾಡುತ್ತೇವೆ ಎಂದು ಪತ್ರದ ಮೂಲಕ ಬೆದರಿಕೆ ಹಾಕಲಾಗಿತ್ತು. ಗೋ ರಕ್ಷಾ, ಗೋಶಾಲೆ ಅಭಿಯಾನಗಳ ಮೂಲಕ ಗುರುತಿಸಿಕೊಂಡಿರುವ ದೇವೇಂದ್ರ ತಿವಾರಿ ಎಂಬುವವರ ಮನೆಯ ಆವರಣದಲ್ಲಿ ಪತ್ರ ಪತ್ತೆಯಾಗಿದ್ದು, ಅದರಲ್ಲಿ " ಯೋಗಿ ಆದಿತ್ಯನಾಥ್ ಹಲವು ಸ್ತರದ ಭದ್ರತೆ ಹೊಂದಿದ್ದಾರೆ. ಹೀಗಾಗಿ ಇನ್ನೂ ಜೀವ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಯಾವಾಗಲೋ ಅವರ ಕತೆ ಮುಗಿಸುತ್ತಿದ್ದೆವು. ಆದರೆ ಆದಿತ್ಯನಾಥ್ ಅದೆಷ್ಟೇ ಭದ್ರತೆ ಹೊಂದಿದ್ದರೂ, ಬಾಂಬ್ ದಾಳಿಗೆ ಎಲ್ಲವೂ ಭಸ್ಮವಾಗಲಿದೆ. ನೀವೆಲ್ಲಾ ನಮ್ಮ ದಾರಿಗೆ ಅಡ್ಡ ಬರಬೇಡಿ" ಎಂದು ಪತ್ರದಲ್ಲಿ ಎಚ್ಚರಿಸಿಲಾಗಿತ್ತು.
10 ದಿನಗಳ ಅಂತರದಲ್ಲಿ 2ನೇ ಬೆದರಿಕೆ
ಈ ಬೆದರಿಕೆ ಕರೆ ಬರುವ 10 ದಿನಗಳ ಹಿಂದೆಯೂ ಸಹಾ ವಾಟ್ಸ್ಅಪ್ ಸಹಾಯವಾಣಿಗೆ ಯೋಗಿ ಆದಿತ್ಯನಾಥ್ ಹತ್ಯೆ ಮಾಡುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಶಾಹಿದ್ ಎಂಬ ವ್ಯಕ್ತಿ ಜೀವ ಬೆದರಿಕೆ ಸಂದೇಶ ಕಳುಹಿಸಿದ್ದ. ಯೋಗಿ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಆತ ಬೆದರಿಕೆಯೊಡ್ಡಿದ್ದ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ